ಸಿದ್ಧಗೊಳ್ಳುತ್ತಿದೆ ಜಾನಪದ ನಿಘಂಟು
Team Udayavani, Oct 18, 2018, 3:13 PM IST
ಹಾವೇರಿ: ಜನಪದ ಭಾಷೆಯನ್ನು ಉಳಿಸುವ ದಿಸೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನಶಿಸುತ್ತಿರುವ ಜನಪದ ಭಾಷೆಯ ಶಬ್ದಗಳನ್ನು ಲಿಖಿತವಾಗಿ ದಾಖಲಿಸಿ, ಉಳಿಸುವ ಕಾರ್ಯಕ್ಕೆ ಮುಂದಾಗಿದೆ.
ಜನಪದರು ಆಡು ಭಾಷೆಯ ಪದಗಳನ್ನು ಹುಡುಕಿ ಅಕ್ಷರ ಹಾಗೂ ಅದಕ್ಕೆ ಅರ್ಥ ಕೊಡುತ್ತಿದೆ. ‘ಅ’ದಿಂದ ‘ಜ್ಞ’ ಅಕ್ಷರದವರೆಗೆ ಜನಪದರು ಬಳಸುವ ಪದಗಳನ್ನು ಸಂಗ್ರಹಿಸಿ ‘ಕರ್ನಾಟಕ ಜಾನಪದ ಭಾಷಾ ನಿಘಂಟು ಪದ ಸಂಸ್ಕೃತಿ ಕೋಶ’ ಹೆಸರಿನಲ್ಲಿ 10 ಸಂಪುಟಗಳಲ್ಲಿ ಮುದ್ರಿಸುವ ಯೋಜನೆಯನ್ನು ವಿವಿ ಹಾಕಿಕೊಂಡಿದೆ.
ಈಗಾಗಲೇ ವಿವಿ 1000 ಪುಟಗಳ ಮೂರು ಸಂಪುಟಗಳನ್ನು ಮುದ್ರಿಸಿದ್ದು, ಮೊದಲ ಸಂಪುಟದಲ್ಲಿ ಸ್ವರಾಕ್ಷರಗಳಿಂದ ಆರಂಭವಾಗುವ ಶಬ್ದಗಳ ಅರ್ಥಗಳಿವೆ. ಎರಡನೇ ಸಂಪುಟದಲ್ಲಿ ‘ಕ’ದಿಂದ ‘ಕೀ’ವರೆಗೆ, ಬಳಿಕ ‘ಕು’ದಿಂದ “ಗ’ವರೆಗಿನ ಅಕ್ಷರದಿಂದ ಆರಂಭಗೊಳ್ಳುವ ಪದಗಳನ್ನು ಅರ್ಥ ಸಹಿತ ಮುದ್ರಿಸಲಾಗಿದೆ. ಮುಂದಿನ ಅಕ್ಷರಗಳಿಂದ ಆರಂಭವಾಗುವ ಪದಗಳ ಸಂಪಾದನೆ ಮುಂದುವರಿದಿದೆ.
ಲೋಳಲೊಟ್ಟೆ (ಒಳಗೆ ಏನೂ ಇಲ್ಲದ) ಕಿವುಚು (ಹಿಸುಕು), ಕಸಿ ವಿಸಿ (ತಳ ಮಳ), ಕಾಡೆ (ಹಾಲು ಹಾಕದ ಕಷಾಯ), ಕಿಸಿ(ನಗೆಯಾಡು), ಕಾಣಕಾಣಾ(ತಿಳಿದು ತಿಳಿದೂ), ಕರಾಬು(ಕೆಟ್ಟ), ಕತ್ರಿಬುದ್ಧಿ(ವಂಚಕ ಬುದ್ಧಿ), ಕದ(ಬಾಗಿಲು), ಕದಬದ(ಕಳವಳ), ಕದಿ(ಕಳ್ಳತನ), ಕಿತ್ತಾಣ (ಮರದ ಮೇಣ), ಕದಕಟ್ಟು (ನಾಶವಾಗು), ಕದುಬೆ (ನಾರು), ಕನವು (ಅಡುಗೆ ಸೀದಿದ ವಾಸನೆ), ಕಮ್ಮಡ (ಟಂಕಸಾಲೆ) ಇಂಥ ಸಾವಿರಾರು ಪದಗಳ ಸಂಗ್ರಹ ಈ ನಿಘಂಟುಗಳಲ್ಲಿದೆ. ಈ ವಿಶೇಷ ಪದಗಳು ಯಾವ ಭಾಗದಲ್ಲಿ ಹೆಚ್ಚು ಬಳಕೆಯಲ್ಲಿದೆ ಎಂಬುದನ್ನೂ ಈ ನಿಘಂಟಿನಲ್ಲಿ ನಮೂದಿಸುವ ಪ್ರಯತ್ನ ನಡೆದಿದೆ.
ಈ ನಿಘಂಟು ಕೇವಲ ಶಬ್ಧಕ್ಕೆ ಅರ್ಥ ತಿಳಿಸುವ ಕೋಶವಾಗಿರದೆ ಶಬ್ದ ಅಥವಾ ಶಬ್ದಾರ್ಥದ ಮೂಲಕ ಒಂದು ಸಾಂಸ್ಕೃತಿಕ ಪರಂಪರೆಯನ್ನು ಕಟ್ಟಿಕೊಡುವ ವಿಶಿಷ್ಟ ಪದ ಸಂಸ್ಕೃತಿಯಾಗಿದೆ. ಹೀಗಾಗಿಯೇ ಈ ನಿಘಂಟಿಗೆ ‘ಪದ ಸಂಸ್ಕೃತಿ ಕೋಶ’ ಎಂದು ಹೆಸರಿಡಲಾಗಿದೆ. ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಗಳ ಪ್ರಭಾವ, ಇಂಗ್ಲಿಷ್ ವ್ಯಾಮೋಹದಿಂದ ಪ್ರಾದೇಶಿಕ ಭಾಷೆ ಉಳಿಸುವ ದಿಸೆಯಲ್ಲಿ ಅದನ್ನು ದಾಖಲಿಸಿ ಮುಂದಿನ ಪೀಳಿಗೆಗೂ ಜನಪದ ಪರಂಪರೆ ಕೊಂಡೊಯ್ಯುವ ಕೆಲಸವನ್ನು ವಿವಿ ಈ ನಿಘಂಟಿನ ಮೂಲಕ ಮಾಡುತ್ತಿದೆ.
