ಎರಡು ದಿನ ಚಾರ್ಮಾಡಿ ಘಾಟಿ ಬಂದ್; ಶಿವಪ್ಪ ನಾಯಕ ಅರಮನೆ ವಸ್ತುಸಂಗ್ರಹಾಲಯದ ಮೇಲೆ ಬಿದ್ದ ಮರ
Team Udayavani, Aug 7, 2019, 1:32 PM IST
ಚಿಕ್ಕಮಗಳೂರು/ಶಿವಮೊಗ್ಗ: ಮಲೆನಾಡಿನಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಬುಧವಾರ ಮತ್ತು ಗುರುವಾರ ಎರಡು ದಿನಗಳ ಕಾಲ ವಾಹನ ಸಂಚಾರ ಬಂದ್ ಮಾಡಲಾಗಿದೆ.
ಭಾರೀ, ಗಾಳಿ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಪದೇ, ಪದೇ ಗುಡ್ಡ ಕುಸಿತ ಹಾಗೂ ಮರಗಳು ಉರುಳಿ ಬೀಳುತ್ತಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾತ್ರಿವರೆಗೆ ಚಾರ್ಮಾಡಿ ಘಾಟಿಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ತಿಳಿಸಿದ್ದಾರೆ.
ಶಿವಮೊಗ್ಗ: ಶಿವಪ್ಪ ನಾಯಕ ಅರಮನೆ ವಸ್ತುಸಂಗ್ರಹಾಲಯದ ಮೇಲೆ ಬಿದ್ದ ಮರ
ಭಾರೀ ಗಾಳಿ ಮಳೆಯಿಂದಾಗಿ ಶಿವಮೊಗ್ಗದ ಶಿವಪ್ಪ ನಾಯಕ ಅರಮನೆ ಆವರಣದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಹಾಲಯದ ಮೇಲೆ ಬೃಹತ್ ಮರ ಉರುಳಿ ಬಿದ್ದ ಘಟನೆ ಬುಧವಾರ ನಡೆದಿದೆ. ಹದಿನೈದಕ್ಕೂ ಹೆಚ್ಚು ವಿಗ್ರಹಗಳು ಪೀಠದ ಸಹಿತ ನೆಲಕ್ಕುರುಳಿದ್ದವು.
ಆದರೆ ವಿಗ್ರಹದ ಕೆಳಗೆ ಹಾಕಿದ್ದ ಪೀಠ ಧ್ವಂಸಗೊಂಡಿದ್ದು, ಬೇರೆ ಯಾವುದೇ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ.