ಐಎಂಎ ಪ್ರಕರಣ ಮುಚ್ಚಿ ಹಾಕಲು ಯತ್ನ! ಸಿಬಿಐನಿಂದ ಮತ್ತೂಂದು ಆರೋಪಪಟ್ಟಿ ಸಲ್ಲಿಕೆ
Team Udayavani, Oct 18, 2020, 6:00 AM IST
ಬೆಂಗಳೂರು: ಐಎಂಎ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಕೋರ್ಟಿಗೆ ಮತ್ತೂಂದು ಪ್ರಾಥಮಿಕ ಆರೋಪಪಟ್ಟಿ ಸಲ್ಲಿಸಿದ್ದು, ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಉಲ್ಲೇಖೀಸಲಾಗಿದೆ.
ಆರೋಪಿ ಮನ್ಸೂರ್ ಸೇರಿ 28 ಮಂದಿ ವಿರುದ್ಧ ಆರೋಪಪಟ್ಟಿಸಲ್ಲಿಸಿದ್ದು, ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಹೆಸರುಗಳನ್ನೂ ಉಲ್ಲೇ ಖೀಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕೆಪಿಐಡಿ ಕಾಯ್ದೆ ಉಲ್ಲೇಖೀಸಿಲ್ಲ
ಸಾವಿರಾರು ಗ್ರಾಹಕರು ಹಣ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದರು. ಸ್ಥಳೀಯ ಪೊಲೀಸರು ಕೆಪಿಐಡಿ ಕಾಯ್ದೆ ಅಡಿ ಪ್ರಕರಣ ದಾಖಲಿಸಿಲ್ಲ. ಅಲ್ಲದೆ, ಕಂದಾಯ ಅಧಿಕಾರಿಗಳು ಸಹ ಸೂಕ್ತ ರೀತಿಯಲ್ಲಿ ತನಿಖೆ ನಡೆಸದೆ ಆರೋಪಿ ಪರವಾಗಿಯೇ ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಬಳಿಕವೂ ಸಾವಿರಾರು ಕೋ. ರೂ. ಹಣ ವಸೂಲಿ ಮಾಡಿ ವಂಚಿಸಿದ್ದಾನೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ.
ಕರ್ತವ್ಯ ಲೋಪ
ಆರ್ಬಿಐ 2016 ಆ. 12ರಂದು ರಾಜ್ಯ ಡಿಜಿಪಿಗೆ ಪತ್ರ ಮೂಲಕ ಐಎಂಎ ಬಗ್ಗೆ ನಿಗಾ ವಹಿಸಿ ತನಿಖೆ ನಡೆಸುವಂತೆ ಸೂಚಿಸಿತ್ತು. ಆಗ ಪೂರ್ವ ವಿಭಾಗದ ಡಿಸಿಪಿಯಾಗಿದ್ದ ಅಜಯ್ ಹಿಲೋರಿ ಮೂಲಕ ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ ರಮೇಶ್ಗೆ ಈ ಪತ್ರವನ್ನು ರವಾನಿಸಲಾಗಿತ್ತು. ಅದರೆ, ಸರಿಯಾಗಿ ತನಿಖೆ ನಡೆಸದೆ, ಕಂಪೆನಿ ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿದೆ ಎಂದು ರಮೇಶ್ ಅವರು ಡಿಸಿಪಿ ಅಜಯ್ ಹಿಲೋರಿಗೆ ವರದಿ ನೀಡಿದ್ದರು. 2016ರ ಆ.29ರಂದು ರಮೇಶ್ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು.
2018ರ ಜು.4ರಂದು ಕೆಪಿಐಡಿ ಕಾಯ್ದೆ- 2004ರ ಅಡಿ ಐಎಂಎ ಕಂಪೆನಿ ವಿರುದ್ಧ ತನಿಖೆ ನಡೆಸಲು ಡಿಜಿಪಿ ಅವರು ಸಿಐಡಿ- ಇಒಡಬ್ಲೂಗೆ ನಿರ್ದೇಶಿಸಿದ್ದು, ಡಿವೈಎಸ್ಪಿ ಶ್ರೀಧರ್ ಅವರನ್ನು ತನಿಖಾಧಿಕಾರಿ ಯಾಗಿ ನೇಮಿಸಲಾಗಿತ್ತು. ಇವರು 2019ರ ಜ.1 ರಂದು ಐಎಂಎ ಕಂಪೆನಿಗೆ ಕ್ಲೀನ್ ಚಿಟ್ ಕೊಟ್ಟಿ ದ್ದರು. ಆಗಿನ ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್, ಐಎಂಎಯಿಂದ ಯಾವುದೇ ತಪ್ಪಾಗಿಲ್ಲ ಎಂದು ವರದಿ ಸಲ್ಲಿಸಿದ್ದರು ಎಂದು ಸಿಬಿಐ ತಿಳಿಸಿದೆ.