ಸಂಚಾರಿ ಪೊಲೀಸರಿಗೆ ವಾಕಿಟಾಕಿ ಕಿಟಿಕಿಟಿ
Team Udayavani, Dec 13, 2018, 4:14 PM IST
ಸದ್ಯ ಕೆಲ ವಾಕಿಟಾಕಿಗಳನ್ನು ರಿಪೇರಿ ಮಾಡಿಸಲಾಗುತ್ತಿದೆ. ತೀರಾ ಹಳೆಯದಾದ ವಾಕಿಟಾಕಿಗಳ ಬ್ಯಾಟರಿ ಬದಲಿಸಲಾಗಿದೆ. ಈಗಾಗಲೇ ವಿಟಿಯು ಆವರಣದಲ್ಲಿ ಒಂದು ಸಿಟಿ ಚಾನೆಲ್ ಹಾಗೂ ವಿಎಚ್ಎಫ್ ಚಾನೆಲ್ ಅಳವಡಿಸಲಾಗಿದೆ. ಈಗಿರುವ ಎಲ್ಲ ವಾಕಿಟಾಕಿಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎನ್ನುತ್ತಾರೆ ವಯರ್ಲೆಸ್ ವಿಭಾಗದ ಪಿಎಸ್ಐ ತಲ್ಲೂರ.
ಬೆಳಗಾವಿ: ಅಧಿವೇಶನಕ್ಕಾಗಿ ಮುಖ್ಯಮಂತ್ರಿ ಬೆಳಗಾವಿಗೆ ಕಾಲಿಟ್ಟಿರುವುದು ಈ ಭಾಗದ ಜನರಿಗೆ ಖುಷಿ ಕೊಟ್ಟರೆ ಸಂಚಾರಿ ಪೊಲೀಸರಿಗೆ ಮಾತ್ರ ತಲೆ ನೋವಾಗಿ ಪರಿಣಮಿಸಿದೆ. ಹಳೆಯ ವಾಕಿಟಾಕಿಗಳ ಸಹಾಯದಿಂದ ಇದ್ದಿದ್ದರಲ್ಲಿಯೇ ಮುಖ್ಯಮಂತ್ರಿ, ಸಚಿವರು ಹಾಗೂ ಗಣ್ಯರ ಸಂಚಾರದ ವೇಳೆ ದಟ್ಟಣೆ ತಡೆಯಲು ಹರಸಾಹಸ ಪಡುತ್ತಿರುವ ಪೊಲೀಸರು ಜೀರೋ ಟ್ರಾಫಿಕ್ಗೆ ಕಡಿವಾಣ ಹಾಕಲು ಸಾಧ್ಯವೇ ಆಗುತ್ತಿಲ್ಲ.
ಹೊಸ ಬಾಟಲಿಗೆ ಹಳೆ ಮದ್ಯ ಎಂಬಂತೆ ಸರಿಯಾಗಿ ಮಾಹಿತಿ, ಸಂದೇಶ ನೀಡದ ಡಕೋಟಾ ವಾಕಿಟಾಕಿಗಳು ಪೂರೈಕೆಯಾಗಿದ್ದರಿಂದ ಸಂಚಾರಿ ಪೊಲೀಸರಿಗೆ ಸಮಸ್ಯೆಯಾಗಿ ಕಾಡುತ್ತಿವೆ. ಸರಿಯಾದ ಫ್ರಿಕ್ವೆನ್ಸಿ ಬಾರದೇ ವಾಕಿಟಾಕಿಯಿಂದ ಸಂದೇಶ ರವಾನಿಸಲು ಪರದಾಡುತ್ತ ಕಡೆಗೆ ತಮ್ಮ ಮೊಬೈಲ್ಗಳ ಸಹಾಯದಿಂದ ಮುಂದಿನ ಪೊಲೀಸರಿಗೆ ಕರೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಚಳಿಗಾಲ ಅಧಿವೇಶನಕ್ಕಾಗಿ ಹೆಚ್ಚಿನ ವೈರ್ಲೆಸ್ಗಳ ಅಗತ್ಯ ಇರುವುದರಿಂದ 400 ವಾಕಿಟಾಕಿಗಳು ಬೇಕು ಎಂದು ಬೆಳಗಾವಿ ಮಹಾನಗರ ಕಮಿಷನರೆಟ್ದಿಂದ ಪ್ರಸ್ತಾವ ಕಳುಹಿಸಲಾಗಿತ್ತು. ಆದರೆ ಬೆಂಗಳೂರಿನಿಂದ 250 ವಾಕಿಟಾಕಿಗಳು ಮಾತ್ರ ಬಂದಿವೆ. ಅವು ಕೂಡ ಹಳೆಯದಾಗಿದ್ದರಿಂದ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಬೇಸತ್ತಿರುವ ಸಂಚಾರಿ ಪೊಲೀಸರಿಗೆ ವಾಕಿಟಾಕಿಗಳ ಸಹವಾಸವೇ ಸಾಕು ಎಂಬಂತಾಗಿದೆ.
