ಗುರುಪುರ ಕೈಕಂಬ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಲಿಕೊಂಡಿದ್ದ ವಿದ್ಯುತ್ ಕಂಬದ ದುರಸ್ತಿ
Team Udayavani, Feb 12, 2022, 12:55 PM IST
ಕೈಕಂಬ : ಗುರುಪುರ ಕೈಕಂಬದ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿಯ ನಡುವೆ ಇರುವ ರಸ್ತೆ ವಿಭಜಕ (ಡಿವೈಡರ್) ದಲ್ಲಿರುವ ದಾರಿದೀಪದ ಕಂಬವು ತುಂಡಾಗಿ ವಾಲಿದ್ದರ ಆತಂಕ ಹಾಗೂ ಅಪಾಯದ ಬಗ್ಗೆ ಉದಯವಾಣಿ ಸುದಿನ ವರದಿ ಪ್ರಕಟಿಸಿ ಸಂಬಂಧಪಟ್ಟವರ ಗಮನಸೆಳೆದಿತ್ತು. ಈ ಬಗ್ಗೆ ಗಂಜಿಮಠ ಗ್ರಾ.ಪಂ. ಆಡಳಿತವು ಸ್ಪಂದಿಸಿದ್ದು ಜೆಸಿಬಿಯ ಮೂಲಕ ಹಗ್ಗಹಾಕಿ ಎಳೆದು ಅದನ್ನು ನೇರ ಮಾಡಿದೆ. ಇದರಿಂದ ಸಂಭವಿಸಬಹುದಾದ ಅಪಾಯಕ್ಕೆ ಪರಿಹಾರಕಂಡುಕೊಂಡಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯ169ರಲ್ಲಿ ವಾಹನ ಢಿಕ್ಕಿ ಹೊಡೆದ ಪರಿಣಾಮ ಈ ದಾರಿದೀಪದ ಕಂಬವು ವಾಲಿಕೊಂಡಿತ್ತು. ಅಂದಿನ ಕೈಕಂಬ ಮೆಸ್ಕಾಂನ ಸಹಾಯಕ ಎಂಜಿನಿಯರ್ ಮೋಹನ್ ಅವರು ಗಂಜಿಮಠ ಗ್ರಾ.ಪಂ. ಅದನ್ನು ಸರಿಪಡಿಸಬೇಕೆಂದು ಗ್ರಾ.ಪಂ.ಗೆ ಸೂಚಿಸಿದ್ದರು. ಈಗ ಸ್ಥಳೀಯಾಡಳಿತ ದುರಸ್ತಿ ಕಾರ್ಯ ಕೈಗೊಂಡಿದೆ.
ರಾಷ್ಟ್ರೀಯ ಹೆದ್ದಾರಿ 169ನ ರಸ್ತೆ ವಿಭಾಜಕದಲ್ಲಿ ವಾಲಿಕೊಂಡಿರುವ ಕಂಬವನ್ನು ಜೆಸಿಬಿ ಮೂಲಕ ಹಗ್ಗ ಹಾಕಿ ಅದಷ್ಟು ನೇರಮಾಡಲಾಗಿದೆ. ಕಂಬ ಅಪಾಯಕಾರಿಯಾಗಿ ವಾಲಿ, ವಾಹನಗಳಿಗೆ ತೊಂದರೆ ಯಾಗುತ್ತಿತ್ತು. ಕಂಬದ ಬುಡ ಇನ್ನೂ ಸ್ಪಲ್ಪ ವಾಲಿಕೊಂಡಿದ್ದನ್ನು ಸರಿಪಡಿಸಲು ಪ್ರಯತ್ನಿಸಲಾಗಿದೆ. ಆದರೆ ಸಾಧ್ಯವಾಗಿಲ್ಲ. ಗಂಜಿಮಠ ಗ್ರಾ.ಪಂ. ವ್ಯಾಪ್ತಿಯ 4 ವಿದ್ಯುತ್ ಕಂಬಗಳಿಗೆ ಬೀದಿ ದೀಪ ಹಾಕಲು ಶೀಘ್ರ ವ್ಯವಸ್ಥೆ ಮಾಡಲಾಗುವುದು. ಒಂದೆಡೆ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯ ಸೂಚನೆ ಇದೆ ಎಂದು ಗಂಜಿಮಠ ಗ್ರಾ.ಪಂ. ಅಧ್ಯಕ್ಷ ನೋಣಯ್ಯ ಕೋಟ್ಯಾನ್ ತಿಳಿಸಿದ್ದಾರೆ.
ಇದನ್ನೂ ಓದಿ :ಕೊಂಕಣಿ ಭವನ ನಿರ್ಮಾಣಕ್ಕೆ ಶೀಘ್ರ ಶಿಲಾನ್ಯಾಸ :ಕೊಂಕಣಿಯ 42 ಜಾತಿ-ಸಮುದಾಯಗಳ ಕನಸು ನನಸಾಗಲಿ