Ullal: ತೆಂಗಿನಮರದಿಂದ ಬಿದ್ದು ಸಾವು
Team Udayavani, Jan 22, 2024, 11:19 PM IST
ಉಳ್ಳಾಲ: ಮುನ್ನೂರು ಗ್ರಾಮದ ನೇತ್ರಾವತಿ ನದಿ ತಟದ ಸೋಮನಾಥ ಉಳಿಯ ಬಳಿ ಮನೆಯೊಂದರ ತೆಂಗಿನ ಮರದಿಂದ ಶೇಂದಿ ತೆಗೆಯುವ ಸಂದರ್ಭ ಮುನ್ನೂರು ಸಂತೋಷ ನಗರ ನಿವಾಸಿ ವಿಶ್ವಾಂಬರನ್ (58) ಅವರು ತೆಂಗಿನ ಮರದಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಕೊಣಾಜೆ ಮೂರ್ತೆದಾರರ ಸಂಘದ ಮಾಜಿ ನಿರ್ದೇಶಕ ಮೂಲತಃ ಧರ್ಮಸ್ಥಳ ಪುದುವೆಟ್ಟು ನಿವಾಸಿಯಾಗಿರುವ ವಿಶ್ವಾಂಬರನ್ ಪತ್ನಿ, ಮೂವರು ಪುತ್ರಿಯರೊಂದಿಗೆ ಸಂತೋಷ್ನಗರದಲ್ಲಿ ನೆಲೆಸಿದ್ದರು. ಎಂದಿನಂತೆ ಸೋಮವಾರ ಬೆಳಗ್ಗೆ ತಾನು ಗುತ್ತಿಗೆ ವಹಿಸಿಕೊಂಡ ಕುತ್ತಾರು ಸೋಮನಾಥ ಉಳಿಯ ಸಮೀಪದ ತೆಂಗಿನಮರಕ್ಕೆ ಹತ್ತಿದ್ದವರು ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೊಣಾಜೆ ಮೂರ್ತೆದಾರರ ಸಂಘದ ನಿರ್ದೇಶಕರಾಗಿದ್ದ ಅವರು, ಮೂರು ತಿಂಗಳ ಹಿಂದೆಯಷ್ಟೇ ರಾಜೀನಾಮೆ ನೀಡಿ ಸದಸ್ಯರಾಗಿ ಮುಂದುವರಿದಿದ್ದರು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.