ರಾಜ್ಯಸಭೆ ಮೇಲೆ ಸೋಮಣ್ಣ ಕಣ್ಣು- BJP ವರಿಷ್ಠರ ಭೇಟಿಗಾಗಿ ದಿಲ್ಲಿಗೆ ತೆರಳುವ ಸಾಧ್ಯತೆ
Team Udayavani, Jan 31, 2024, 1:08 AM IST
ಬೆಂಗಳೂರು: ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಸಚಿವ ವಿ. ಸೋಮಣ್ಣ ಅವರು ಈಗ ರಾಜ್ಯಸಭಾ ಟಿಕೆಟ್ ಮೇಲೆ ಕಣ್ಣು ಹಾಕಿದ್ದಾರೆ.
ರಾಜ್ಯಸಭಾ ಸದಸ್ಯರಾಗಿರುವ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಇದೇ ಎಪ್ರಿಲ್ನಲ್ಲಿ ನಿವೃತ್ತಿಯಾಗಲಿದ್ದು, ಆ ಸ್ಥಾನಕ್ಕೆ ಫೆ. 27ರಂದು ಚುನಾವಣೆ ನಿಗದಿಯಾಗಿದೆ. ಆ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡ ಹೇರಲಾರಂಭಿಸಿದ್ದಾರೆ. ಬಿಜೆಪಿ ವರಿಷ್ಠರ ಭೇಟಿಗೆ ಪ್ರಯತ್ನ ನಡೆಸುತ್ತಿದ್ದು ಅಲ್ಲಿಂದ ಹಸುರು ಸಂಕೇತ ಬಂದರೆ ದಿಲ್ಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ.
ಚುನಾವಣೆ ಫಲಿತಾಂಶ ಹೊರಬಿದ್ದ ದಿನದಿಂದಲೂ ಸ್ವಪಕ್ಷೀಯರ ವಿರುದ್ಧವೇ ಒಳ ಗೊಳಗೆ ಭುಸುಗುಡುತ್ತಿದ್ದ ಸೋಮಣ್ಣ ಪಕ್ಷದ ಚಟುವಟಿಕೆಗಳಿಂದ ತಟಸ್ಥರಾಗಿದ್ದರು. ಜತೆಗೆ ವರಿಷ್ಠರ ಭೇಟಿಗಾಗಿ ಸತತ ಪ್ರಯತ್ನ ನಡೆಸುತ್ತಿದ್ದರು.
ಈಗ ಚುನಾವಣೆ ಘೋಷಣೆ ಆಗಿರುವುದರಿಂದ ಸೋಮಣ್ಣ ಅವರು ವರಿಷ್ಠರ ಮೇಲೆ ಒತ್ತಡ ಹಾಕತೊಡಗಿದ್ದಾರೆ. ಹಿಂದೆ ಆಗಿರುವ ಅನ್ಯಾಯ ಹಾಗೂ ನೋವನ್ನು ಸರಿಪಡಿಸುವಂತೆಯೂ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದಾರೆ. ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಈಗ ಕುತೂಹಲ ಕೆರಳಿಸಿದೆ.