ಮಹಾಲಕ್ಷ್ಮೀ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ಶಿವರಾಜು ಪರ ಪ್ರಿಯಾಂಕ್ ಖರ್ಗೆ ಪ್ರಚಾರ
Team Udayavani, Nov 30, 2019, 8:11 PM IST
ಬೆಂಗಳೂರು: ಚುನಾವಣೆಯಲ್ಲಿ ಅನರ್ಹರನ್ನು ಸೋಲಿಸಿದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಲಗೊಳ್ಳುತ್ತದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಕ್ತಿಗಣಪತಿನಗರ ಹಾಗೂ ನಾಗಪುರ ವಾರ್ಡ್ಗಳ ಹಲವೆಡೆ ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಪರ ಮತಯಾಚನೆ ಮಾಡುವ ವೇಳೆ ಮಾತನಾಡಿ, ನೈತಿಕತೆಯಿಲ್ಲದ ಅನರ್ಹರು ಸೋತರೆ ಮಾತ್ರ ದೇಶದಲ್ಲಿ ಸರ್ಕಾರಗಳು ಸ್ಥಿರವಾಗಿ ಉಳಿಯುತ್ತವೆ. ಜತೆಗೆ ಚುನಾಯಿತ ಪ್ರತಿನಿಧಿಗಳು ತಪ್ಪು ಹೆಜ್ಜೆ ಇಡಲು ಮುಂದಾಗುವುದಿಲ್ಲ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಈಗಾಗಲೇ ಪಾಲಿಕೆ ಸದಸ್ಯರಾಗಿ ಉತ್ತಮ ಕೆಲಸಗಳನ್ನು ಮಾಡುವ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿದ್ದಾರೆ. ಇಂಥ ಕ್ರಿಯಾಶೀಲ ಯುವಕ ಅಭ್ಯರ್ಥಿಯನ್ನು ಜನತೆ ಆಶೀರ್ವದಿಸಿದರೆ ಪ್ರಬುದ್ಧ ರಾಜಕಾರಣಿಯಾಗಿ, ಬದ್ಧತೆಯುಳ್ಳ ಶಾಸಕರಾಗಿ ಜನಸೇವೆ ಮಾಡುತ್ತಾರೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಎಂ.ಶಿವರಾಜು ಮಾತನಾಡಿ, ಜನಾದೇಶಕ್ಕೆ ವಿರುದ್ಧವಾಗಿ ಉಪ ಚುನಾವಣೆ ಬಂದಿದೆ. ಇದಕ್ಕೆ ಕಾರಣರಾಗಿರುವ ಅನರ್ಹ ಶಾಸಕರ ವಿರುದ್ಧ ತೀರ್ಪು ಕೊಡಲು ಕ್ಷೇತ್ರದ ಮತದಾರರು ಈಗಾಗಲೇ ಸಿದ್ಧರಾಗಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಹೆಚ್ಚಿನ ಒಲವು ಕಂಡುಬರುತ್ತಿದ್ದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.