Bantwal; 200ನೇ ವರ್ಷದ ಬ್ರಹ್ಮರಥೋತ್ಸವ; ಶ್ರೀ ಕಾಶೀ ಮಠಾಧೀಶರು ಭಾಗಿ
ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನ
Team Udayavani, Mar 17, 2024, 12:07 AM IST
ಬಂಟ್ವಾಳ: ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಬ್ರಹ್ಮರಥಕ್ಕೆ ಈ ಬಾರಿ 200ನೇ ವರ್ಷಾಚರಣೆ ಸಂಭ್ರಮವಾಗಿದ್ದು, ಸಂಜೆ ಶ್ರೀ ಕಾಶೀ ಮಠಾಧೀಶ ಶ್ರೀಮತ್ಸಂಯಮೀಂದ್ರತೀರ್ಥ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ದೇವರು ಬ್ರಹ್ಮರಥಾರೋಹಣಗೊಂಡು ತಡ ರಾತ್ರಿ ಬ್ರಹ್ಮರಥೋತ್ಸವ ನೆರವೇರಿತು.
ಸಹಸ್ರಾರು ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಮಲ್ಲಿಗೆ ಪ್ರಿಯನಾದ ಶ್ರೀ ತಿರುಮಲ ವೆಂಕಟರಮಣ ಸ್ವಾಮಿಗೆ ಹೆಚ್ಚಿನ ಪ್ರಮಾಣದಲ್ಲಿ ಮಲ್ಲಿಗೆಯನ್ನು ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಬ್ರಹ್ಮರಥಕ್ಕೆ 200ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಬಂಟ್ವಾಳ ಪೇಟೆಯನ್ನು ವಿದ್ಯುತ್ ದೀಪಗಳಿಂದ, ರಥವನ್ನು ಫಲಪುಷ್ಪಗಳಿಂದ ಸಿಂಗರಿಸಲಾಗಿತ್ತು.
ಶನಿವಾರ ಬೆಳಗ್ಗೆ ಮೊಕ್ತೇಸರರ, ಹತ್ತು ಸಮಸ್ತರ ಪ್ರಾರ್ಥನೆ, ಮಹಾ ಪೂಜಾರಂಭ, ಅಭಿಷೇಕ, ಮಧ್ಯಾಹ್ನ ಯಜ್ಞಾರಂಭ, ಸಂಜೆ ಯಜ್ಞಾರತಿ, ಪೂರ್ಣಾಹುತಿ ಬಲಿ, ಸಂಜೆ ಬ್ರಹ್ಮರಥಾರೋಹಣ, ಸಮಾರಾಧನೆ, ತಡರಾತ್ರಿ ಬ್ರಹ್ಮರಥೋತ್ಸವ, ವಸಂತ ಪೂಜೆ, ಏಕಾಂತ ಸೇವೆ ನಡೆಯಿತು.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು, ಆಡಳಿತ ಮೊಕ್ತೇಸರ ಅಶೋಕ ಶೆಣೈ, ಮೊಕ್ತೇಸರರಾದ ಭಾಮಿ ನಾಗೇಂದ್ರನಾಥ ಶೆಣೈ, ಬಿ. ಸುರೇಶ್ ವಿ. ಬಾಳಿಗಾ ಮೊದಲಾದ ವರು ಪಾಲ್ಗೊಂಡಿದ್ದರು.