Crime: ಮೊಬೈಲ್ ಅಪರಾಧ ಪತ್ತೆ ಹಚ್ಚುವುದೇ ಸವಾಲು !
ಶೇ.90 ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಮೊಬೈಲ್ ಸಂದೇಶ, ಕರೆಗಳು
Team Udayavani, Oct 29, 2023, 10:57 PM IST
ಬೆಂಗಳೂರು: ರಾಜ್ಯದಲ್ಲಿ ಅಪರಾಧ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ದುಪ್ಪಟ್ಟಾಗುತ್ತಿದ್ದು, ಸೈಬರ್ ಕ್ರೈಂ, ಅಪಹರಣ, ಪೋಕ್ಸೋ, ಸುಲಿಗೆ, ಕೊಲೆ, ಅತ್ಯಾಚಾರ, ಹಲ್ಲೆ, ಬೆದರಿಕೆ ಸಹಿತ ಇತ್ತೀಚೆಗಿನ ಪ್ರತಿ ಅಪರಾಧಗಳೂ ಮೊಬೈಲ್ ಸಾಕ್ಷ್ಯದ ಆಧಾರದಲ್ಲಿ ಮುಂದಿನ ಆಯಾಮ ಪಡೆದುಕೊಳ್ಳುತ್ತದೆ. ಆದರೆ ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯ(ಎಫ್ಎಸ್ಎಲ್)ಕ್ಕೆ ಮೊಬೈಲ್ ಸಾಕ್ಷ್ಯ ಪತ್ತೆ ಹಚ್ಚಿ ವರದಿ ನೀಡುವುದೇ ದೊಡ್ಡ ಸವಾಲಾಗಿದೆ.
ಇತ್ತೀಚೆಗೆ ರಾಜ್ಯದಲ್ಲಿ ನಡೆಯುತ್ತಿರುವ ಶೇ.90ರಷ್ಟು ಅಪರಾಧ ಪ್ರಕರಣಗಳಲ್ಲಿ ಆರೋಪಿಗಳ ಮೊಬೈಲ್ ಸಂದೇಶಗಳು, ಕರೆಗಳು, ಲೊಕೇಶನ್ಗಳೇ ಪ್ರಮುಖ ಸಾಕ್ಷ್ಯವಾಗಿದೆ. ಮೊಬೈಲ್ ಸಾಕ್ಷ್ಯಗಳಿಂದಲೇ ತನಿಖಾಧಿಕಾರಿಗಳು ಮುಂದಿನ ತನಿಖಾ ಮಾರ್ಗ ಕಂಡುಕೊಳ್ಳುತ್ತಾರೆ. ಚಾರ್ಜ್ಶೀಟ್ನಲ್ಲೂ ಮೊಬೈಲ್ ಸಾಕ್ಷ್ಯಗಳನ್ನೇ ಉಲ್ಲೇಖೀಸಲಾಗುತ್ತಿದೆ. ಆದರೆ, ತನಿಖಾಧಿಕಾರಿಗಳು ಕಳುಹಿಸುವ ಆರೋಪಿಗಳ ಮೊಬೈಲ್ ರಿಟ್ರೈವ್ ಮಾಡಿ ಸಾಕ್ಷ್ಯ ಪತ್ತೆ ಹಚ್ಚಿ ಸೂಕ್ತ ಸಮಯಕ್ಕೆ ವರದಿ ನೀಡುವಲ್ಲಿ ಎಫ್ಎಸ್ಎಲ್ ವಿಫಲವಾಗಿದೆ. ಜತೆಗೆ ಮೊಬೈಲ್ ಡಾಟಾ ಕಲೆ ಹಾಕಲು ಹಲವು ತಿಂಗಳುಗಳೇ ಹಿಡಿಯುತ್ತದೆ. ಪರಿಣಾಮ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿರುವ ಶೇ.30ರಷ್ಟು ಪ್ರಕರಣಗಳು ಹಳ್ಳಹಿಡಿದರೆ, ಶೇ.50ರಷ್ಟು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಜಾಗೊಳ್ಳುತ್ತಿವೆ.
