ಗಾಂಧಿ ಸ್ತಬ್ಧ ಚಿತ್ರ ಯಾತ್ರೆಗೆ ಅದ್ದೂರಿ ಸ್ವಾಗತ
Team Udayavani, Oct 12, 2018, 4:01 PM IST
ಹಾವೇರಿ: ಮಹಾತ್ಮಾ ಗಾಂಧೀಜಿ ಅವರ 150ನೇ ಜನ್ಮ ದಿನದ ಅಂಗವಾಗಿ ರಾಜ್ಯದಲ್ಲಿ ಸಂಚರಿಸುತ್ತಿರುವ ಗಾಂಧಿ ಸ್ತಬ್ಧಚಿತ್ರ ಯಾತ್ರೆ ಗುರುವಾರ ಜಿಲ್ಲೆಗೆ ಆಗಮಿಸಿದ್ದು, ರಾಣಿಬೆನ್ನೂರು ಹಾಗೂ ಹಾವೇರಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು.
ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಕಲಾ ತಂಡಗಳ ಮೆರವಣಿಗೆಯೊಂದಿ ಗಾಂಧಿ ಸ್ತಬ್ಧಚಿತ್ರ ಯಾತ್ರೆಗೆ ಅದ್ದೂರಿ ಸ್ವಾಗತ ಕೋರಲಾಯಿತು. ದಾವಣಗೆರೆ ಪ್ರವಾಸ ಮುಗಿಸಿ ಹರಿಹರ ಮಾರ್ಗವಾಗಿ ರಾಣಿಬೆನ್ನೂರ ಪ್ರವೇಶ ಮಾಡಿದ ಸ್ತಬ್ಧಚಿತ್ರ ಯಾತ್ರೆಗೆ ಗುರುವಾರ ಬೆಳಗ್ಗೆ ಗಡಿಭಾಗದಲ್ಲಿ ಮಾಗೋಡ ಕ್ರಾಸ್ನಲ್ಲಿ ಸ್ವಾಗತಿಸಿ ನಗರದ ವಿವಿಧ ಮಾರ್ಗಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪೂರ್ಣಕುಂಭಹೊತ್ತ ನೂರಾರು ಮಹಿಳೆಯರು ಹಾಗೂ ನೂರಾರು ಶಾಲಾ ಮಕ್ಕಳು ಭಾಗವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು, ಮಹಿಳಾ ಸಂಘಟಕರು ಭಾಗವಹಿಸಿ ಮೆರವಣಿಗೆಗೆ ಮೆರಗು ತಂದರು.
ಹಾವೇರಿ ಕೆಇಬಿ ವೃತ್ತದಿಂದ ಸ್ವಾಗತ ಕೋರಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗಾಂಧಿ ವೃತ್ತದಲ್ಲಿ ಸಾರ್ವಜನಿಕ ವೀಕ್ಷಣೆಗೆ ವ್ಯವಸ್ಥೆ ಮಾಡಲಾಯಿತು. ಕಲಾತಂಡದೊಂದಿಗೆ ಮೆರವಣಿಗೆಯಲ್ಲಿ ಶಾಸಕರಾದ ನೆಹರು ಓಲೇಕಾರ ಹಾಗೂ ಸಾಹಿತಿಗಳು, ಮುಖಂಡರು, ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಹಾವೇರಿಯಲ್ಲಿ ಶಾಸಕ ನೆಹರು ಓಲೇಕಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ್, ತಹಶೀಲ್ದಾರ್ ಶಿವಕುಮಾರ, ಜಿಲ್ಲಾ ವಾರ್ತಾಧಿಕಾರಿ ಬಿ.ಆರ್. ರಂಗನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಚಿನ್ನಿಕಟ್ಟಿ ಹಾಗೂ ರಾಣಿಬೆನ್ನೂರಿನಲ್ಲಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತಹಶೀಲ್ದಾರ್ ಕುಲಕರ್ಣಿ ಮಾಲಾರ್ಪಣೆ ಮೂಲಕ ಸ್ವಾಗತಕೋರಿದರು. ಈ ಸಂದರ್ಭದಲ್ಲಿ ವಿವಿಧ ಗಣ್ಯರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು, ಶಾಲಾ ಮಕ್ಕಳು ಇದ್ದರು.
