ಟಿಸಿ ಅಳವಡಿಸುವಂತೆ ಒತ್ತಾಯಿಸಿ ಪಿಎಂ-ಸಿಎಂಗೆ ಟ್ವೀಟ್ ಮಾಡಿದ ರೈತ
Team Udayavani, Dec 7, 2018, 4:44 PM IST
ಬಾಗಲಕೋಟೆ: ಸರ್ಕಾರದ ಗಂಗಾ ಕಲ್ಯಾಣ ಯೋಜನೆಯಡಿ ತಮ್ಮ ಹೊಲದಲ್ಲಿ ಹಾಕಿದ ಕೊಳವೆ ಬಾವಿಗೆ ವಿದ್ಯುತ್ ಪರಿವರ್ತಕ (ಟಿಸಿ) ಅಳವಡಿಸುವಂತೆ ರೈತನೊಬ್ಬ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮೊರೆ ಹೋಗಿದ್ದಾರೆ. ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ರೈತ ಟೋಪಣ್ಣ ಹಳ್ಳಿ, ಪ್ರಧಾನಿ ನರೇಂದ್ರ ಮೋದಿ, ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟ್ವೀಟ್ ಮಾಡುವ ಮೂಲಕ ಒತ್ತಾಯಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಕುಮಾರಸ್ವಾಮಿಗೆ ಮಾಡಿದ ಟ್ವೀಟ್ನಲ್ಲಿ ಸೇವ್ ಫಾರ್ಮರ್ (ರೈತರನ್ನು ಕಾಪಾಡಿ) ಎಂದು ಒತ್ತಾಯಿಸಿದ್ದಾರೆ. ಇಂಧನ ಇಲಾಖೆ ಜವಾಬ್ದಾರಿ ಹೊತ್ತಿರುವ ಕುಮಾರಸ್ವಾಮಿ ಅವರಿಗೆ, ನಿಮ್ಮದೇ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಮ್ಮ ಹೊಲಕ್ಕೆ ವಿದ್ಯುತ್ ಇಲ್ಲ. ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಿ ಆರು ತಿಂಗಳಾದರೂ ವಿದ್ಯುತ್ ಸಂಪರ್ಕ ಕಲ್ಪಿಸಿಲ್ಲ. ವಿದ್ಯುತ್ ಕಂಬಗಳು ಅನಾಥವಾಗಿ ಬಿದ್ದಿವೆ. ಅವುಗಳಿಗೆ ಮುಕ್ತಿ ಕೊಡಿಸಿ ಎಂದೂ ಪ್ರತ್ಯೇಕವಾಗಿ ಟ್ವೀಟ್ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಟ್ವೀಟ್ ಮಾಡಿರುವ ಟೋಪಣ್ಣ, ನಿಮ್ಮನ್ನು ಖುದ್ದಾಗಿ ಭೇಟಿಯಾಗಿ ಸಮಸ್ಯೆ ವಿವರಿಸಬೇಕೆಂದರೆ ನೀವು ಕ್ಷೇತ್ರದಲ್ಲಿ ಸಿಗುತ್ತಿಲ್ಲ. ಕಾರಣ ಈ ಟ್ವೀಟ್ ಮೂಲಕ ಕೇಳಿಕೊಳ್ಳುತ್ತಿದ್ದು, ನಮ್ಮ ಹೊಲಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ, ಪುಣ್ಯ ಕಟ್ಟಿಕೊಳ್ಳಿ ಎಂದು ಕೇಳಿಕೊಂಡಿರುವ ವಿಡಿಯೋ ಅಪಲೋಡ್ ಮಾಡಿಯೂ ಆಗ್ರಹಿಸಿದ್ದಾರೆ.