ಗುಂಡ್ಮಿ; ಹೋಮ್ ಕ್ವಾರೆಂಟೈನ್ನಿಂದ ಬೇಸರಗೊಂಡು ಬಾಲಕ ಆತ್ಮಹತ್ಯೆ
Team Udayavani, Jul 7, 2020, 8:56 PM IST
ಕೋಟ: ಹೋಮ್ ಕ್ವಾರೆಂಟೈನ್ನಿಂದ ಬೇಸರಗೊಂಡು ಬಾಲಕ ಆತ್ಮಹತ್ಯೆಗೆ ಶರಣಾದ ಘಟನೆ ಸಾಲಿಗ್ರಾಮ ಸಮೀಪದ ಗುಂಡ್ಮಿ ಮಾಣಿಕಟ್ಟಿನಲ್ಲಿ ಜು.6ರಂದು ಸಂಭವಿಸಿದೆ. ಇಲ್ಲಿನ ಸ್ಥಳೀಯ ನಿವಾಸಿ ಕೋಟ ವಿವೇಕ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಕಾರ್ತಿಕ್(15) ಆತ್ಮಹತ್ಯೆಗೆ ಶರಣಾದ ಬಾಲಕ.
ಈತನ ತಾಯಿ ಚೇಂಪಿಯಲ್ಲಿ ಮನೆ ಕೆಲಸಕ್ಕೆ ಹೋಗುತ್ತಿದ್ದು ಮನೆ ಮಾಲಕನಿಗೆ ಕೋವಿಡ್ ಪಾಸಿಟಿವ್ ಕಂಡುಬಂದಿತ್ತು. ಹೀಗಾಗಿ ಪ್ರಥಮ ಸಂಪರ್ಕದ ಮೇರೆಗೆ ಮನೆಕೆಲಸದಾಕೆ ಮತ್ತು ಆಕೆಯ ಮನೆಯವರನ್ನು ಹೋಮ್ ಕ್ವಾರೆಂಟೈನ್ನಲ್ಲಿರಲು ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಮಗನಿಗೆ ಮನೆಯಿಂದ ಹೊರಗಡೆ ಹೋಗದಂತೆ ತಾಯಿ ಬುದ್ಧಿ ಮಾತು ಹೇಳಿದ್ದಳು. ಆದರೆ ಬಾಲಕ ತಾನು ಆಟವಾಡಲು ಮನೆಯಿಂದ ಹೊರಹೋಗಬೇಕು ಎಂದು ಹಠಹಿಡಿಯುತ್ತಿದ್ದು ಸಂಜೆ ವೇಳೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಯುವಕ ಚುರುಕಿನ ಸ್ವಭಾವದವನಾಗಿದ್ದು ಮೊನ್ನೆಯಷ್ಟೇ ಎಸೆಸೆಲ್ಸಿ ಪರೀಕ್ಷೆ ಪೂರೈಸಿದ್ದ. ಮನೆಯವರಿಗೆ ಕೋವಿಡ್ ಬಾಧಿಸಲಿದೆ ಎಂದು ಹೆದರಿ ಅಥವಾ ಮನೆಯಿಂದ ಹೊರಬಿಡುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸರಗೊಂಡು ಈ ರೀತಿ ಕೃತ್ಯಕ್ಕೆ ಶರಣಾಗಿದ್ದಾನೆ ಎನ್ನಲಾಗಿದೆ.
ಮರಣೋತ್ತರ ಪರೀಕ್ಷೆ ವಿಳಂಬ:
ಹೋಮ್ ಕ್ವಾರಂಟೈನ್ನಲ್ಲಿರುವ ಕಾರಣಕ್ಕೆ ಹೆಚ್ಚಿನ ತಪಾಸಣೆ ಅಗತ್ಯವಿರುವುದರಿಂದ ಮಂಗಳವಾರ ಅಪರಾಹ್ನದ ತನಕ ಮರಣೋತ್ತರ ಪರೀಕ್ಷೆ ನಡೆಸಲು ಅಸಾಧ್ಯವಾಗಿತ್ತು ಹಾಗೂ ಅಪರಾಹ್ನ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿ ಕೈ ಸೇರಿದ ಬಳಿಕ ಮರಣೋತ್ತರ ಪರೀಕ್ಷೆ ಮುಂತಾದ ಪ್ರಕ್ರಿಯೆ ನಡೆಯಬೇಕಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.