ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣ: ಒಟ್ಟು 9 ಆರೋಪಿಗಳ ಬಂಧನ
ಹಣಕಾಸು ವಿಚಾರ, ಹಳೇ ದ್ವೇಷದಿಂದ ಕೊಲೆ
Team Udayavani, Oct 31, 2020, 11:42 PM IST
ಬಂಟ್ವಾಳ: ಬಂಟ್ವಾಳದ ಭಂಡಾರಿಬೆಟ್ಟು ಬಳಿಯ ವಸತಿ ಸಂಕೀರ್ಣದಲ್ಲಿ ನಡೆದ ಸುರೇಂದ್ರ ಬಂಟ್ವಾಳ್ (41) ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ 9 ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಹಣದ ವಿಚಾರ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆಸಲಾಗಿದೆ ಎನ್ನುವುದು ಪೊಲೀಸ್ ಇಲಾಖೆ ತನಿಖೆಯಿಂದ ಬಹಿರಂಗಪಡಿಸಿದೆ.
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಪ್ರಕರಣದಲ್ಲಿ ಇನ್ನೂ 2-3 ಮಂದಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಅವರ ಬಂಧನ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಕೃತ್ಯ ಎಸಗಿರುವ ಮುಖ್ಯ ಆರೋಪಿಗಳಾದ ಅಜೆಕಲ ನಿವಾಸಿ ಸತೀಶ್ ಕುಲಾಲ್ (39), ನೀರುಮಾರ್ಗ ಬೊಂಡಂತಿಲ ನಿವಾಸಿ ಗಿರೀಶ್ (28) (ಈತ ಕಿಶನ್ ಹೆಗ್ಡೆಯ ಆಪ್ತ) ಬಂಧಿತರಾಗಿದ್ದು, ಇವರ ವಿಚಾರಣೆಯ ವೇಳೆ ಪ್ರದೀಪ್ ಕುಮಾರ್ ಯಾನೆ ಪಪ್ಪು, ಶರೀಫ್ ಯಾನೆ ಸಯ್ಯದ್ ಶರೀಫ್, ವೆಂಕಪ್ಪ ಪೂಜಾರಿ ಯಾನೆ ವೆಂಕಟೇಶ, ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆಕಾಶಭವನ ಶರಣ್ ಎನ್ನುವವರು ಹತ್ಯೆಗೆ ಒಳಸಂಚು ರೂಪಿಸಿದ್ದರು. ವಾಹನದ ವ್ಯವಸ್ಥೆ ಮಾಡಿದ್ದ ದಿವ್ಯರಾಜ್, ಅನಿಲ್ ಪಂಪ್ವೆಲ್, ಆರೋಪಿಗಳಿಗೆ ತಂಗಲು ವ್ಯವಸ್ಥೆ ಮಾಡಿದ್ದ ಉಜಿರೆ ನಿವಾಸಿ ರಾಜೇಶ್ ಬಂಧಿತ ಆರೋಪಿಗಳು.
ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಹಾಗೂ ಡಿವೈಎಸ್ಪಿ ವೆಲೆಂಟೈನ್ ಡಿ’ಸೋಜಾ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಟಿ.ಡಿ. ನಾಗರಾಜ್ ನಡೆಸುತ್ತಿದ್ದು, ಆರೋಪಿಗಳ ಪತ್ತೆಯ ಕುರಿತು ಪಿಎಸ್ಐಗಳಾದ ಅವಿನಾಶ್ ಎಚ್. ಗೌಡ, ಪ್ರಸನ್ನ ಎಂ.ಎಸ್., ಸಂಜೀವ ಕೆ., ನಂದಕುಮಾರ್, ವಿನೋದ್ ರೆಡ್ಡಿ, ರಾಜೇಶ್ ಕೆ.ವಿ., ಕಲೈಮಾರ್, ಕುಮಾರ್ ಕಾಂಬ್ಳೆ, ಡಿಎಸ್ಬಿ ಇನ್ಸ್ಪೆಕ್ಟರ್ ರವಿ ಬಿ.ಎಸ್., ಡಿಸಿಐಬಿ ಇನ್ಸ್ಪೆಕ್ಟರ್ ಚೆಲುವರಾಜ್, ಡಿಸಿಐಬಿ ಸಿಬಂದಿ, ತಾಂತ್ರಿಕ ವಿಭಾಗದ ಸಿಬಂದಿ, ಜಿಲ್ಲೆಯ ವಿವಿಧ ಠಾಣೆಗಳ ಸಿಬಂದಿಯನ್ನೊಳಗೊಂಡ ತಂಡ ಒಟ್ಟು 5 ವಿಶೇಷ ತಂಡಗಳಾಗಿ ಇಡೀ ಪ್ರಕರಣದ ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಶ್ರಮಿಸಿತ್ತು.
