ಇಂದೂ ಬಿಜೆಪಿ ಶಾಸಕಾಂಗ ಸಭೆ
Team Udayavani, Jul 10, 2019, 5:06 AM IST
ಬೆಂಗಳೂರು: ಮೈತ್ರಿ ಸರಕಾರದ ಸಂಖ್ಯಾಬಲ ಕುಸಿದಿರುವ ಹಿನ್ನೆಲೆಯಲ್ಲಿ ಬುಧವಾರ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಪಕ್ಷದ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜತೆಗೆ ಮತ್ತೆ ಬುಧವಾರ ಸಂಜೆ ಶಾಸಕಾಂಗ ಸಭೆ ನಡೆಸಲು ನಿರ್ಧರಿಸಿದೆ.
ಸರಕಾರದಿಂದ ರಿವರ್ಸ್ ಆಪರೇಷನ್ ಪ್ರಯತ್ನ ನಡೆಯುತ್ತಿದ್ದು, ಬಿಜೆಪಿಯ ಎಲ್ಲ ಶಾಸಕರು ಯಾರದೇ, ಯಾವುದೇ ಆಮಿಷಕ್ಕೆ ಒಳಗಾಗದೆ ಒಗ್ಗಟ್ಟಿನಿಂದ ಇರುವಂತೆ ಯಡಿಯೂರಪ್ಪ ಅವರು ಸಭೆಯಲ್ಲಿ ಸೂಚಿಸಿದರು.
ರೆಸಾರ್ಟ್ನಲ್ಲೇ ಜೆಡಿಎಸ್ ಶಾಸಕರು
ಆಪರೇಷನ್ ಭೀತಿ ಹಿನ್ನೆಲೆಯಲ್ಲಿ ರೆಸಾರ್ಟ್ ಸೇರಿರುವ ಜೆಡಿಎಸ್ ಶಾಸಕರು ಶುಕ್ರವಾರದವರೆಗೆ ಅಲ್ಲೇ ಉಳಿಯಲಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ರೆಸಾರ್ಟ್ಗೆ ತೆರಳಿ ಶಾಸಕರ ಜತೆ ಸಭೆ ನಡೆಸಿದ್ದು, ಅಲ್ಲೇ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ನೇರವಾಗಿ ಶುಕ್ರವಾರದ ಅಧಿವೇಶನಕ್ಕೆ ಅವರು ಆಗಮಿಸಲಿದ್ದಾರೆ.