ರಾಜ್ಯಾದ್ಯಂತ ಇರುವ ಆಯಾ ಜಿಲ್ಲೆಗಳಲ್ಲಿನ ಸಾಂಸ್ಕೃತಿಕ ವಲಯಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಕ್ಷೇತ್ರ ತಜ್ಞರನ್ನು ನಿಯೋಜಿಸಿ, ಜನಸಂಸ್ಕೃತಿಯ ನೆಲಮೂಲ ಸ್ಥಿತಿಗಳಿಗೂ ಸ್ಥಿತ್ಯಂತರಗಳಿಗೂ ಸಾಕ್ಷ್ಯವಾಗಿ ನಿಲ್ಲುವ ಪದಗಳನ್ನು ಅವುಗಳ ಸಾಂಸ್ಕೃತಿಕ ಅರ್ಥ ಸಹಿತ ಸಂಗ್ರಹಿಸುವ ಪ್ರಯತ್ನ ಈ ನಿಘಂಟು ಮೂಲಕ ಆಗುತ್ತಿದೆ.
ಕನ್ನಡ ಜಾನಪದ ನಿಘಂಟು ಯೋಜನೆ ಜಾನಪದ ವಿವಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಥಿಕ ನೆರವಿನೊಂದಿಗೆ ಈ ಕಾರ್ಯಸಾಕಾರಗೊಳ್ಳುತ್ತಿದೆ. ತನ್ಮೂಲಕ ಕನ್ನಡ ಭಾಷೆಯ ಜಾನಪದ ಜಗತ್ತಿನ ಅರಿವಿನ ಭಂಡಾರವನ್ನು ದಾಖಲೀಕರಿಸುವ ಕೆಲಸ ಆಗುತ್ತಿದೆ. ಕನ್ನಡದ ಹಿರಿಯ ವಿದ್ವಾಂಸರು, ಕವಿಗಳು, ಸಂಸ್ಕೃತಿ ಚಿಂತಕರೂ ಆದ ಡಾ| ರಾಮೇಗೌಡ ಸಂಪಾದಕತ್ವದಲ್ಲಿ ನಿಘಂಟು ಕಟ್ಟುವ ಕಾರ್ಯ ನಡೆಯುತ್ತಿದೆ.
ಒಟ್ಟಾರೆ ಜಾನಪದ ನಿಘಂಟಿನ ಪದ ಸಂಸ್ಕೃತಿ ಕೋಶವು ಜನಪದ ಸಂಸ್ಕೃತಿಯನ್ನು ಅರ್ಥ ಮಾಡಿಸುವ ಜತೆಗೆ ಶಿಷ್ಟಭಾಷಾ ಸಂಸ್ಕೃತಿಯೊಂದಿಗೆ ಜನಪದ ಭಾಷಾ ಸಂಸ್ಕೃತಿಯನ್ನು ಮುಖಾಮುಖಿಯಾಗಿಸುವ ವಿಶೇಷ ಕಾರ್ಯ ಮಾಡುತ್ತದೆ.
ಕನ್ನಡ ಜಾನಪದ ನಿಘಂಟು ಜನಪದ ವಿವಿಯ ಮಹತ್ವಾಕಾಂಕ್ಷಿ ಯೋಜನೆ. ಜನಪದರ ಸಾಂಸ್ಕೃತಿಕ ಹಾಗೂ ಭಾಷಿಕ ನೆಲೆಗಳನ್ನು ದೃಢಪಡಿಸಿ ಈ ವಿಶೇಷ ಸಂಪುಟಗಳನ್ನು ಸಿದ್ಧಪಡಿಸಲಾಗುತ್ತಿದೆ. ಪ್ರತಿಯೊಂದು ಪದ ಸಾಂಸ್ಕೃತಿಕ ವರ್ತುಲ ಹೊಂದಿರುತ್ತದೆ. ಇಂಥ ಪದ ಸಂಸ್ಕೃತಿಯೊಂದರ ಪರಿಪೂರ್ಣ ಕಲ್ಪನೆಯ ಸಾಕಾರ ಈ ಪದಕೋಶದ ಮೂಲಕ ಆಗಲಿದೆ. ಒಟ್ಟು 10 ಸಂಪುಟಗಳನ್ನು ಪ್ರಕಟಿಸುವ ಯೋಜನೆಯಿದ್ದು ಈಗ ಮೂರು ಸಂಪುಟಗಳಾಗಿವೆ. ಉಳಿದ ಸಂಪುಟಗಳನ್ನು ಹಂತ ಹಂತವಾಗಿ ಮುದ್ರಿಸಲಾಗುವುದು.
ಪ್ರೊ| ಡಿ.ಬಿ. ನಾಯಕ, ಕುಲಪತಿ, ಕಜಾವಿವಿ.
ಎಚ್.ಕೆ. ನಟರಾಜ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
MUST WATCH
ಹೊಸ ಸೇರ್ಪಡೆ
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