ಸಾಲ ಪಡೆದಿದ್ದರು
ಸುರೇಂದ್ರ ಬಂಟ್ವಾಳ್ ಹತ್ಯೆ ಯಾಕೆ ನಡೆದಿದೆ ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಬಹಿರಂಗಗೊಂಡಿದ್ದು, ಪ್ರದೀಪ್ ಕುಮಾರ್ ಸುರೇಂದ್ರ ಬಂಟ್ವಾಳ್ ಸ್ನೇಹಿತನಾಗಿದ್ದು, ಚಿನ್ನದ ಅಂಗಡಿ ಮಾಡುವುದಕ್ಕಾಗಿ ಸಾಲ ಪಡೆದು ಅದರಲ್ಲಿ 7 ಲಕ್ಷ ರೂ. ನೀಡಿಲು ಬಾಕಿ ಇತ್ತು. ಹೀಗಾಗಿ ಆತ ಈ ಕೃತ್ಯ ನಡೆಸಿದ್ದು, ಅದಕ್ಕಾಗಿ 2 ಲಕ್ಷ ರೂ.ಗಳನ್ನು ಆಕಾಶ್ಭವನ ಶರಣ್ನಿಗೆ ಆತನ ಪರಿಚಿತ ವ್ಯಕಿಯ ಮೂಲಕ ನೀಡಿದ್ದ. ಪ್ರಸ್ತುತ ಪರಿಚಿತ ವ್ಯಕ್ತಿಯ ಬಂಧನ ಬಾಕಿ ಇದೆ.
ಆರೋಪಿ ವೆಂಕಪ್ಪ ಪೂಜಾರಿ ಕೂಡ ಸುರೇಂದ್ರ ಬಂಟ್ವಾಳ್ಗೆ ಹಣ ನೀಡಲು ಬಾಕಿ ಇದ್ದು, ಕಾರಣಕ್ಕಾಗಿ ಕೃತ್ಯ ನಡೆಸಲು ಆರೋಪಿ ಸತೀಶ್ ಕುಲಾಲ್ನಿಗೆ 90 ಸಾವಿರ ರೂ.ಗಳನ್ನು ಮುಂಚಿತವಾಗಿ ನೀಡಿದ್ದು, ಕೃತ್ಯದ ಬಳಿಕ ಹೆಚ್ಚಿನ ಹಣವನ್ನು ನೀಡುವುದಾಗಿ ತಿಳಿಸಿದ್ದ. ಆರೋಪಿ ಶರೀಫ್ ಮೃತ ಸುರೇಂದ್ರ ಬಂಟ್ವಾಳ್ನೊಂದಿಗೆ ವೈಯಕ್ತಿಕವಾಗಿ ಮೈಮನಸ್ಸು ಹೊಂದಿದ್ದು, ಹೀಗಾಗಿ ಕೃತ್ಯದಲ್ಲಿ ಭಾಗಿಯಾಗಿದ್ದ.