30 ಸಾವಿರ ಕೇಸ್ ಎಫ್ಎಸ್ಎಲ್ಗೆ
ರಾಜ್ಯದಲ್ಲಿರುವ ಕಾನೂನು ಸುವ್ಯವಸ್ಥೆ, ಸೈಬರ್ ಕ್ರೈಂ ಪೊಲೀಸ್ ಠಾಣೆಗಳಿಂದ ಪ್ರತಿವರ್ಷ ಸುಮಾರು 30 ಸಾವಿರಕ್ಕೂ ಹೆಚ್ಚಿನ ಪ್ರಕರಣಗಳು ಎಫ್ಎಸ್ಎಲ್ಗೆ ಬರುತ್ತಿವೆ. ಈ ಪೈಕಿ ಶೇ.70ರಷ್ಟು ಮೊಬೈಲ್ಗಳೇ ಇರುತ್ತವೆ. ಪ್ರಸ್ತುತ 3,400 ಸಾವಿರ ಕೇಸ್ಗಳಲ್ಲಿ ವರದಿ ನೀಡಲು ಬಾಕಿ ಇವೆ. ಸುಮಾರು 1,800 ಮೊಬೈಲ್ ಅಪರಾಧ ಪ್ರಕರಣಗಳಿವೆ. ಮೊಬೈಲ್ ಫಾರೆನ್ಸಿಕ್ ಹೊರತುಪಡಿಸಿ ಉಳಿದ ಪ್ರಕರಣಲ್ಲಿ ಒಂದು ತಿಂಗಳೊಳಗೆ ವರದಿಯು ತನಿಖಾಧಿಕಾರಿಗಳ ಕೈ ಸೇರುತ್ತಿವೆ. ಬೆಂಗಳೂರಿನಲ್ಲಿ ಎಫ್ಎಸ್ಎಲ್ನ ಪ್ರಧಾನ ಕಚೇರಿಯಿದ್ದು, ಇಲ್ಲಿ 13 ವಿಭಾಗಗಳಿವೆ. ದಾವಣಗೆರೆ, ಮಂಗಳೂರು, ಕಲಬುರಗಿ, ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಬಳ್ಳಾರಿ ಜಿಲ್ಲೆಗಳಲ್ಲಿ 1 ಸ್ಥಳೀಯ ಎಫ್ಎಸ್ಎಲ್ಗಳಿವೆ. ಇಲ್ಲಿ 6 ವಿಭಾಗಗಳಿವೆ. ನಾರ್ಕೋಟಿಕ್ಸ್ನಂತಹ ಕೆಲವೊಂದು ಗಂಭೀರ ಪ್ರಕರಣಗಳಲ್ಲಿ ಪರೀಕ್ಷಿಸಿ ವರದಿ ನೀಡುವ ವ್ಯವಸ್ಥೆ ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದೆ.
6 ತಿಂಗಳಲ್ಲಿ ಸಮಸ್ಯೆಗೆ ಮುಕ್ತಿ
ಮೊಬೈಲ್ ಅಪರಾಧಗಳಲ್ಲಿ ಸಾಕ್ಷ್ಯ ಪತ್ತೆಹಚ್ಚಲು ಬೇಕಾಗುವ ಆಧುನಿಕ ಉಪಕರಣ ಹಾಗೂ ಹೊಸ ಸಾಫ್ಟ್ವೇರ್ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. 8 ಪ್ರಯೋಗಾಲಯಗಳಲ್ಲೂ ಇದಕ್ಕೆ ಬೇಕಾದ ಕೆಲವು ಮರು ವಿನ್ಯಾಸಗಳನ್ನೂ ಮಾಡಲಾಗುತ್ತಿದೆ. ಮೊಬೈಲ್ನಲ್ಲಿರುವ ಡಾಟಾ ಪತ್ತೆ ಹಚ್ಚುವ ತಜ್ಞರನ್ನೂ ನೇಮಿಸಲಾಗುತ್ತಿದೆ. ಬೇರೆ ಇಲಾಖೆಗಳಲ್ಲಿರುವ ಉಪಕರಣಗಳ ಮರು ವಿನ್ಯಾಸ ಮಾಡಲಾಗುತ್ತಿದೆ. ಕೆಲವು ಆಧುನಿಕ ವ್ಯವಸ್ಥೆ ಅಳವಡಿಕೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ರಾಜ್ಯ ಎಫ್ಎಸ್ಎಲ್ ನಿರ್ದೇಶಕಿ ಡಾ|ದಿವ್ಯಾ ವಿ.ಗೋಪಿನಾಥ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಶೇ.24ರಷ್ಟು ಹುದ್ದೆ ಖಾಲಿ
