ಮಂಗಳೂರು: ರಸ್ತೆ ಬದಿಯಲ್ಲಿರುವ ಮರಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು
Team Udayavani, Mar 5, 2022, 7:06 PM IST
ಮಂಗಳೂರು: ಮಂಗಳೂರಿನ ಟೌನ್ ಹಾಲ್ ಬಳಿ ದುಷ್ಕರ್ಮಿಗಳು ಮರಕ್ಕೆ ಬೆಂಕಿ ಹಚ್ಚಿ ನಾಶ ಮಾಡಿರುವ ಆಘಾತಕಾರಿ ಘಟನೆ ಮಾರ್ಚ್ 5 ಶನಿವಾರ ನಡೆದಿದೆ.
ಬೆಂಕಿ ಹಚ್ಚಿರುವುದು ಪರಿಸರವಾದಿಗಳು ಮತ್ತು ಸ್ಥಳೀಯರ ಆಕ್ರೋಶಕ್ಕೆ ಗುರಿಯಾಗಿದೆ. ಇಂತಹ ಸಮಾಜಘಾತುಕ ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮಹಾನಗರ ಪಾಲಿಕೆ ಮತ್ತು ಪೊಲೀಸರು ಈ ಬಗ್ಗೆ ತುರ್ತು ಗಮನಹರಿಸಿ ಇಂತಹ ಸಂವೇದನಾರಹಿತ ಮತ್ತು ಕಾನೂನುಬಾಹಿರ ಚಟುವಟಿಕೆಗಳಿಂದ ನಗರದ ಹಸಿರು ಹೊದಿಕೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ.
ಈಗಾಗಲೇ ನಗರದಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಹಲವು ಮರಗಳನ್ನು ಕತ್ತರಿಸಲಾಗಿದೆ. ಉಳಿದಿರುವ ಮರಗಳು ಮಂಗಳೂರಿನ ತಾಪ ಮತ್ತು ಬಿರು ಬೇಸಿಗೆಯಲ್ಲಿ ಹೆಚ್ಚು ಅಗತ್ಯವಿರುವ ನೆರಳನ್ನು ಒದಗಿಸುತ್ತವೆ. ಕಾಂಕ್ರೀಟ್ ರಸ್ತೆಗಳಿಂದ ಉಲ್ಬಣಗೊಂಡ ತಾಪಮಾನವನ್ನು ಸಹ ಅವು ತಂಪಾಗಿಸುತ್ತವೆ. ಈಗ ಉಳಿದ ಕೆಲವು ಮರಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚುತ್ತಿದ್ದಾರೆ.