India-Sri Lanka: ಭಾರತ-ಶ್ರೀಲಂಕಾ ನಡುವೆ ಹಡಗು ಸೇವೆ ಪುನರಾರಂಭ
ಸಂಪರ್ಕ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
Team Udayavani, Oct 14, 2023, 5:57 PM IST
ನವದೆಹಲಿ: 40 ವರ್ಷಗಳ ನಂತರ ಭಾರತ ಮತ್ತು ಶ್ರೀಲಂಕಾ ನಡುವೆ ಹಡಗು ಸೇವೆ ಪುನರಾರಂಭಗೊಂಡಿದೆ. ಈ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದರು.
ಶ್ರೀಲಂಕಾದಲ್ಲಿ ಆಂತರಿಕ ಯುದ್ಧದ ಹಿನ್ನೆಲೆಯಲ್ಲಿ 40 ವರ್ಷಗಳ ಹಿಂದೆ ಹಡಗು ಸೇವೆಯನ್ನು ಭಾರತ ಸ್ಥಗಿತಗೊಳಿಸಿತ್ತು. ಉಭಯ ದೇಶಗಳ ನಡುವೆ ಪುನರಾರಂಭಗೊಂಡಿರುವ ಹಡಗು ಸೇವೆಯನ್ನು ಸ್ವಾಗತಿಸಿದ ಶ್ರೀಲಂಕಾ ಅಧ್ಯಕ್ಷ ರಾಣಿಲ್ ವಿಕ್ರಮಸಿಂಘೆ, “ಇದು ಎರಡು ದೇಶಗಳ ನಡುವೆ ಸಂಪರ್ಕ, ವ್ಯಾಪಾರ ಮತ್ತು ಸಂಸ್ಕೃತಿಯ ಕೊಂಡಿಗಳು ಸುಧಾರಣೆಗೊಳ್ಳಲು ಸಹಕಾರಿಯಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಗಪಟ್ಟಣಂ-ಕಂಕಸುತರೈ ನಡುವೆ ಸಂಪರ್ಕ
ಈ ಹಡಗು ಸೇವೆಯು ತಮಿಳುನಾಡಿನ ನಾಗಪಟ್ಟಣಂನಿಂದ ಶ್ರೀಲಂಕಾದ ಉತ್ತರ ಪ್ರಾಂತ್ಯದ ಜಾಫಾ° ಸಮೀಪದ ಕಂಕಸುತರೈ ನಡುವೆ ಸಂಪರ್ಕ ಕಲ್ಪಿಸಲಿದೆ. ಈ ಎರಡೂ ಪಟ್ಟಣಗಳ ನಡುವೆ ಶಿಪ್ಪಿಂಗ್ ಕಾರ್ಪೊರೇಶನ್ ಆಫ್ ಇಂಡಿಯಾ(ಎಸ್ಸಿಐ)ದ ಹೈ-ಸ್ಪೀಡ್ ಹಡಗು ಸೇವೆ ಒದಗಿಸಲಿದೆ. 150 ಪ್ರಯಾಣಿಕರ ಸಾಮರ್ಥ್ಯದ ಈ ಹಡಗು, ಗಂಟೆಗೆ 60 ನಾಟಿಕಲ್ ವೇಗದಲ್ಲಿ ಸಂಚರಿಸಲಿದೆ. ಎರಡು ಪಟ್ಟಣಗಳ ನಡುವಿನ ಪ್ರಯಾಣ ಸಮಯ ಸುಮಾರು 3.5 ಗಂಟೆ.
ಇದೊಂದು ಐತಿಹಾಸಿಕ ಘಟ್ಟ. ಇದು ಕೇವಲ ಎರಡು ಪಟ್ಟಣಗಳನ್ನು ಸಂಪರ್ಕಿಸುವುದಿಲ್ಲ. ಬದಲಾಗಿ ಎರಡು ದೇಶಗಳನ್ನು, ಇಲ್ಲಿನ ಜನರನ್ನು, ಅವರ ಹೃದಯಗಳನ್ನು ಬೆಸೆಯಲಿದೆ.
– ನರೇಂದ್ರ ಮೋದಿ, ಪ್ರಧಾನಿ