India-Canada ಸಂಘರ್ಷ ಶಮನವಾಗಲಿ : ಸುನಕ್
Team Udayavani, Oct 7, 2023, 9:08 PM IST
ಲಂಡನ್: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರವಾಗಿ ಭಾರತ ಮತ್ತು ಕೆನಡಾ ನಡುವೆ ಉದ್ಭವಿಸಿರುವ ರಾಜ ತಾಂತ್ರಿಕ ಸಂಘರ್ಷ ತ್ವರಿತವಾಗಿ ಶಮನವಾಗಬೇಕಾದ ಅಗತ್ಯವಿದೆ ಎಂದು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಹಾಗೂ ಕೆನಡಾ ಪಿಎಂ ಜಸ್ಟಿನ್ ಟ್ರೂಡ್ನೂ ಆಶಿಸಿದ್ದಾರೆ.
ಭಾರತದಲ್ಲಿರುವ ಕೆನಡಾ ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳುವ ಭಾರತದ ಆಗ್ರಹದ ನಡುವೆಯೇ ಬ್ರಿಟನ್ ಪ್ರಧಾನಿ ದೂರವಾಣಿ ಮೂಲಕ ಟ್ರಾಡೊ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿರುವ ಕೆನಡಾದ ಆರೋಪದ ಬಗ್ಗೆಯೂ ರಿಷಿ ಮಾತನಾಡಿ, ಇಂಥ ವಿಚಾರಗಳಲ್ಲಿ ಎಲ್ಲ ರಾಷ್ಟ್ರಗಳು ಆಯಾ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಕಾನೂನು, ಸ್ಥಾಪಿತ ನಿಯಮಗಳನ್ನು ಗೌರವಿಸಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.