ಹೊರಗಿನಿಂದ ಬರುವವರ ಮೇಲೆ ವಿಶೇಷ ನಿಗಾ: ಸಿಂಧೂ
Team Udayavani, May 4, 2020, 6:29 AM IST
ಮಂಗಳೂರು: ಕೇಂದ್ರ ಸರಕಾರದ ಮಾರ್ಗ ದರ್ಶನದಂತೆ ದ.ಕ. ಜಿಲ್ಲೆಯಲ್ಲೂ ಲಾಕ್ಡೌನ್ ಸಡಿಲಿಕೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಅಂತರ್ ಜಿಲ್ಲೆ, ಅಂತರ್ ರಾಜ್ಯ ಹಾಗೂ ವಿದೇಶದಿಂದಲೂ ಜನರು ಆಗಮಿಸಲಿದ್ದು ಅವರ ಮೇಲೆ ಜಿಲ್ಲಾಡಳಿತ ವಿಶೇಷ ನಿಗಾ ಇರಿಸಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಯುಎಸ್ಎ, ಕೆನಡಾ, ಯುಎಇಗಳಿಂದ ಸುಮಾರು 10,000 ಮಂದಿ ಬರುವ ನಿರೀಕ್ಷೆಯಿದ್ದು, ಇದು ಜಿಲ್ಲಾಡ ಳಿತಕ್ಕೆ ದೊಡ್ಡ ಸವಾಲಾಗಿದೆ. ವಿದೇಶದಿಂದ ಬಂದವರನ್ನು ಕ್ವಾರಂಟೈನ್ನಲ್ಲಿ ಇರಿಸಲು ಸಿದ್ಧತೆ ನಡೆಯುತ್ತಿದೆ. ಅಂತಾ ರಾಜ್ಯ, ಅಂತರ್ಜಿಲ್ಲೆಗಳಿಂದ ಬರುವವರನ್ನು ಗಡಿಭಾಗದ ಚೆಕ್ಪೋಸ್ಟ್ನಲ್ಲಿ ತಪಾಸಣೆ ನಡೆಸಿ ಬಳಿಕ ಹೋಂ ಕ್ವಾರಂಟೈನ್ನಲ್ಲಿ ಇರಿಸಲಾಗುವುದು ಎಂದರು.
ತನಿಖೆಗೆ ತಂಡ
ಬಂಟ್ವಾಳ ಕಸಬಾದ ಮಹಿಳೆಗೆ ತಗುಲಿದ ಸೋಂಕಿನ ಮೂಲ ಪತ್ತೆಗಾಗಿ 6 ಮಂದಿಯ ವಿಶೇಷ ತಂಡ ರಚಿಸಲಾ ಗಿದ್ದು, ಮೇ 6ರೊಳಗೆ ಈ ತಂಡ ಸಮಗ್ರ ಪರಿಶೀಲನೆ ನಡೆಸಿ ವರದಿ ನೀಡಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ| ರಾಮಚಂದ್ರ ಬಾಯರಿ ತಿಳಿಸಿದರು. ಕೊರೊನಾ ಸೋಂಕು ಫಸ್ಟ್ನ್ಯೂರೋ ಆಸ್ಪತ್ರೆಯಿಂದ ಅಥವಾ ಬಂಟ್ವಾಳದಿಂದ ಆರಂಭವಾಯಿತೇ ಎನ್ನುವ ಬಗ್ಗೆ ಒಂದು ಹಂತದ ತನಿಖೆ ಮುಗಿದಿದೆ. 12ನೇ ದಿನ ಸ್ಯಾಂಪಲ್ ತೆಗೆದ ಬಳಿಕ ತನಿಖೆಯ ಸ್ಪಷ್ಟ ಚಿತ್ರಣ ಸಿಗಲಿದೆ ಎಂದರು.
ಫಸ್ಟ್ನ್ಯೂರೋ ಆಸ್ಪತ್ರೆಗೆ ಸಂಬಂಧಿಸಿದಂತೆ 19 ಮಂದಿ ರೋಗಿಗಳು, 21 ಸಹಾಯಕರು ಸಹಿತ ಒಟ್ಟು 210 ಮಂದಿ ವಿವಿಧೆಡೆ ಕ್ವಾರಂಟೈನ್ನಲ್ಲಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಉಡುಪಿಯ 4 ಮಂದಿ, ಚಿಕ್ಕಮಗಳೂರಿನ 5 ಮಂದಿ, ಕೊಡಗಿನ 3 ಮಂದಿಯನ್ನು ಪತ್ತೆ ಹಚ್ಚಿ ತಪಾಸಣೆ ನಡೆಸ ಲಾಗಿದ್ದು, ಅವರ ವರದಿ ನೆಗೆಟಿವ್ ಬಂದಿದೆ ಎಂದರು.
ಜಿಲ್ಲಾ ಅಪರ ಜಿಲ್ಲಾಧಿಕಾರಿ ರೂಪಾ, ದ.ಕ.ಜಿಲ್ಲಾ ಯೋಜನ ನಿರ್ದೇಶಕಿ ಗಾಯತ್ರಿ ನಾಯಕ್ ಉಪಸ್ಥಿತರಿದ್ದರು.