ಹಿರಿಯ ಯಕ್ಷಗಾನ ಅರ್ಥಧಾರಿ ಡಿ.ಎಸ್. ಶ್ರೀಧರ ಅವರಿಗೆ ಒಲಿದ ಪಾರ್ತಿಸುಬ್ಬ ಪ್ರಶಸ್ತಿ
ಶಿರಸಿ : ಯಕ್ಷಗಾನ ಸಾಧಕರಿಗೆ ಅಕಾಡೆಮಿ ಪ್ರಶಸ್ತಿ ಪ್ರದಾನ
Team Udayavani, Feb 20, 2022, 3:30 PM IST
ಶಿರಸಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿ, ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷ ಸಿರಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಭಾನುವಾರ ನಗರದ ಟಿಆರ್ ಸಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಯಕ್ಷಗಾನದ ಅರ್ಥಧಾರಿ ಹಾಗೂ ಪ್ರಸಂಗಕರ್ತೃ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ದರೇಮನೆ ನಿಟ್ಟೂರಿನ ಡಿ.ಎಸ್.ಶ್ರೀಧರ ಈ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಭಾಜನರಾದರು. ಪ್ರಶಸ್ತಿ ಮೊತ್ತ ಒಂದು ಲಕ್ಷ ರೂ. ನಗದು ಸಹಿತ ಪ್ರಶಸ್ತಿ ಫಲಕದೊಂದಿಗೆ ಪ್ರದಾನ ಮಾಡಲಾಯಿತು.
ಅಕಾಡೆಮಿ ವಾರ್ಷಿಕ ಗೌರವ ಪುರಸ್ಕಾರವನ್ನು ತಲಕಳ ದಿ.ಕೆ.ತಿಮ್ಮಪ್ಪ ಗುಜರನ್ ಅವರ ಕುಟುಂಬಕ್ಕೆ ಶಿರಸಿಯ ಡಾ.ವಿಜಯ ನಳಿನಿ ರಮೇಶ, ಹರಪನಹಳ್ಳಿಯ ಬಿ. ಪರಶುರಾಮ ಅವರಿಗೆ 50 ಸಾ.ರೂ ಮೊತ್ತದ ಮೊತ್ತದ ಜೊತೆ ಫಲಕ, ಪ್ರಶಸ್ತಿ ನೀಡಲಾಯಿತು.
ತಲಾ 25 ಸಾವಿರ ರೂ ಮೊತ್ತದ ಯಕ್ಷ ಸಿರಿ ವಾರ್ಷಿಕ ಪ್ರಶಸ್ತಿ
ಯಕ್ಷಗಾನ ಗುರು ಹರಿನಾರಾಯಣ ಬೈಪಾಡಿತ್ತಾಯ, ಗೋಪಾಲ ಆಚಾರ್ಯ ತೀರ್ಥಹಳ್ಳಿ, ಬೇಲ್ತೂರು ರಮೇಶ, ಆವರ್ಸೆ ಶ್ರೀನಿವಾಸ ಮಡಿವಾಳ ಹಾಗೂ ಸಂಜಯ ಕುಮಾರ ಶೆಟ್ಟಿ, ಶಿರಸಿಯ ಎಂ.ಆರ್. ಹೆಗಡೆ ಕಾನಗೋಡ, ಸುಬ್ರಹ್ಮಣ್ಯ ಧಾರೇಶ್ವರ, ವಿಟ್ಲ ಶಂಭು ಶರ್ಮ, ಬರಗೂರಿನ ಹನುಮಂತರಾಯಪ್ಪ ಮತ್ತು ಕೋಲಾರ ವಕ್ಕಲೇರಿಯ ಎ.ಎಂ. ಮುಳವಾಗಲಪ್ಪ ಅವರಿಗೆ ನೀಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಮಾತನಾಡಿದರು.
ಪ್ರಾರ್ಥನೆ ಅನಘ ಹೆಗಡೆ, ಸ್ಪಂದನಾ ಭಟ್ಟ ಪ್ರಾರ್ಥಿಸಿದರು. ಅಕಾಡೆಮಿ ರಜಿಸ್ಟ್ರಾರ್ ಎಸ್.ಎಚ್. ಶಿವರುದ್ರಪ್ಪ ಸ್ವಾಗತಿಸಿ, ಅಕಾಡೆಮಿ ಸದಸ್ಯರಾದ ಕದ್ರಿ ನವನೀತ ಶೆಟ್ಟಿ, ದಿವಾಕರ ಹೆಗಡೆ ಕೆರೆಹೊಂಡ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮ ಸಂಚಾಲಕಿ ನಿರ್ಮಲಾ ಗೋಳಿಕೊಪ್ಪ, ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಹಿರಿಯ ಸದಸ್ಯ ಜಿ.ಎಸ್.ಭಟ್ಟ ಇದ್ದರು.