ಆರ್ಎಂಎಸ್ಎ ಶಿಕ್ಷಕರಿಗಿಲ್ಲ ಯುಗಾದಿ ಸಂಭ್ರಮ!
Team Udayavani, Mar 17, 2018, 10:52 AM IST
ಬಾಗಲಕೋಟೆ: ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಯ ಹಲವು ಶಿಕ್ಷಕರಿಗೆ ಈ ಬಾರಿಯ ಯುಗಾದಿ ಸಂಭ್ರಮ ಇಲ್ಲ!
ರಾಜ್ಯದ ಬಾಗಲಕೋಟೆ, ವಿಜಯಪುರ, ಬೀದರ, ಕಲಬುರಗಿ, ಧಾರವಾಡ, ಬೆಳಗಾವಿ ಸೇರಿದಂತೆ ರಾಜ್ಯದ 25 ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಉನ್ನತೀಕರಿಸಿದ ಪ್ರೌಢ ಶಾಲೆಗಳ ಮುಖ್ಯಾಧ್ಯಾಪಕರು, ಶಿಕ್ಷಕರಿಗೆ ಕಳೆದ ಅಕ್ಟೋಬರ್ ನಿಂದ ವೇತನವೇ ಕೊಟ್ಟಿಲ್ಲ. ವೇತನಕ್ಕಾಗಿ ಶಿಕ್ಷಕರು, ಹಲವು ಪ್ರಯತ್ನ ಮಾಡಿದರೂ, ಯುಗಾದಿಗೆ ಸಂಬಳ ಬಂದಿಲ್ಲ.
ಪ್ರಾಥಮಿಕ ಶಿಕ್ಷಣಕ್ಕೆ ಇದ್ದ ಸರ್ವ ಶಿಕ್ಷಣ ಅಭಿಯಾನದಂತೆ ಪ್ರೌಢ ಶಿಕ್ಷಣಕ್ಕೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಎಂಬುದು ಕೇಂದ್ರ ಸರ್ಕಾರದ ಯೋಜನೆ. ಈ ಯೋಜನೆಯಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಗುರುತಿಸಿ, ಅದರಲ್ಲಿ ಅಗತ್ಯ ಇರುವೆಡೆ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಉನ್ನತೀಕರಿಸಲಾಗಿತ್ತು. ಬಳಿಕ ಆರ್ಎಂಎಸ್ಎ ಯೋಜನೆಯಡಿಯೇ ಪ್ರತ್ಯೇಕ ಶಿಕ್ಷಕರ ನೇಮಕ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಲಾಗುತ್ತಿದೆ. ಉಳಿದ ಶಿಕ್ಷಕರಂತೆ ಈ ಶಿಕ್ಷಕರಿಗೆ ರಾಜ್ಯ ಸರ್ಕಾರದಿಂದ ನೇರವಾಗಿ ಸಂಬಳ ಬರುವುದಿಲ್ಲ. ಆರ್ ಎಂಎಸ್ಎ ಶಿಕ್ಷಕರ ವೇತನಕ್ಕಾಗಿಯೇ (ಲೆಕ್ಕ ಶಿರ್ಷಿಕೆ :2201-00-102-0-69-001) ಎಂಬ ಶೀರ್ಷಿಕೆ ಇದೆ. ಇದರಡಿ ಈ ಶಿಕ್ಷಕರಿಗೆ ವೇತನ ಮಾಡಲಾಗುತ್ತದೆ. ಕಳೆದ ಅಕ್ಟೋಬರ್ನಲ್ಲಿ ಆರ್ ಎಂಎಸ್ಎ ಯೋಜನೆಯಡಿ ಕೆಲಸ ಮಾಡುವ ಶಿಕ್ಷಕರ ವರ್ಗಾವಣೆ, ಖಾಲಿ ಇದ್ದ ಹುದ್ದೆಗಳ ನೇಮಕಾತಿ ನಡೆದಿತ್ತು. ಹೀಗಾಗಿ ಹೊಸ ಹಣಕಾಸು ವರ್ಷದ ಬಳಿಕ ನಡೆದ ಈ ಪ್ರಕ್ರಿಯೆಯಿಂದ ಬಜೆಟ್ನಲ್ಲಿ ಅನುದಾನ ಮೀಸಲಿಟ್ಟಿರಲಿಲ್ಲ. ಇದರಿಂದ ಅಕ್ಟೋಬರ್ನಿಂದ ಈವರೆಗೆ (ಆರು ತಿಂಗಳಿಂದ) ವೇತನ ನೀಡಲಾಗಿಲ್ಲ ಎಂಬುದು ಹಿರಿಯ ಅಧಿಕಾರಿಗಳ ವಿವರಣೆ.
