ಹೆಬ್ಬಾರ ಮತ್ತೆ ಗೆಲುವಿನ ಸರದಾರ
Team Udayavani, Dec 10, 2019, 3:07 AM IST
ಕಾರವಾರ: ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಮಲ ಅರಳಿದೆ. ಕೈ ಪಕ್ಷ ಗಣನೀಯ ಮತಗಳನ್ನು ಪಡೆದಿದೆ. ಗೆಲುವು ಬಿಜೆಪಿಯದಾಗಿದ್ದು, ಕಾಂಗ್ರೆಸ್ ಸೋಲೊಪ್ಪಿಕೊಂಡಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಿವರಾಮ ಹೆಬ್ಬಾರ ಮಾತೃಪಕ್ಷದಿಂದ ಶಾಸಕರಾಗಿ ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸಿದ್ದಾರೆ.
ಹೆಬ್ಬಾರ ಜೊತೆ ಅವರ ಅಭಿಮಾನಿ ಬಳಗವೇ ಗೆಲುವಿಗೆ ದುಡಿದಿತ್ತು. ಜೊತೆಗೆ ಬಿಜೆಪಿಯ ಕಾರ್ಯಕರ್ತರ ಶಕ್ತಿ ಹಾಗೂ 2018ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕೇವಲ 1483 ಮತಗಳ ಅಂತರದಿಂದ ಸೋತಿದ್ದ ಮಾಜಿ ಶಾಸಕ ವಿ.ಎಸ್.ಪಾಟೀಲ ಸಹ ಹೆಬ್ಬಾರ ಜೊತೆ ನಿಂತರು. ಯಡಿಯೂರಪ್ಪ ಬನವಾಸಿ ಮತ್ತು ಮುಂಡಗೋಡಗೆ ಎರಡು ಸಲ ಬಂದು ಹೆಬ್ಬಾರರಿಗೆ ಮತ ನೀಡಿ. ಮಂತ್ರಿ ಮಾಡ್ತೀನಿ ಎಂಬ ಭರವಸೆ ಹೆಬ್ಬಾರ ಗೆಲುವಿನ ಹಾದಿ ಸುಗಮ ಮಾಡಿದವು.
ಛಲ ಬಿಡದ ಹೆಬ್ಬಾರ: ಹೆಬ್ಬಾರರು ಬಿಜೆಪಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಕೆಲಸ ಮಾಡಿದವರು. 18 ವರ್ಷಗಳ ಹಿಂದೆ ಬಿಜೆಪಿಯಲ್ಲಿ ಕ್ರಿಯಾಶೀಲರಾಗಿ ಪಕ್ಷ ಕಟ್ಟಿದವರು. ಆಗಿನ ಬಿಜೆಪಿಯ ಆಂತರಿಕ ಒತ್ತಡ ಮತ್ತು ಭಿನ್ನಾಭಿಪ್ರಾಯದಿಂದ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿ ಯಲ್ಲಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಮೊದಲ ಯತ್ನದಲ್ಲಿ ಸೋತರು. ಛಲ ಬಿಡದೆ 2013 ಮತ್ತು 2018ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಅವರು ಬನವಾಸಿ ಭಾಗದಲ್ಲಿ ಮಾಡಿದ ನೀರಾವರಿ ಕಾಮಗಾರಿಗಳು, ಉತ್ತಮ ರಸ್ತೆಗಳು ಇದೀಗ ಮುಗಿದ ಉಪ ಚುನಾವಣೆಯಲ್ಲಿ ನೆರವಿಗೆ ಬಂದವು. ಮಂತ್ರಿ ಮಾಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ಕಾಂಗ್ರೆಸ್ಗೆ ವಿದಾಯ ಹೇಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹ ಎಂಬ ಪಟ್ಟಿ ಕಟ್ಟಿಕೊಂಡರು. ಸುಪ್ರೀಂ ಕೋರ್ಟ್ನಲ್ಲಿ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿದ್ದೇ ತಡ ಬಿಜೆಪಿಯಿಂದ ಟಿಕೆಟ್ ಪಡೆದು ಸ್ಪರ್ಧಿಸಿದರು. ಬಿಜೆಪಿಗರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಈಗ ಗೆಲುವು ಸಾಧಿಸಿದರು. ಮಂತ್ರಿ ಪದವಿ ಮತ್ತು ಅಭಿವೃದ್ಧಿ ಜಪ ಶಿವರಾಮ ಹೆಬ್ಬಾರರನ್ನು ಮತ್ತೆ ವಿಧಾನ ಸಭೆಗೆ ಕಳಿಸಲು ನೆರವಾಗಿವೆ.
