Mangaluru ಬಸ್ಸು-ಮೀನಿನ ಲಾರಿ ಢಿಕ್ಕಿ; ಹಲವರಿಗೆ ಗಾಯ
Team Udayavani, Nov 12, 2023, 11:04 PM IST
ಮಂಗಳೂರು: ಅಂಬೇಡ್ಕರ್ ವೃತ್ತದಲ್ಲಿ ರವಿವಾರ ಮುಂಜಾನೆ ಖಾಸಗಿ ಬಸ್ಸು ಹಾಗೂ ಮೀನಿನ ಈಚರ್ ಲಾರಿ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಎರಡು ವಾಹನಗಳ ಚಾಲಕರ ಸಹಿತ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಬೆಳಗ್ಗೆ ಸುಮಾರು 5.50ರ ವೇಳೆಗೆ ಅಪಘಾತ ಸಂಭವಿಸಿದ್ದು, ಬಂಟ್ಸ್ ಹಾಸ್ಟೆಲ್ನಿಂದ ಸ್ಟೇಟ್ಬ್ಯಾಂಕ್ ಕಡೆಗೆ ಸಾಗುತ್ತಿದ್ದ ಬಸ್ಸು ಮತ್ತು ಬಾವುಟಗುಡ್ಡೆಯಿಂದ ಪಂಪ್ವೆಲ್ ಕಡೆಗೆ ಸಾಗುತ್ತಿದ್ದ ಮೀನಿನ ಲಾರಿ ಪರಸ್ಪರ ಢಿಕ್ಕಿಯಾಗಿದೆ. ಎರಡೂ ವಾಹನಗಳು ವೇಗವಾಗಿ ಸಾಗಿ ಬಂದಿದ್ದು, ಪರಸ್ಪರ ಢಿಕ್ಕಿಯಾಗುವುದನ್ನು ತಪ್ಪಿಸಲು ಚಾಲಕರು ಪ್ರಯತ್ನಪಟ್ಟಿದ್ದರೂ, ಅದು ಸಾಧ್ಯವಾಗಿಲ್ಲ.
ಬಸ್ಸು, ಚಾಲಕನ ನಿಯಂತ್ರಣ ಕಳೆದುಕೊಂಡು ಲಾರಿಗೆ ಢಿಕ್ಕಿ ಹೊಡೆ ದಿದ್ದು, ಬಳಿಕ ಹೈಮಾಸ್ಟ್ ಕಂಬಕ್ಕೆ ಢಿಕ್ಕಿಯಾಗಿದೆ. ಸಿಸಿ ಟಿವಿ ಕಂಬಕ್ಕೂ ಹಾನಿಯಾಗಿದೆ. ಎರಡೂ ವಾಹನಗಳು ಜಖಂಗೊಂಡಿವೆ. ಘಟನೆಗೆ ಸಂಬಂಧಿಸಿ ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.