ಸಂದೇಶ ರವಾನಿಸಲು ಹರಸಾಹಸ: ವಾಕಿಟಾಕಿ ಸಂದೇಶ ರವಾನೆಗೆ ನೆಟ್ವರ್ಕ್ ಸಮಸ್ಯೆಯಾಗುತ್ತಿದೆ. ಬೆಳಗಾವಿ ನಗರ ವ್ಯಾಪ್ತಿಯಲ್ಲಿ ಮಾತ್ರ ಸಂದೇಶ ಪ್ರಸಾರವಾಗುತ್ತಿದ್ದು, ಇನ್ನುಳಿದಂತೆ ಗಾಂಧಿ ನಗರದಿಂದ ಸ್ವಲ್ಪ ದೂರ ಹೋಗಿ ರಾಷ್ಟ್ರೀಯ ಹೆದ್ದಾರಿ ತಲುಪಿದರೆ ಫ್ರಿಕ್ವೆನ್ಸಿ ತಲುಪುತ್ತಿಲ್ಲ. ಜತೆಗೆ ಪೀರನವಾಡಿಯಿಂದ ಅತ್ತ ಮುಂದಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿವರೆಗೂ ಫ್ರಿಕ್ವೆನ್ಸಿ ಸರಿಯಾಗಿ ಹೋಗುತ್ತಿಲ್ಲ.
ವಿಟಿಯು ಗೆಸ್ಟ್ ಹೌಸ್ ತಲೆಬಿಸಿ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲು ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಹೂಡುವುದಾಗಿ ಹೇಳಿದ್ದರು. ನಂತರದಲ್ಲಿ ವಾಸ್ತು ಲೆಕ್ಕಾಚಾರದಿಂದಾಗಿ ವಾಸ್ತವ್ಯವನ್ನು ವಿಟಿಯು ಗೆಸ್ಟ್ ಹೌಸ್ಗೆ ಬದಲಾಯಿಸಲಾಯಿತು. ನಗರದಿಂದ ಸುಮಾರು 10-12 ಕಿ.ಮೀವರೆಗೆ ಸಂಚಾರ ನಿಯಂತ್ರಿಸಲು ಪೊಲೀಸರಿಗೆ ಸಾಹಸವೇ ಆಗಿದೆ. ಸುವರ್ಣ ವಿದಾನಸೌಧದಿಂದ ನೇರವಾಗಿ ವಿಟಿಯು ಗೆಸ್ಟ್ ಹೌಸ್ಗೆ ಹೋಗಲು ಅಂದಾಜು 20 ನಿಮಿಷ ಬೇಕಾಗುತ್ತದೆ. ಸರಿಯಾದ ವಾಕಿಟಾಕಿಗಳು ಇದ್ದಿದ್ದರೆ ಈ ಸಮಸ್ಯೆ ಆಗುತ್ತಿರಲಿಲ್ಲ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ಪ್ರವಾಸಿ ಮಂದಿರದಲ್ಲಿಯೇ ಸಿಎಂ ವಾಸ್ತವ್ಯ ಹೂಡಿದ್ದರೆ ಸಂಚಾರ ದಟ್ಟಣೆಯ ತಲೆಬಿಸಿಯೇ ಆಗುತ್ತಿರಲಿಲ್ಲ. ನಗರ ಪ್ರವೇಶದಿಂದ ಗಾಂಧಿ ನಗರ, ಕೋಟೆ ಕೆರೆಯಿಂದ ನೇರವಾಗಿ ಇಲ್ಲಿ ತಲುಪಬಹುದಾಗಿತ್ತು. ಟ್ರಾಫಿಕ್ ಸಮಸ್ಯೆ ಹಾಗೂ ಜನರಿಗೆ ಅನಾನುಕೂಲ ಆಗುತ್ತಿರಲಿಲ್ಲ. ವಿಟಿಯು