ವೈಯಕ್ತಿಕ ದ್ವೇಷ
ಬೆಂಗಳೂರು ಕೇಂದ್ರ ಜೈಲಿನಲ್ಲಿದ್ದ ಆರೋಪಿ ಆಕಾಶಭವನ ಶರಣ್ನನ್ನು ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಿಸಿದಾಗ ಆತನು ಮೃತ ಸುರೇಂದ್ರ ಬಂಟ್ವಾಳ್ನೊಂದಿಗೆ ವೈಯಕ್ತಿಕವಾಗಿ ದ್ವೇಷ ಹೊಂದಿದ್ದು, ಆ ಹಿನ್ನೆಲೆಯಲ್ಲಿ ಆರೋಪಿಗಳೊಂದಿಗೆ ಸೇರಿಕೊಂಡು ಆರೋಪಿ ಗಿರೀಶ್ನಿಗೆ ಕಿಶನ್ ಹೆಗ್ಡೆಯ ಹತ್ಯೆಗೆ ಪ್ರತೀಕಾರಕ್ಕಾಗಿ ಎಂದು ಪುಸಲಾಯಿಸಿ ಕೃತ್ಯ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಂಗಲು ವ್ಯವಸ್ಥೆ ಮಾಡಿದ್ದ ಉಜಿರೆ ನಿವಾಸಿ ರಾಜೇಶ್ನ ಬಳಿ ಕೃತ್ಯದಲ್ಲಿ ಸಿಕ್ಕ 50,000 ರೂ., ಆರೋಪಿಗಳ ಮೊಬೈಲ್ ಇದ್ದು, ಅವರು ತಪ್ಪಿಸಿಕೊಂಡು ಹೋಗಲು ತನ್ನ ಮಾರುತಿ ಆಮ್ನಿಯನ್ನು ನೀಡಿದ್ದ.
ಹಳೇ ಆರೋಪಿಗಳು
ಆರೋಪಿ ದಿವ್ಯರಾಜ್, ಪಂಪವೆಲ್ ನಿವಾಸಿಯಾಗಿದ್ದು, 2017ರಲ್ಲಿ ಬೆಂಜನಪದವಿನಲ್ಲಿ ನಡೆದ ಅಶ್ರಫ್ ಕಲಾಯಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕಿಶನ್ ಹೆಗ್ಡೆಯ ಆಪ್ತನಾಗಿದ್ದ. ಆರೋಪಿ ಶರಣ್ ಯಾನೆ ಆಕಾಶಭವನ ಶರಣ್ ಮೇಲೆ ಸುಮಾರು 20 ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ದಕ್ಷಿಣ-2, ಬರ್ಕೆ-1, ಕಾವೂರು-1, ಸುಳ್ಯ-1 ಠಾಣೆಗಳಲ್ಲಿ ಒಟು 5 ಕೊಲೆ ಪ್ರಕರಣಗಳು ದಾಖಲಾಗಿರುತ್ತದೆ. ಈತ ಪ್ರಸ್ತುತ ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಕಳೆದ 2 ವರ್ಷಗಳಿಂದ ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿದ್ದಾನೆ. ಕೃತ್ಯದಲ್ಲಿ ಭಾಗಿಯಾಗಿರುವ ಉಳಿದ ಆರೋಪಿಗಳ ಪತ್ತೆಯ ಕುರಿತು ವಿಶೇಷ ತಂಡದ ತನಿಖೆ ಮುಂದುವರಿದಿದೆ.
ತನಿಖೆ ಬಹುತೇಕ ಪೂರ್ಣ
ಸುರೇಂದ್ರ ಬಂಟ್ವಾಳ್ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಈಗಾಗಲೇ ಪ್ರಮುಖ ಆರೋಪಿಗಳ ಬಂಧನವಾಗಿದೆ. ಇನ್ನೂ 2-3 ಮಂದಿ ಇರುವ ಸಾಧ್ಯತೆ ಇದ್ದು, ತನಿಖೆ ಮುಂದುವರಿದಿದೆ. ಹಣ ದೋಚಿರುವ ಆರೋಪದ ಕುರಿತು ವಿಚಾರಣೆ ನಡೆಯುತ್ತಿದೆ. ಫರಂಗಿಪೇಟೆಯ ಫೋಟೋೂಗ್ರಾಫರ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ನಾಲ್ವರ ಬಂಧನ ಆಗಿದೆ. ಮೆಲ್ಕಾರ್ನಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ತನಿಖೆ ಮುಂದುವರಿದಿದೆ.
– ಬಿ.ಎಂ. ಲಕ್ಷ್ಮಿ ಪ್ರಸಾದ್, ದ.ಕ. ಜಿಲ್ಲಾ ಎಸ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