ಸುಮ್ಮನೆ ಬಂಧಿಸಲು ನಾನೇನು ಕುರಿ, ಕೋಳಿಯೋ?: ಈಶ್ವರಪ್ಪ
Team Udayavani, Jun 2, 2022, 12:07 AM IST
ಶಿವಮೊಗ್ಗ: ಸಕಾರಣ ವಿಲ್ಲದೆ ಬಂಧಿಸಲು ನಾನೇನು ಕುರಿ, ಕೋಳಿ, ಎಮ್ಮೆಯೋ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಭಗವಾಧ್ವಜ ಸಂಬಂಧಿಸಿ ನಾನು ನೀಡಿದ್ದ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ. ದಿಲ್ಲಿ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ನನ್ನ ಹೇಳಿಕೆಗೆ ಆಪ್ ರಾಜ್ಯಸಭಾ ಸದಸ್ಯ ದೂರು ಕೊಟ್ಟಿದ್ದು ಹಳೆಯ ವಿಚಾರ.
ರಾಷ್ಟ್ರಧ್ವಜ ಹಾಗೂ ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದವರು ರಾಷ್ಟ್ರದ್ರೋಹಿಗಳು ಎಂದು ಸದನದಲ್ಲಿಯೇ ನಾನು ಹೇಳಿ ದ್ದೇನೆ. ಸಿಎಂ ಕೂಡ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು.
ಕೆಲವರು ಪ್ರಚಾರದ ಉದ್ದೇಶ ದಿಂದ ಯಾರ್ಯಾರಧ್ದೋ ವಿರುದ್ಧ ಸುಳ್ಳು ಕೇಸು ದಾಖಲಿಸುತ್ತಾರೆ. ಇಂಥದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಇಂಥ ನೂರು ಕೇಸು ದಾಖಲಾದರೂ ಹೆದರುವುದಿಲ್ಲ ಎಂದು ಹೇಳಿದರು.