ನಾನು ತೆರವಾದಾಗ ಅದೇ ಪರಮಾತ್ಮ
Team Udayavani, Feb 8, 2021, 8:00 AM IST
ಯಾವಾಗ ನಾನು ಇಲ್ಲವಾಗುವುದೋ ಆಗ ದೇವತ್ವವಿರುತ್ತದೆ. ಆತ್ಮ ಮತ್ತು ಪರಮಾತ್ಮನ ನಡುವಣ ಪರದೆ ನಾನು. ಅದು ಸರಿದರೆ ಎರಡೂ ಒಂದೇ ಆಗುತ್ತದೆ. “ನಾನು’ ಇಲ್ಲದೆ ಇರುವುದನ್ನು ಹೇಳುವುದಕ್ಕೂ ಸಾಧ್ಯವಿಲ್ಲ. ಯಾಕೆಂದರೆ ಅದೇ ಇಲ್ಲವಲ್ಲ!
ಮುಲ್ಲಾ ನಾಸಿರುದ್ದೀನನ ಬಗ್ಗೆ ನೀವು ಕೇಳಿಯೇ ಇರುತ್ತೀರಿ. ತಮಾಶೆಯೊಳಗಿ ನಿಂದಲೇ ಅತ್ಯದ್ಭುತ ಪಾಠಗಳನ್ನು ಹೇಳುವ ಅವನ ಕಥೆಗಳನ್ನಾದರೂ. ಇದು ಅಂಥವುಗಳಲ್ಲಿ ಒಂದು.
ಸೂಫಿ ಸಂತನಾಗಿದ್ದರೂ ನಾಸಿರುದ್ದೀನನೂ ಮೃತ್ಯುವಿನ ಬಗ್ಗೆ ಅಪಾರ ಭಯ ಹೊಂದಿದ್ದ; ನಮ್ಮ ನಿಮ್ಮೆಲ್ಲರ ಹಾಗೆ.
ಒಂದು ದಿನ ಅವನ ಊರಿನಲ್ಲಿ ಒಬ್ಬರು ಸತ್ತು ಹೋದರು. ಆ ಸುದ್ದಿ ನಾಸಿರುದ್ದೀನನ ಕಿವಿಗೆ ಬಿತ್ತು. ಮನಸ್ಸಿನ ಮೂಲೆಯಲ್ಲಿ ಅಡಗಿದ್ದ ಸಾವಿನ ಭೀತಿ ಎದ್ದೆದ್ದು ಕುಣಿಯಿತು. ಅವನು ಥರಗುಡುತ್ತ ಮನೆಗೆ ಬಂದು, “ನಾನು ಕೂಡ ಸಾಯುತ್ತೇನಲ್ಲ. ಆಗ ನನಗೆ ಅದು ತಿಳಿಯುವುದು ಹೇಗೆ? ಸಾವಿನ ಲಕ್ಷಣಗಳೇನು. ಅದು ಬಂದಿದೆ ಎಂಬುದು ಹೇಗೆ ಗೊತ್ತಾಗುತ್ತದೆ, ಹೇಳು’ ಎಂದೆಲ್ಲ ಬಡಬಡಿಸಿದ.
ಹೆಂಡತಿ ಅವನನ್ನು ಸಮಾಧಾನ ಪಡಿಸಿದಳು. “ಒಮ್ಮೆ ಸುಮ್ಮನಿರಿ ನೀವು. ಹಾಗೆಲ್ಲ ಏನೂ ಆಗುವುದಿಲ್ಲ. ಮನುಷ್ಯರು ಸಾಯುವಾಗ ಕೈಕಾಲುಗಳು ಥಂಡಿಯಾಗುತ್ತವೆ…’ ಎಂದಳು.
ಸ್ವಲ್ಪ ಕಾಲ ಕಳೆದ ಬಳಿಕ ಚಳಿಗಾಲ ಬಂತು. ಒಂದು ದಿನ ಬೆಳಗ್ಗೆ ನಾಸಿರು ದ್ದೀನ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕೈಗಳು ತಂಪುತಂಪಾಗಿದ್ದದ್ದು ಅನುಭವಕ್ಕೆ ಬಂತು. ಅವನು ಹೆದರಿದ. ತಾನು ಸಾಯುತ್ತಿದ್ದೇನೆ ಎಂದುಕೊಂಡ. ಸಾಯುತ್ತಿರುವವರು ಏನೆಲ್ಲ ಮಾಡ ಬೇಕು ಎಂದೆಲ್ಲ ಆಲೋಚಿಸತೊಡಗಿದ. ಸತ್ತವರು ಮಲಗಿರುತ್ತಾರೆ ಎಂದು ಯಾರೋ ಹೇಳಿದ್ದು ನೆನಪಾಯಿತು. ಹಾಗಾಗಿ ಮಲಗಬೇಕು ಎಂದುಕೊಂಡು ಹೊಲದ ಬದಿಯಲ್ಲಿಯೇ ಕಣ್ಣುಮುಚ್ಚಿ ಉದ್ದಕ್ಕೆ ಸುಮ್ಮನೆ ಮಲಗಿಕೊಂಡ.
ತುಂಬ ಹೊತ್ತಾಯಿತು. ಮಧ್ಯಾಹ್ನ ವಾಯಿತು. ಅಷ್ಟು ಹೊತ್ತಿಗೆ ಅದೇ ದಾರಿಯಾಗಿ ಕೆಲವು ದಾರಿಹೋಕರು ಬಂದರು.