25 ಜಿಲ್ಲೆಯಲ್ಲೂ ಇದೇ ಸಮಸ್ಯೆ: ಬಾಗಲಕೋಟೆ ಸೇರಿದಂತೆ ರಾಜ್ಯದ 25 ಜಿಲ್ಲೆಗಳಲ್ಲಿ ಈ ಸಮಸ್ಯೆ ಇದೆ. ಸರ್ಕಾರದ ಮಟ್ಟದಲ್ಲಿ ತೀವ್ರ ಒತ್ತಡದ ಬಳಿಕ ಮಾರ್ಚ್ವರೆಗೆ ಶಿಕ್ಷಕರ ವೇತನ ಪಾವತಿಗೆ ಪರ್ಯಾಯ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಆರ್ಎಂಎಸ್ಎ ಶಿಕ್ಷಕರ ವೇತನ ಆರು ತಿಂಗಳಿಂದ ಆಗಿಲ್ಲ. ನಾನು ನಿರಂತರವಾಗಿ ಒತ್ತಾಯ ಮಾಡುತ್ತಲೇ ಇದ್ದೇನೆ. ಈಚೆಗೆ ಶಿಕ್ಷಣ ಸಚಿವ ತನ್ವೀರ ಸೇಠ್ಠ… ಅವರನ್ನು ಭೇಟಿ ಮಾಡಿ ಮತ್ತೆ ಒತ್ತಾಯ ಮಾಡಿದ್ದೇನೆ. ಆ ಬಳಿಕ ಪರ್ಯಾಯ ವ್ಯವಸ್ಥೆಯಡಿ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಸರ್ಕಾರದ ನಿರ್ಲಕ್ಷ್ಯದಿಂದ ಶಿಕ್ಷಕರು ವೇತನ ಇಲ್ಲದೇ ಸಮಸ್ಯೆ ಅನುಭವಿಸುವಂತಾಗಿದೆ.
ಅರುಣ ಶಹಾಪುರ, ವಿಧಾನ ಪರಿಷತ್ ಸದಸ್ಯ
ನಾನು ನವೆಂಬರ್ನಲ್ಲಿ ಜಿಲ್ಲೆಗೆ ಬಂದಿದ್ದು, ಆರ್ಎಂಎಸ್ಎ ಶಿಕ್ಷಕರ ವೇತನ ಆಗದೇ ಇರುವುದು ನನ್ನ ಗಮನಕ್ಕೆ ಬಂದಿತ್ತು. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದಕ್ಕಾಗಿ ಪ್ರತ ವ್ಯವಹಾರವೂ ನಡೆಸಲಾಗಿದೆ. ಬಜೆಟ್ನಲ್ಲಿ ಅನುದಾನ ಮೀಸಲಿಟ್ಟರದ ಕಾರಣ ಸಮಸ್ಯೆಯಾಗಿತ್ತು. ಮುಂದಿನ ವರ್ಷದಿಂದ ಈ ರೀತಿ ಸಮಸ್ಯೆ ಆಗದಂತೆ ಈಗಲೇ ಎಚ್ಚರಿಕೆ ವಹಿಸಲಾಗಿದೆ. ಒಂದು ವಾರದಲ್ಲಿ ಪಾವತಿ ಮಾಡುತ್ತೇವೆ.
ಎಂ.ಆರ್. ಕಾಮಾಕ್ಷಿ, ಉಪ ನಿರ್ದೇಶಕಿ, ಸಾರ್ವಜನಿಕ ಶಿಕ್ಷಣ ಇಲಾಖೆ
ಶ್ರೀಶೈಲ ಕೆ. ಬಿರಾದಾರ