ಕೂಳೂರು ಸೇತುವೆ: ಮತ್ತೆ ಅಲ್ಲಲ್ಲಿ ಹೊಂಡ !
Team Udayavani, Jun 21, 2020, 5:45 AM IST
ಕೂಳೂರು: ಮೈಕ್ರೋ ಟೆಕ್ನಾಲಜಿ ಮೂಲಕ 38 ಲಕ್ಷ ರೂ. ವೆಚ್ಚದಲ್ಲಿ ದುರಸ್ತಿ ಮಾಡಲಾದ ಕೂಳೂರು ಹಳೇ ಸೇತುವೆಯಲ್ಲಿ ಇದೀಗ ಹೊಂಡ ಬೀಳಲಾರಂಭಿಸಿದೆ. ದುರಸ್ತಿ ಮಾಡಿ ತಿಂಗಳು ಕಳೆಯು ವುದರೊಳಗೆ ಒಂದೇ ಮಳೆಗೆ ಅಲ್ಲಲ್ಲಿ ಹೊಂಡ ಬಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಮೈಕ್ರೋ ಟೆಕ್ನಾಲಜಿ ಮೂಲಕ ದುರಸ್ತಿ ಮಾಡಲಾಗಿಯೆಂದು ಹೆದ್ದಾರಿ ಇಲಾಖೆ ಹೇಳಿದ್ದರೂ ಸೇತುವೆ ಅಡಿಭಾಗದಲ್ಲಿ ಹೆಚ್ಚಿನ ದುರಸ್ತಿ ಆದ ಲಕ್ಷಣ ಕಂಡು ಬರುತ್ತಿಲ್ಲ. ಹಳೇ ಸೇತುವೆಗೆ ಸುಣ್ಣ ಬಣ್ಣ ಮಾಡಿದ್ದರೂ ತಡೆಗೋಡೆ ಹಾಗೆಯೇ ಇರುವ ಕಾರಣ ಸಣ್ಣ ಅಪಘಾತವಾದರೂ ವಾಹನ ನೇರ ವಾಗಿ ಕೆಳಕ್ಕೆ ಬೀಳುವಂತಿದೆ.
ಸೇತುವೆ ದುರಸ್ತಿಗಾಗಿ ಮಾ. 17ರಿಂದ ಮೇ 20ರ ವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಕೋವಿಡ್ಹಾವಳಿಯಿಂದ ಸ್ವಲ್ಪ ದಿನಗಳ ಕಾಲ ದುರಸ್ತಿ ನಡೆದಿರಲಿಲ್ಲ. ಸಂಸದ ನಳಿನ್ ಕುಮಾರ್ ಕಟೀಲು ಅವರು ಕೂಳೂರು ಹಳೇ ಸೇತುವೆ ದುರಸ್ತಿಯಾದ ಬಳಿಕ ಉದ್ಘಾಟಿಸಿದ್ದರು. ಆದರೆ ಸಮಸ್ಯೆ ಮತ್ತೆ ಪುನರಾವರ್ತನೆಯಾಗುತ್ತಿದೆ. ಸೇತುವೆಯಲ್ಲಿ ಹೊಂಡ ಬಿದ್ದು ನೀರು ನಿಲ್ಲುತ್ತಿದೆ. ಮೇಲ್ನೋಟಕ್ಕೆ 38 ಲಕ್ಷ ರೂ. ವೆಚ್ಚವಾಗಿರುವುದೇ ಅನುಮಾನ ಮೂಡಿಸುವಂತಿದೆ.