ಬಿದ್ದುಕೊಂಡಿದ್ದ ನಾಸಿರು ದ್ದೀನನ್ನು ಕಂಡು ಸತ್ತು ಹೋಗಿದ್ದಾನೆ ಎಂದು ಭಾವಿಸಿದರು. ಶವವನ್ನು ಹಾಗೆಯೇ ಬಿಡುವುದು ಸರಿಯಲ್ಲವಲ್ಲ. ಹಾಗಾಗಿ ದೇಹವನ್ನು ಎತ್ತಿ ಹೆಗಲ ಮೇಲೆ ಇರಿಸಿಕೊಂಡು ಹೊರಟರು. ಅವರಿಗೆ ಶ್ಮಶಾನಕ್ಕೆ ಹೋಗಬೇಕಿತ್ತು. ಆದರೆ ಅವರು ಅದೇ ಊರಿನವರಲ್ಲ. ಹಾಗಾಗಿ ದಾರಿ ತಿಳಿದಿರಲಿಲ್ಲ. ಸ್ವಲ್ಪ ದೂರ ಹೋಗುವಾಗ ಯಾರಾದರೂ ಸಿಗಬಹುದು ಎಂದು ತಮ್ಮೊಳಗೆಯೇ ಮಾತಾಡಿಕೊಂಡರು.
ನಾಸಿರುದ್ದೀನ ತನ್ನ ಷ್ಟಕ್ಕೇ ಯೋಚಿಸಿದ, “ಶ್ಮಶಾನ ಎಲ್ಲಿದೆ ಎಂದು ನನಗೆ ಗೊತ್ತಿದೆ. ಆದರೆ ಸತ್ತವರು ಮಾತನಾಡು ವುದಿಲ್ಲ. ಅದು ನಿಯಮಕ್ಕೆ ವಿರುದ್ಧ. ಹಾಗಾಗಿ ಸುಮ್ಮನೆ ಇರುತ್ತೇನೆ.’
ದಾರಿಹೋಕರು ಸಾಕಷ್ಟು ದೂರ ನಡೆದರೂ ಶ್ಮಶಾನ ಸಿಗಲಿಲ್ಲ. ನಾಸಿರು ದ್ದೀನ ಮೌನವಾಗಿ ಅವರ ಹೆಗಲ ಮೇಲೆ ಮಲಗಿದ್ದ. ಮುಸ್ಸಂಜೆಯಾಯಿತು. ರಾತ್ರಿಯೂ ಕಾಲಿರಿಸಿತು. “ಇನ್ನೇನು ಮಾಡುವುದಪ್ಪ’ ಎಂದು ದಾರಿಹೋಕರು ಮಾತಾಡಿಕೊಂಡರು. ಒಂದು ಕಡೆ ನಾಸಿರುದ್ದೀನನ್ನು ಇಳಿಸಿ ಸುಮ್ಮನೆ ಆಲೋಚಿಸುತ್ತ ನಿಂತುಕೊಂಡರು.
“ಛೆ, ಇವರು ಕಳವಳಕ್ಕೀಡಾಗಿದ್ದಾರಲ್ಲ. ನಾನು ಇವರಿಗೆ ಸಹಾಯ ಮಾಡ ಬಹುದು’ -ನಾಸಿರುದ್ದೀನ ಆಲೋಚಿ ಸಿದ. ಆದರೆ ಸತ್ತವರು ಸಹಾಯ ಮಾಡುವುದಿಲ್ಲವಲ್ಲ!
ರಾತ್ರಿ ಏರುತ್ತ ಬರುತ್ತಿತ್ತು. “ಈ ದೇಹವನ್ನು ಏನು ಮಾಡುವುದು? ಇವನ ಮನೆ ಎಲ್ಲಿ ಎಂಬುದೂ ತಿಳಿದಿಲ್ಲ. ಶ್ಮಶಾನವೂ ಸಿಗುತ್ತಿಲ್ಲ’ ಎಂದು ದಾರಿ ಹೋಕರು ಮಾತಾಡಿಕೊಂಡರು.
ನಾಸಿರುದ್ದೀನ ಮೆಲ್ಲಗೆ ಎದ್ದು ಕುಳಿತ. “ನಿಮಗೇನೂ ಅಭ್ಯಂತರ ಇಲ್ಲದಿದ್ದರೆ ಶ್ಮಶಾನದ ದಾರಿಯನ್ನು ನಾನು ತಿಳಿಸು ತ್ತೇನೆ. ಆದರೆ ನಿಯಮ ಪ್ರಕಾರ ಸತ್ತವರು ಮಾತಾಡಕೂಡದು. ನೀವು ನನಗೆ ಅವಕಾಶ ಕೊಟ್ಟರೆ ದಾರಿಯನ್ನು ನಾನು ಹೇಳುತ್ತೇನೆ, ಆ ಬಳಿಕ ಬಾಯಿ ಮುಚ್ಚಿ ಸುಮ್ಮನೆ ಇರುತ್ತೇನೆ’ ಎಂದ.
ನಿಜವಾಗಿಯೂ “ನಾನು’ ಇಲ್ಲ. ಇದೆ ಎಂದು ತಿಳಿದುಕೊಂಡು, ಅದಕ್ಕೆ ತಕ್ಕ ಚರ್ಯೆಗಳನ್ನು ರೂಢಿಸಿಕೊಂಡು ನಟಿಸುತ್ತಿದ್ದೇವೆ ಅಷ್ಟೆ.
( ಸಾರ ಸಂಗ್ರಹ)