ಉತ್ತರ ಕರ್ನಾಟಕಕ್ಕೆ “ನೆರೆ’ ಹೊರೆ
Team Udayavani, Aug 5, 2019, 3:10 AM IST
ಹುಬ್ಬಳ್ಳಿ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬರಗಾಲದಲ್ಲೂ ಉತ್ತರ ಕರ್ನಾಟಕ ಅಕ್ಷರಶಃ ತತ್ತರಿಸಿ ಹೋಗಿದೆ. ಕೃಷ್ಣಾ, ಭೀಮಾ, ವೇದಗಂಗಾ, ದೂಧ್ಗಂಗಾ, ಮಲಪ್ರಭಾ, ಘಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ, ಕಾಳಿ, ಅಘನಾಶಿನಿ ಸೇರಿ ಪ್ರಮುಖ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಐದು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಹಲವೆಡೆ ಗಂಜಿ ಕೇಂದ್ರ ತೆರೆಯಲಾಗಿದ್ದು, 38 ಸೇತುವೆಗಳು ಮುಳು ಗಡೆಯಾಗಿ ಕೆಲವೆಡೆ ಸಂಪರ್ಕ ಕಡಿತ ಗೊಂಡಿದೆ. 900ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
27 ಸೇತುವೆ ಮುಳುಗಡೆ: ನದಿಗಳಲ್ಲಿ ನೀರಿನ ಮಟ್ಟ ಒಂದೇ ಸಮನೆ ಏರಿಕೆ ಆಗುತ್ತಿರು ವುದರಿಂದ ಬೆಳಗಾವಿ ಜಿಲ್ಲಾವ್ಯಾಪ್ತಿಯಲ್ಲಿ 27 ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ನದಿಗೆ 2.31 ಲಕ್ಷ ಕ್ಯೂಸೆಕ್ ನೀರು ಹರಿದು ಬರಲಾರಂಭಿಸಿದ್ದು, ಪ್ರವಾಹಕ್ಕೆ ತುತ್ತಾಗಿರುವ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿನ 54 ಕುಟುಂಬಗಳ 162 ಜನ, ಯಡೂರವಾಡಿಯ 49 ಕುಟುಂಬಗಳ 147 ಜನ ಹಾಗೂ ಮಾಂಜರಿ ಗ್ರಾಮದ 8 ಕುಟುಂಬಗಳ 24 ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ.
ಈ ಮೂರು ಗ್ರಾಮಗಳಲ್ಲಿ ತಲಾ ಒಂದು ಗಂಜಿ ಕೇಂದ್ರ ಆರಂಭಿಸಲಾಗಿದೆ. ಅಥಣಿ ತಾಲೂಕಿನ ಸಪ್ತಸಾಗರ ಗ್ರಾಮದ 40 ಕುಟುಂಬಗಳ 150 ಜನ, ನಾಗನೂರು ಪಿ.ಕೆ.ಗ್ರಾಮದ ಕುಟುಂಬಗಳ 25 ಜನ, ನದಿ ಇಂಗಳಗಾವದ ಆರು ಕುಟುಂಬಗಳ 18 ಜನ, ಶಿರಹಟ್ಟಿ ಗ್ರಾಮದ 10 ಕುಟುಂಬಗಳ 28 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಗೋಕಾಕ ತಾಲೂಕಿನ ಕುಂದರಗಿ ಮಠದಲ್ಲಿ ಬಳ್ಳಾರಿ ಹಳ್ಳದ ನೀರಿನ ಪ್ರವಾಹದಿಂದ ಸಿಲುಕಿದ್ದ ಅರ್ಚಕ ಸೇರಿ 19 ಜನ ಸೇರಿದಂತೆ ಇದುವರೆಗೆ 700ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ.