ನನ್ನ ಪುತ್ರ ದರ್ಶನ್ ಒಳ್ಳೆಯ ಸ್ವಭಾವದ ಹುಡುಗ : ರುದ್ರಪ್ಪ ಲಮಾಣಿ
Team Udayavani, Nov 10, 2020, 11:00 AM IST
ಹಾವೇರಿ: “ನನ್ನ ಪುತ್ರ ದರ್ಶನ್ ಒಳ್ಳೆಯ ಸ್ವಭಾವದ ಹುಡುಗ. ಮನೆಯಲ್ಲಿ ಚೆನ್ನಾಗಿಯೇ ಇದ್ದ. ಈಗಷ್ಟೇ ಬಿಎ ಮುಗಿಸಿದ್ದಾನೆ. ಎಲ್ಎಲ್ಬಿಗೆ ಅಡ್ಮಿಷನ್ ಮಾಡಿಸಬೇಕೆಂದು ಹೇಳಿ ಹೋಗಿದ್ದ. ಆದರೆ, ಪೊಲೀಸರು ಡ್ರಗ್ಸ್ಗೆ ಸಂಬಂಧಿಸಿದಂತೆ ಬಂಧಿಸಿರುವುದು ಬೇಸರ ಮೂಡಿಸಿದೆ’ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿ, ಪುತ್ರನನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿರುವ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ, ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದ. ಬೆಂಗಳೂರಿನಲ್ಲಿ ಆತನ ಸ್ನೇಹಿತರಿಗೆ ಏನೋ ಪಾರ್ಸಲ್ ಬಂದಿದೆ. ಆತ ಇವನ ಹೆಸರು ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದು, ತನಿಖೆ ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ಮುಂದಿನ ದಿನಗಳಲ್ಲಿ ಉತ್ತರ ನೀಡುತ್ತೇನೆ ಎಂದರು.
ದರ್ಶನ್ ಲಮಾಣಿ ರಾಣಿಬೆನ್ನೂರಿನ ನಿವಾಸದಲ್ಲಿ ವಾಸಿಸುತ್ತಿದ್ದು, ಇತ್ತೀಚೆಗೆ ತಂದೆಯ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದ. ರುದ್ರಪ್ಪ ಲಮಾಣಿ ಹಾವೇರಿ ಎಸ್ಸಿ ಮೀಸಲು ಕ್ಷೇತ್ರದಿಂದ ಕಳೆದ ಬಾರಿ ಗೆದ್ದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್
ಸರ್ಕಾರದಲ್ಲಿ ಮುಜರಾಯಿ, ಜವಳಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ:ನಿರುಪಯುಕ್ತ ಟ್ರಾಫಿಕ್ ಸಿಗ್ನಲ್ ಕಂಬ ತೆರವು ಕಾರ್ಯಕ್ಕೆ ಮುಂದಾದ ಬಿಆರ್ಟಿಎಸ್