ವಿಧಾನಕದನ ಕರಾವಳಿ ಕಣ ಹೀಗೂ ಉಂಟು: ಎಂಟೇ ಕ್ಷೇತ್ರ 9 ಶಾಸಕರು!
ಇಲ್ಲಿನ ವಿಶೇಷವೆಂದರೆ ಪ್ರತಿ ಪಕ್ಷಗಳಿಂದಲೂ ಇಬ್ಬರು ಸ್ಪರ್ಧಿಸುತ್ತಿದ್ದರು
Team Udayavani, Mar 9, 2023, 1:04 PM IST
1951 ಮೊದಲ ಚುನಾವಣೆ. ಆಗ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಈಗಿನ ಎರಡೂ ಜಿಲ್ಲೆಯನ್ನು ಸೇರಿಸಿದಂತೆ ಎಂಟು ಕ್ಷೇತ್ರಗಳಿದ್ದವು. ಮಂಗಳೂರು, ಉಡುಪಿ, ಮೂಲ್ಕಿ, ಕಾರ್ಕಳ, ಕುಂದಾಪುರ, ಬ್ರಹ್ಮಾವರ, ಪಾಣೆ ಮಂಗಳೂರು ಹಾಗೂ ಪುತ್ತೂರು ಕ್ಷೇತ್ರಗಳಿದ್ದವು. ಈ ಸಂದರ್ಭದಲ್ಲಿ ಏಕಸದಸ್ಯ ಕ್ಷೇತ್ರಗಳು ಹಾಗೂ ದ್ವಿಸದಸ್ಯ ಕ್ಷೇತ್ರಗಳು ಎಂದಿದ್ದವು.
ಇಡೀ ಮದ್ರಾಸ್ ಪ್ರಾಂತ್ಯದ 309 ಕ್ಷೇತ್ರಗಳಲ್ಲಿ 243 ಏಕಸದಸ್ಯ ಕ್ಷೇತ್ರಗಳಾಗಿದ್ದರೆ, 66 ದ್ವಿಸದಸ್ಯ ಕ್ಷೇತ್ರಗಳಾಗಿದ್ದವು. ಈ ಪೈಕಿ ಪುತ್ತೂರು ಒಂದೇ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಿಂದ ದ್ವಿಸದಸ್ಯ ಸ್ಥಾನ ಪಡೆದದ್ದು. ಇಲ್ಲಿನ ವಿಶೇಷವೆಂದರೆ ಪ್ರತಿ ಪಕ್ಷಗಳಿಂದಲೂ ಇಬ್ಬರು ಸ್ಪರ್ಧಿಸುತ್ತಿದ್ದರು. ಅವರಲ್ಲಿ ಮೊದಲು ಮತ್ತು ಎರಡನೇ ಸ್ಥಾನದಲ್ಲಿ ಹೆಚ್ಚು ಮತ ಗಳಿಸಿದವರು ಆಯ್ಕೆಯಾಗುತ್ತಿದ್ದರು.
ಮೊದಲ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಗೆದ್ದದ್ದು ಕಾಂಗ್ರೆಸ್ನ ಕೆ. ವೆಂಕಟ್ರಮಣ ಗೌಡ ಹಾಗೂ ಕೆ. ಈಶ್ವರ. ಇಬ್ಬರೂ ಅನುಕ್ರಮವಾಗಿ ಗಳಿಸಿದ ಮತ 42, 735 ಹಾಗೂ 42, 299. ಹಾಗಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 8 ಕ್ಷೇತ್ರಗಳಿಗೆ 9 ಮಂದಿ ಶಾಸಕರಾಗಿದ್ದರು !