ಹಜ್ ಯಾತ್ರೆಗೆ ಕೂಡಿಟ್ಟ ಹಣದಿಂದ ನೆರವು ನೀಡಿದ ವ್ಯಕ್ತಿಗೆ ಲಂಡನ್ನಿಂದ ನೆರವು!
Team Udayavani, Jun 25, 2020, 7:44 AM IST
ಬಂಟ್ವಾಳ: ಇಲ್ಲಿನ ಗೂಡಿನಬಳಿಯ ನಿವಾಸಿ ಅಬ್ದುಲ್ ರೆಹಮಾನ್ ಅವರು ಹಜ್ ಯಾತ್ರೆ ಕೈಗೊಳ್ಳುವ ಉದ್ದೇಶದಿಂದ ಕೂಡಿಟ್ಟ
ಹಣದಿಂದ ಲಾಕ್ಡೌನ್ನಿಂದ ತೊಂದರೆಗೊಳಗಾದವರಿಗೆ ನೆರವು ನೀಡಿರುವ ವಿಚಾರವನ್ನು ಮೆಚ್ಚಿ ಲಂಡನ್ನ ವ್ಯಕ್ತಿಯೊಬ್ಬರು ಅಬ್ದುಲ್ ರೆಹಮಾನ್ ಅವರ ಪತ್ನಿಯ ಹಜ್ ಯಾತ್ರೆಗೆ ನೆರವು ನೀಡಿದ್ದಾರೆ.
ಈ ವಿಚಾರವನ್ನು ರೆಹಮಾನ್ ಅವರ ಪುತ್ರ ಇಲ್ಯಾಸ್ ಗೂಡಿನಬಳಿ ಅವರು ಜಾಲತಾಣದಲ್ಲಿ ಹಂಚಿಕೊಂಡಿದ್ದು, ಯೂರೋಪಿನ ಸುದ್ದಿ ವಾಹಿನಿ ಈ ಕುರಿತು ಸುದ್ದಿ ಮಾಡಿತ್ತು. ಅದನ್ನು ಕಂಡ ಲಂಡನ್ನ ಬಿಲಾಲ್ ಚಾವ್ಲಾ ಮಾಂಚೆಸ್ಟರ್ ಎಂಬವರು ಇಲ್ಯಾಸ್ ಅವರನ್ನು ಸಂಪರ್ಕಿಸಿ ನೆರವು ನೀಡುವ ವಿಚಾರ ಪ್ರಸ್ತಾವಿಸಿದ್ದರು ಆರಂಭದಲ್ಲಿ ಅಬ್ದುಲ್ ರೆಹಮಾನ್ ಒಪ್ಪಲಿಲ್ಲ. ಸತತ ಒತ್ತಾಯದ ಬಳಿಕ ತಾಯಿಯ ಹಜ್ ಯಾತ್ರೆಗೆ ಕುರಿತು ಹೇಳಿದ್ದಾರೆ. ಇದಕ್ಕೆ ಚಾವ್ಲಾ ಒಪ್ಪಿ ರೆಹಮಾನ್ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಕೆಸಿಎಫ್ನ ಲಂಡನ್ ಘಟಕದವರಿಗೆ ಈ ವಿಚಾರ ತಿಳಿಸಿದ ಬಳಿಕ ಅವರ ಖಾತೆಗೆ ಹಣ ವರ್ಗಾವಣೆ ಮಾಡಿದ್ದು ಈ ಮೊತ್ತವನ್ನು ಚೆಕ್ ಮೂಲಕ ಕೆಸಿಎಫ್ನ ಸ್ಥಳೀಯ ಸದಸ್ಯರು ರೆಹಮಾನ್ಗೆ ನೀಡಿದ್ದಾರೆ.