ಮುಂದೆ ಯಾವ ಕಲಾವಿದನಿಗೂ ಸ್ಮಾರಕ ಆಗೋದು ಬೇಡ: ಜಗ್ಗೇಶ್
Team Udayavani, Dec 1, 2018, 11:30 AM IST
ನಟ ಜಗ್ಗೇಶ್ ಕೂಡಾ ಅಂಬಿ ನಮನದಲ್ಲಿ ಅಂಬರೀಶ್ ಅವರ ಗುಣಗಾನದ ಜೊತೆಗೆ ಮುಂದಿನ ಕಲಾವಿದರಿಗೆ ಸರ್ಕಾರದ ವತಿಯಿಂದ ಸ್ಮಾರಕ ಬೇಡ ಎಂಬ ಕಿವಿಮಾತು ಹೇಳಿದರು. ಅದು ಅವರ ಮಾತಲ್ಲೇ -“ಕನ್ನಡ ಚಿತ್ರರಂಗದಲ್ಲಿ ರಾಜ್-ವಿಷ್ಣು-ಅಂಬಿ ಮೂವರು ಧ್ರುವತಾರೆಗಳು. ಇವರು ಕನ್ನಡ ಚಿತ್ರರಂಗಕ್ಕೆ ನೀಡಿರುವ ಸೇವೆ ಅಪಾರ. ಈ ಮೂವರ ಚಿತ್ರ ಬದುಕು ಕೇವಲ ಒಂದೆರಡು ವರ್ಷದ್ದಲ್ಲ, ಚಿತ್ರರಂಗಕ್ಕೆ ಸುಮಾರು 40-50 ವರ್ಷದ ಕೊಡುಗೆ ಇದೆ.
ಅವರನ್ನ ಗೌರವಿಸಬೇಕಾಗಿರುವುದು ಚಿತ್ರೋದ್ಯಮ ಹಾಗೂ ಸರ್ಕಾರದ ಕರ್ತವ್ಯ. ಆ ಗೌರವ ಅವರಿಗೆ ಸಿಗಬೇಕು. ಅದು ಖಂಡಿತಾ ಸಿಗುತ್ತೆ. ಅದರಲ್ಲಿ ಯಾವುದೇ ಗೊಂದಲ ಬೇಡ. ಆದ್ರೆ, ಮುಂದಿನ ಪೀಳಿಗೆಯ ಯಾವ ಕಲಾವಿದನಿಗೂ ಸ್ಮಾರಕ ಆಗೋದು ಬೇಡ. ಹಾಗೇನಾದ್ರೂ ಸ್ಮಾರಕ ಬೇಕು ಅಂದ್ರೆ, ನಮ್ಮ ಜಾಗದಲ್ಲೇ ಅಥವಾ ಅದಕ್ಕಾಗಿಯೇ ಒಂದು ಎಕರೆ ಜಾಗ ತಗೊಂಡು ಅಲ್ಲಿ ಸ್ಮಾರಕ ಮಾಡಿಕೊಳ್ಳಿ. ನಮಗೆ ಸ್ಮಾರಕ ಮಾಡಿಕೊಡಿ ಎಂದು ಯಾವ ಕಲಾವಿದನೂ ಸರ್ಕಾರದ ಮುಂದೆ ಹೋಗಿ ಭಿಕ್ಷೆ ಬೇಡಬೇಡಿ.
ಈಗಿನ ಕಾಲದ ನಟರೆಲ್ಲ ಒಂದು ಎಕರೆ ಜಮೀನು ತೆಗೆದುಕೊಂಡು ಕಾಯ್ದಿರಿಸಬೇಕು. ಮುಂದೆ ಯಾವುದೇ ಕಲಾವಿದ ಸರ್ಕಾರದ ಮುಂದೆ ತಿರುಪೆ ಎತ್ತುವ ಕೆಲಸ ಮಾಡಬಾರದು. ನಾನು ಈಗಾಗಲೇ ಒಂದು ಎಕರೆ ಜಾಗ ತಗೊಂಡು, ಅಲ್ಲೆ ಏನ್ ಬೇಕೋ ಅದೆ ಮಾಡಿಕೊಳ್ಳಬಹುದು ಎಂದು ನನ್ನ ಪತ್ನಿಗೆ ಈಗಾಗಲೇ ಹೇಳಿದ್ದೀನಿ. ಅಂಬಿ ಮನಸ್ಸು ಮಾಡಿದ್ರೆ ಮುಖ್ಯಮಂತ್ರಿ ಆಗಬಹುದಿತ್ತು. ನನ್ನನ್ನು ಹೀರೋ ಆಗ್ಬೇಕು ಎಂದವರು ನಟ ಅಂಬರೀಶ್’ ಎಂದರು ಜಗ್ಗೇಶ್.