ರಾಜ್ಯ ಎಫ್ಎಸ್ಎಲ್ಗಳಲ್ಲಿ ಒಟ್ಟಾರೆ 530 ಸಿಬಂದಿಯಿದ್ದಾರೆ. ಇನ್ನೂ ಶೇ.24ರಷ್ಟು ಹುದ್ದೆಗಳು ಭರ್ತಿ ಮಾಡಬೇಕಿವೆ. ಇದರಲ್ಲಿ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರಂತಹ ಭಡ್ತಿ ಹುದ್ದೆಗಳೇ ಹೆಚ್ಚು. ವಿಜ್ಞಾನ ಅಧಿಕಾರಿ ಹುದ್ದೆಗಳು ಶೇ.10ರಷ್ಟು ಖಾಲಿಯಿದೆ. ಈ ಹಿಂದೆ ಪ್ರತಿ ವರ್ಷ 7 ಸಾವಿರಕ್ಕೂ ಅಧಿಕ ಪ್ರಕರಣಗಳ ವರದಿ ನೀಡುವುದು ಬಾಕಿ ಉಳಿಯುತ್ತಿದ್ದವು. ಈಗ ಕೆಲವು ಆಧುನಿಕ ವ್ಯವಸ್ಥೆಯಿಂದಾಗಿ ಕಡಿಮೆ ಅವಧಿಯಲ್ಲಿ ಹೆಚ್ಚು ವರದಿ ವಿಲೇವಾರಿ ಮಾಡಲಾಗುತ್ತಿದೆ. ಡಿಎನ್ಎ ವರದಿ ಬರಲು ಈ ಹಿಂದೆ 2 ವರ್ಷಗಳು ಹಿಡಿಯುತ್ತಿದ್ದವು. ಸದ್ಯ ಒಂದು ತಿಂಗಳೊಳಗೆ ಡಿಎನ್ಎ ವರದಿ ನೀಡಬಹುದು ಎಂದು ಅಲ್ಲಿನ ತಜ್ಞರು ವಿವರಿಸಿದ್ದಾರೆ.
ವನ್ಯಜೀವಿ ಎಫ್ಎಸ್ಎಲ್ಗೆ 2.50 ಕೋಟಿ ರೂ.
ಹಲವು ವರ್ಷಗಳಿಂದ ನಿರೀಕ್ಷೆಯಲ್ಲಿದ್ದ ವನ್ಯಜೀವಿ ಎಫ್ಎಸ್ಎಲ್ ನಿರ್ಮಾಣಕ್ಕಾಗಿ ಸರಕಾರದಿಂದ 2.50 ಕೋಟಿ ರೂ. ಅನುದಾನ ಸಿಕ್ಕಿದೆ. 2024 ಜನವರಿಯಲ್ಲಿ ಕಾರ್ಯ ಇದು ರೂಪಕ್ಕೆ ಬರಲಿದೆ. ವನ್ಯಜೀವಿಗಳ ದಂತ, ಕೋಡು, ಚರ್ಮ, ಮಾಂಸ, ಮೂಳೆ, ತುಪ್ಪಳ, ಕೊಂಬುಗಳ ಕಳ್ಳಸಾಗಣೆ ಹಾಗೂ ಬೇಟೆಯಾಡಿ ಸಿಕ್ಕಿ ಬಿದ್ದಾಗ ಇದು ಇಂತಹುದೇ ಪ್ರಾಣಿಯ ಅಂಗಾಂಗ ಎಂದು ದೃಢೀಕರಿಸಲಿದೆ. ಸದ್ಯ ಡೆಹ್ರಾಡೂನ್ ಅಥವಾ ಹೈದರಾಬಾದ್ ಲ್ಯಾಬ್ಗ ಕಳುಹಿಸಲಾಗುತ್ತಿದೆ. ಇದಕ್ಕೆ ವೆಚ್ಚ ಹಾಗೂ ಸಮಯ ಹೆಚ್ಚು.
ಎಫ್ಎಸ್ಎಲ್ಗೆ ಬರುವ ಅಪರಾಧ ಪ್ರಕರಣ ಪ್ರಮಾಣ ಹೆಚ್ಚಾಗುತ್ತಿದೆ. ಮೊಬೈಲ್ ಸಾಕ್ಷ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೂಲಂಕಷವಾಗಿ ಪರಿಶೀಲಿಸಿ ವರದಿ ನೀಡುವುದು ಕೊಂಚ ವಿಳಂಬವಾಗುತ್ತಿದೆ. ಮೊಬೈಲ್ ಫೋರೆನ್ಸಿಕ್ ವರದಿ ಶೀಘ್ರದಲ್ಲೇ ನೀಡಲು ಕೆಲವೊಂದು ಹೊಸ ಕ್ರಮ ಜಾರಿಗೆ ತರಲು ಚಿಂತಿಸಲಾಗಿದೆ.
– ಡಾ| ದಿವ್ಯಾ ವಿ.ಗೋಪಿನಾಥ್, ನಿರ್ದೇಶಕಿ. ರಾಜ್ಯ ಎಫ್ಎಸ್ಎಲ್.
ಅವಿನಾಶ ಮೂಡಂಬಿಕಾನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