ಗೆಸ್ಟ್ಹೌಸ್ ವರೆಗೆ ಅಲ್ಲಲ್ಲಿ ಪೊಲೀಸರು ನಿಂತು ಜನರನ್ನು ತಡೆದು ವಾದಕ್ಕಿಳಿಯುತ್ತಿರುವುದು ವಿವಾದಕ್ಕೆ ಕಾರಣವಾಗಿದೆ. ಜತೆಗೆ ರೈಲ್ವೆ ಮೇಲ್ಸೇತುವೆ ಕಾಮಗಾರಿಯಿಂದಲೂ ವಾಹನಗಳು ಕಾಂಗ್ರೆಸ್ ರಸ್ತೆ ಮೇಲೆಯೇ ಓಡಾಡುತ್ತಿವೆ. ಒಂದು ವೇಳೆ ಗಣ್ಯರ ವಾಹನ ಬಂದರೆ ಮೊದಲ ರೈಲ್ವೆ ಗೇಟ್, ಮೂರನೇ ರೈಲ್ವೆ ಗೇಟ್, ಪೀರನವಾಡಿ ಕಡೆಗೆ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.
ಜೀರೋ ಟ್ರಾಫಿಕ್ ನಿಯಂತ್ರಣ ಆಗಲಿಲ್ಲ: ವಿಐಪಿಗಳಿಗಾಗಿ ಜೀರೋ ಟ್ರಾಫಿಕ್ ಸೃಷ್ಟಿ ಮಾಡುವುದು ಬೇಡವೆಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸೂಚನೆ ನೀಡಿದ್ದರು. ಆದರೆ ಮುಖ್ಯಮಂತ್ರಿಗಳು ನಗರ ದಾಟಿಯೇ ತಮ್ಮ ವಾಸ್ತವ್ಯ ಸ್ಥಳಕ್ಕೆ ತೆರಳಬೇಕಿರುವುದು ಸಮಸ್ಯೆ ಸೃಷ್ಟಿ ಮಾಡಿದೆ. ಗ್ರಾಮೀಣ ಭಾಗದಲ್ಲಿ ಫ್ರಿಕ್ವೆನ್ಸಿ ಕಡಿಮೆ ಇರುವುದರಿಂದ ಆ ಕಡೆಯಿಂದ ಬರುವ ಸಂದೇಶ ಸರಿಯಾಗಿ ಕೇಳಿಸುತ್ತಿಲ್ಲ. ಹೀಗಾಗಿ ಸಂಚಾರಿ ಪೊಲೀಸರು ತಮ್ಮ ಮುಂದಿನ ಜಾಗದಲ್ಲಿ ಇರುವ ಪೇದೆಯ ಮೊಬೈಲ್ ನಂಬರ್ಗೆ ಕರೆ ಮಾಡಿ ಮಾಹಿತಿ ರವಾನಿಸುತ್ತಿದ್ದಾರೆ.
ಭೈರೋಬಾ ಕಾಂಬಳೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
I.N.D.I.A ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ: ಮಾಳವಿಕಾ ಅವಿನಾಶ್
ಪ್ರಧಾನಿ ಮೋದಿಯಿಂದ ಮಾತ್ರ ದೇಶ ರಕ್ಷಣೆ ಸಾಧ್ಯ: ಕುಮಠಳ್ಳಿ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
MUST WATCH
ಹೊಸ ಸೇರ್ಪಡೆ
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್