‘ಶಾಂತಿ ಮಾರ್ಗ’ ಮತ್ತು ‘ಸತ್ಯ ಮಾರ್ಗ’ ಹೆಸರಿನಲ್ಲಿ ರಾಜ್ಯಾದ್ಯಂತ ಎರಡು ತಂಡಗಳಾಗಿ ತಲಾ 15 ಜಿಲ್ಲೆಗಳಲ್ಲಿ ಸ್ತಬ್ಧಚಿತ್ರ ಯಾತ್ರೆ ಸಂಚರಿಸಿ ಗಾಂಧೀಜಿ ಅವರ ಜೀವನದ ವಿವಿಧ ಘಟನಾವಳಿಗಳು, ಸ್ವಾತಂತ್ರ್ಯ ಹೋರಾಟದ ಪ್ರತಿಕೃತಿಗಳಿಂದ ಗಮನಸೆಳೆಯುತ್ತಿರುವ ಸ್ತಬ್ಧಚಿತ್ರ, ಹಿನ್ನೆಲೆ ಸಂಗೀತವಾಗಿ ಗಾಂಧಿಪ್ರಿಯ ಗೀತೆಗಳ ಗಾಯನದೊಂದಿಗೆ ಸತ್ಯ, ಅಹಿಂಸೆ, ಭ್ರಾತೃತ್ವದ ಸಂದೇಶ ಹಾಗೂ ಗಾಂಧೀಜಿ ಅವರ ಧ್ವನಿಯ ಭಾಷಣದ ಧ್ವನಿಸುರುಳಿ ಪ್ರಸಾರ ಎಲ್ಲರ ಗಮನ ಸೆಳೆದವು.
ಹಾವೇರಿಗೆ ಆಗಮಿಸಿದ ‘ಶಾಂತಿಮಾರ್ಗ’ ಸ್ತಬ್ಧಚಿತ್ರ ಅ. 2ರಂದು ಮುಖ್ಯಮಂತ್ರಿಯವರಿಂದ ಉದ್ಘಾಟನೆಗೊಂಡು ಬೆಂಗಳೂರು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಬಳ್ಳಾರಿ, ಕೊಪ್ಪಳ, ಗದಗ, ಬಾಗಲಕೋಟೆ, ರಾಯಚೂರು, ಯಾದರಗಿರಿ, ಕಲ್ಬುರ್ಗಿ, ಬೀದರ ಜಿಲ್ಲೆ ಒಳಗೊಂಡಂತೆ 15 ಜಿಲ್ಲೆಯ 34 ತಾಲೂಕುಗಳಲ್ಲಿ ಸಂಚಾರಿಸಿ ಜಾಗೃತಿ ಮೂಡಿಸಲಿದೆ.
ರಾಣಿಬೆನ್ನೂರ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿ ನಿಮಿತ್ತ ವಾರ್ತಾ ಇಲಾಖೆ ಹಮ್ಮಿಕೊಂಡಿದ್ದ ಸ್ತಬ್ಧಚಿತ್ರ ಮೆರವಣಿಗೆ ಗುರುವಾರ ಹರಿಹರ ಮೂಲಕ ನಗರಕ್ಕೆ ಆಗಮಿಸಿತು. ನಗರದ ಹೊರ ವಲಯದ ಕಮದೊಡ ಬಳಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ವಿವಿಧ ಶಾಲೆಯ ವಿದ್ಯಾರ್ಥಿಗಳು ಹಾಗೂ ನೂರಾರು ಮಹಿಳೆಯರು ಕುಂಭ ಹೊತ್ತು ಸ್ತಬ್ಧಚಿತ್ರವನ್ನು ಬರಮಾಡಿಕೊಂಡರು. ಅನಂತರ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾವೇರಿಯತ್ತ ಬೀಳ್ಕೊಡಲಾಯಿತು. ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತಹಸೀಲ್ದಾರ್ ಸಿ.ಕೆ. ಕುಲಕರ್ಣಿ, ತಾಪಂ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಬಿಇಒ ಎನ್ ಶ್ರೀಧರ, ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