ಸಾಗರದಲ್ಲಿ ಆಕ್ಸಿಜನ್ ಸಹಿತ 100ಕ್ಕೂ ಹೆಚ್ಚು ಬೆಡ್ ಸಿದ್ಧ : ಹಾಲಪ್ಪ ಹರತಾಳು
Team Udayavani, Jan 17, 2022, 4:34 PM IST
ಸಾಗರ: ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಕೊರೊನಾ ಮೂರನೇ ಅಲೆ ತಡೆಯಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಆಕ್ಸಿಜನ್ ಒಳಗೊಂಡ 100ಕ್ಕೂ ಹೆಚ್ಚು ಬೆಡ್ಗಳನ್ನು ಸಿದ್ಧಪಡಿಸಲಾಗಿದೆ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದರು.
ಇಲ್ಲಿನ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಭಾನುವಾರ ಆರೋಗ್ಯ ರಕ್ಷಾ ಸಮಿತಿ ಸಭೆ ನಡೆಸಿ, ಕೋವಿಡ್ ಹಿನ್ನೆಲೆಯಲ್ಲಿ ಅಳವಡಿಸಲಾಗಿರುವ ಐಸಿಯು ವಾರ್ಡ್ ಪರಿಶೀಲನೆ ನಡೆಸಿ
ಮಾತನಾಡಿದ ಅವರು, ಜನರು ಕೋವಿಡ್ ನಿಯಂತ್ರಣಕ್ಕೆ ಆಡಳಿತಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದರು. ನೂತನ ಆಕ್ಸಿಜನ್ ಪ್ಲಾಂಟ್ ಕಾಮಗಾರಿ ಪೂರ್ಣಗೊಂಡಿದೆ.
ಜಂಬೋ ಸಿಲಿಂಡರ್ ಸೇರಿದಂತೆ ಎಲ್ಲ ಸಿಲಿಂಡರ್ಗಳು ಸಿದ್ಧವಿವೆ. ಉಪ ವಿಭಾಗೀಯ ಆಸ್ಪತ್ರೆಯಲ್ಲಿ 30 ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಯಾವ ರೀತಿ ಪಾಳಿ ಮೇಲೆ ಕರ್ತವ್ಯ ನಿರ್ವಹಿಸಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಬಂದಗದ್ದೆ, ಜಂಬಗಾರಿನಲ್ಲಿ ಕೋವಿಡ್ ಕೇರ್ ಸೆಂಟರ್ ಸಿದ್ಧವಾಗಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಕೇರ್ ಸೆಂಟರ್ಗಳನ್ನು ತೆರೆಯಲಾಗುತ್ತದೆ. ಹೊಸ ಆಪರೇಷನ್ ಥಿಯೇಟರ್ ಸ್ಥಾಪಿಸಲು ಗಮನ ಹರಿಸಲಾಗಿದೆ. ಜೊತೆಗೆ ಜಾಗದ ಕೊರತೆ ಇದ್ದು, ಸರ್ಕಾರದ ಜೊತೆ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದರು.
ತಾಲೂಕು ಆರೋಗ್ಯಾ ಧಿಕಾರಿ ಡಾ| ಮೋಹನ್ ಕೆ.ಎಸ್. ಮಾತನಾಡಿ, ತಾಲೂಕಿನಲ್ಲಿ ಕೋವಿಡ್ ಕೇಸ್ ಜ. 13ರಂದು 38, ಜ. 14ರಂದು 40, ಜ. 15ರಂದು 45 ಪ್ರಕರಣ ದಾಖಲಾಗಿದೆ.
ಪ್ರಕರಣ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದರೂ ಹಿಂದಿನ ವರ್ಷದಷ್ಟು ಗಂಭೀರ ಪ್ರಕರಣ ಕಂಡು ಬಂದಿಲ್ಲ. ಜನವರಿ ತಿಂಗಳಿನಲ್ಲಿ ಈತನಕ ಒಟ್ಟು 202 ಕೋವಿಡ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 192 ಜನ ಹೋಂ ಕ್ವಾರಂಟೈನ್ ನಲ್ಲಿದ್ದು, 10 ಜನ ಗುಣಮುಖರಾಗಿದ್ದಾರೆ. ಆಸ್ಪತ್ರೆಯಲ್ಲಿ ಕೆಲವರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು ಪ್ರಕರಣದಲ್ಲಿ
ಶೇ. 25 ಮಕ್ಕಳಿದ್ದಾರೆ. ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚು ಕೋವಿಡ್ ಪ್ರಕರಣ ಬಂದಿರುವಲ್ಲಿ ಕಂಟೈನ್ನ್ಮೆಂಟ್ ಜೋನ್ ಮಾಡಲಾಗಿದೆ ಎಂದರು.
ಸಿವಿಲ್ ಸರ್ಜನ್ ಡಾ| ಪ್ರಕಾಶ್ ಬೋಸ್ಲೆ ಮಾತನಾಡಿ, ಮೂರನೇ ಅಲೆ ಪ್ರಾರಂಭವಾದ ಮೇಲೆ ಆಸ್ಪತ್ರೆಗೆ ಬರುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಸಾರ್ವಜನಿಕರು ಹೆಚ್ಚು ಜಾಗ್ರತೆಯಿಂದ ಇರಬೇಕು. ಆಸ್ಪತ್ರೆಯಲ್ಲಿ 13 ಜನ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದು, ಯಾರೂ ಗಂಭೀರ ಸ್ವರೂಪದಲ್ಲಿ ಇಲ್ಲ. ಹರಡುವಿಕೆ ಜಾಸ್ತಿಯಿದ್ದು, ಅಪಾಯ ಕಡಿಮೆ ಇದೆ. ಮಕ್ಕಳಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುತ್ತಿದೆ. ನುರಿತ ವೈದ್ಯರು ನಮ್ಮಲ್ಲಿದ್ದು ಯಾವುದೇ ತೊಂದರೆ ಇಲ್ಲ. ಸರ್ಕಾರದ ಹೊಸ ಮಾರ್ಗಸೂಚಿಯಡಿ ಸಣ್ಣಪುಟ್ಟ ತೊಂದರೆ ಇದ್ದವರು ಆಸ್ಪತ್ರೆಗೆ
ಬರುವುದು ಬೇಡ. ಅಗತ್ಯ ಇದ್ದವರು ಮಾತ್ರ ಆಸ್ಪತ್ರೆಗೆ ಬನ್ನಿ ಎಂದು ತಿಳಿಸಿದರು.
ಸಹಾಯಕ ಆಯುಕ್ತ ಡಾ| ನಾಗರಾಜ್ ಎಲ್., ಡಾ| ನಾಗೇಂದ್ರಪ್ಪ, ಡಾ| ಪರಪ್ಪ, ಡಾ| ಹರೀಶ್, ಡಾ| ಶಾಂತಲಾ, ಡಾ| ಪ್ರತಿಮಾ, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ. ಮಹೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಜ್ಯೋತಿ ಎಂ.ಕೆ., ಕೃಷ್ಣ ಶೇಟ್, ವಿನೋದ್ ರಾಜ್, ಸಂಜಯ್ ಕುಮಾರ್, ಸುರೇಶ್ ಕಂಬಳಿ, ಸಬ್ ಇನ್ಸ್ಪೆಕ್ಟರ್ ತುಕಾರಾಮ್ ಸಾಗರ್ಕರ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ. ನಾಗಪ್ಪ, ಆರೋಗ್ಯ ಇಲಾಖೆ ನೌಕರರ ಒಕ್ಕೂಟದ ವೈ.ಮೋಹನ್ ಇನ್ನಿತರರು ಇದ್ದರು.