ರಮೇಶ್ ಮತ್ತೆ ಚುರುಕು
ಬಿಜೆಪಿ ವರಿಷ್ಠರ ಜತೆಗೆ ಮಾತುಕತೆ ಸಾಧ್ಯತೆ
Team Udayavani, May 21, 2019, 6:00 AM IST
ಬೆಂಗಳೂರು: ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ರಾಜೀನಾಮೆ ನೀಡುವುದಾಗಿ ಹೇಳಿ ಆಪ್ತರಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆ ಯಲ್ಲಿ ಮೌನಕ್ಕೆ ಶರಣಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತಗಟ್ಟೆ ಫಲಿತಾಂಶ ಪ್ರಕಟಗೊಂಡ ತಕ್ಷಣ ಮತ್ತೆ ಸಕ್ರಿಯರಾಗಿದ್ದಾರೆ.
ಸೋಮವಾರ ಬೆಂಗಳೂರಿಗೆ ಆಗಮಿಸಿದ ಅವರು, ತಮ್ಮ ಆಪ್ತರನ್ನು ಸಂಪರ್ಕಿಸುವ ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. 23 ರ ಲೋಕಸಭೆ ಚುನಾವಣೆ ಫಲಿತಾಂಶ ಬಂದ ತಕ್ಷಣ ಕನಿಷ್ಠ ನಾಲ್ಕರಿಂದ ಐವರು ಶಾಸಕರನ್ನು ತಮ್ಮೊಂದಿಗೆ ರಾಜೀನಾಮೆ ಕೊಡಿಸುವ ಭರವಸೆ ಯನ್ನು ಬಿಜೆಪಿ ನಾಯಕರಿಗೆ ನೀಡಿದ್ದಾರೆ ಎನ್ನಲಾಗಿದ್ದು, ಅದೇ ಕಾರಣಕ್ಕೆ ಬಿಜೆಪಿ ಕೂಡ ಚುನಾವಣೆ ಫಲಿತಾಂಶ ಬಂದ ತಕ್ಷಣ ಆಪರೇ ಷನ್ ಕಮಲ ನಡೆಸುವ ತೆರೆ ಮರೆಯ ಪ್ರಯತ್ನಕ್ಕೆ ಮತ್ತೆ ಜೀವ ಬಂದಂತಾಗಿದೆ.
ತಮ್ಮ ಆಪ್ತರಾದ ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ, ಹಿರೇಕೆರೂರು ಶಾಸಕ ಬಿ.ಸಿ. ಪಾಟೀಲ್, ಮಸ್ಕಿ ಶಾಸಕ ಪ್ರತಾಪ್ಗೌಡ ಪಾಟೀಲ್ ಅವರೊಂದಿಗೆ ಮತ್ತೂಂದು ಸುತ್ತು ಮಾತುಕತೆ ನಡೆಸಿ ಕಾಂಗ್ರೆಸ್ಗೆ ರಾಜೀನಾಮೆ ನೀಡುವ ಬಗ್ಗೆ ಚರ್ಚೆ ನಡೆಸುವ ಪ್ರಯತ್ನವನ್ನು ರಮೇಶ್ ಜಾರಕಿ ಹೊಳಿ ಆರಂಭಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರನ್ನು ಅಜ್ಞಾತ ಸ್ಥಳದಲ್ಲಿ ಭೇಟಿಯಾಗುವ ಯತ್ನ ನಡೆಸಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದು, ಫಲಿತಾಂಶ ಬಂದ ತಕ್ಷಣ ರಾಜೀನಾಮೆ ನೀಡುವ ಕುರಿತಂತೆ ಅವರೊಂದಿಗೆ ಚರ್ಚಿಸಿ, ನವದೆಹಲಿಗೆ ತೆರಳಿ ಬಿಜೆಪಿ ಹೈ ಕಮಾಂಡ್ ಭೇಟಿ ಮಾಡಲು ರಮೇಶ್ ನಿರ್ಧರಿಸಿದ್ದಾರೆ ಎನ್ನಲಾಗಿದೆ.