ಗೆದ್ದವರು
ಶಿವರಾಮ ಹೆಬ್ಬಾರ (ಬಿಜೆಪಿ)
ಪಡೆದ ಮತ: 80442
ಗೆಲುವಿನ ಅಂತರ: 31408
ಸೋತವರು
ಭೀಮಣ್ಣ ನಾಯ್ಕ (ಕಾಂಗ್ರೆಸ್)
ಪಡೆದ ಮತ: 49034
ಚೈತ್ರಾಗೌಡ(ಜೆಡಿಎಸ್)
ಪಡೆದ ಮತ: 1,235
ಗೆದ್ದದ್ದು ಹೇಗೆ?
-2013ರಿಂದ 2017ರಲ್ಲಿ ಬನವಾಸಿ ಮತ್ತು ಯಲ್ಲಾಪುರದಲ್ಲಿ ಮಾಡಿದ ಕೆಲಸ. ಬಿಜೆಪಿಯ ಸಂಘಟಿತ ಯತ್ನ
-ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ಗಿಂತ ಮುಂದೆ ಇದ್ದುದು. ಹೆಬ್ಬಾರರ ವಿರುದ್ಧ ಅನರ್ಹ ಪದ ಬಳಕೆ ಮಾಡಿದ್ದು
-ಋಣಾತ್ಮಕ ಅಂಶ ವಿರೋಧಿಗಳು ಬಳಸಿದ್ದರಿಂದ ಮೂಲ ಬಿಜೆಪಿಗರು ಹಠಕ್ಕೆ ಬಿದ್ದು, ಗೆಲುವಿಗೆ ಶ್ರಮಿಸಿದರು
ಸೋತದ್ದು ಹೇಗೆ?
-ಕಾಂಗ್ರೆಸ್ನಲ್ಲಿ ಸಂಘಟಿತ ಪ್ರಚಾರ, ಹೋರಾಟದ ಮನೋಭಾವದ ಕೊರತೆ ಇತ್ತು
-ಆರ್ಥಿಕ ಸಂಪನ್ಮೂಲದ ಕೊರತೆ ಹಾಗೂ ಇದ್ದ ಸಂಪನ್ಮೂಲವನ್ನು ಸರಿಯಾಗಿ ಹಂಚದೇ ಇದ್ದುದು
-ಭೀಮಣ್ಣ ನಾಯ್ಕ ಶಿರಸಿ ಯವರು, ಆಯ್ಕೆಯಾದರೂ ಸಚಿವರಾಗುವ ಸಾಧ್ಯತೆಯಿಲ್ಲ ಎಂಬ ಭಾವನೆ ಮತದಾರರಲ್ಲಿತ್ತು
ಡಿ.9ರಂದು 11 ಗಂಟೆ ತನಕ ನಾನು ಅನರ್ಹ ನಾಗಿದ್ದೆ. ನಾನು ಅರ್ಹ ಎಂದು ಮತದಾರರು ತೀರ್ಪು ನೀಡಿದ್ದಾರೆ. ಮಾಜಿ ಸ್ಪೀಕರ್ ರಮೇಶ ಕುಮಾರ್ ಅವರೇ ಈ ಕ್ಷಣದಿಂದ ಅನರ್ಹ ಎಂದು ಮತದಾರರು ಹೇಳಿದ್ದಾರೆ.
-ಶಿವರಾಮ ಹೆಬ್ಬಾರ್, ಬಿಜೆಪಿ ವಿಜೇತ ಅಭ್ಯರ್ಥಿ
ಮತದಾರರ ತೀರ್ಮಾನ ಗೌರವಿ ಸುತ್ತೇನೆ. 49000ಕ್ಕೂ ಹೆಚ್ಚು ಮತ ದಾರರು ನೀಡಿದ್ದಾರೆ. ಎಲ್ಲ ಮತ ದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬಿಜೆಪಿ ಅಭ್ಯರ್ಥಿಗೆ ಅಭಿನಂದನೆ ಸಲ್ಲಿಸುತ್ತೇನೆ.
-ಭೀಮಣ್ಣ ನಾಯ್ಕ, ಕೈ ಪರಾಜಿತ ಅಭ್ಯರ್ಥಿ