ಕೊಡಗಿನಲ್ಲಿ ಅಬ್ಬರಿಸಿ ಇಳಿದ ಮಳೆ:ತುಂಬಿ ಹರಿದ ಕಾವೇರಿ
Team Udayavani, Jul 9, 2018, 6:40 AM IST
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶುಕ್ರವಾರ ದಿಂದ ರವಿವಾರ ಬೆಳಗ್ಗೆ ತನಕ ನಿರಂತರ ಸುರಿದ ಧಾರಾಕಾರ ಮಳೆ ಬಳಿಕ ಇಳಿಮುಖವಾಯಿತು.
ಮಳೆಯ ತೀವ್ರತೆಗೆ ನದಿ ತೊರೆಗಳು ತುಂಬಿ ಹರಿಯುತ್ತಿದ್ದು, ಹಾರಂಗಿ ಜಲಾಶಯದಿಂದ ನೀರನ್ನು ಹೊರ ಬಿಡಲಾಗಿದೆ.
ಮೃಗಶಿರ ಮಳೆಯ ಅನಂತರ ಸುರಿದ ಆದ್ರಾì ಮಳೆ ಜಿಲ್ಲೆಯಲ್ಲಿ ಕೊಂಚ ಬಿಡುವನ್ನು ನೀಡಿತ್ತಾದರೂ ಜು. 6ರಿಂದ ಆರಂಭಗೊಂಡ ಪನರ್ವಸು ಮಳೆ ಮತ್ತೆ ಜನಜೀವನದ ಮೇಲೆ ಪರಿಣಾಮ ಬೀರಿದೆ.
ಶುಕ್ರವಾರ ಮಧ್ಯಾಹ್ನದಿಂದ ಆರಂಭಗೊಂಡ ಮಳೆಯ ನಿರಂತರವಾಗಿ ಸುರಿದ ಕಾರಣ ಶನಿವಾರ ಜಿಲ್ಲೆಯ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ದಾಖಲೆಯ ಮಳೆಯಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರಿಕೆಯಾಗಿದೆ.ಈ ಭಾಗದಲ್ಲಿ ರಸ್ತೆ ಜಲಾವೃತ್ತಗೊಂಡಿರುವು ದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.ಗ್ರಾಮಸ್ಥರು ಹಾಗೂ ಪ್ರವಾಸಿಗರನ್ನು ಕರೆದೊಯ್ಯಲು ಬೋಟ್ ವ್ಯವಸ್ಥೆಯನ್ನು ಮಾಡಲಾಗಿದೆ. ತಲಕಾವೇರಿಯಲ್ಲಿ ಮಂಜು ಸಹಿತ ಮಳೆಯಾಗುತ್ತಿದೆ.
ಮಡಿಕೇರಿ ನಗರದಲ್ಲಿ ಮಳೆಯೊಂದಿಗೆ ಮೈಕೊರೆಯುವ ಚಳಿ ಇದೆ. ಮಂಗಳಾದೇವಿ ನಗರದಲ್ಲಿ ಬರೆ ಕುಸಿದಿದ್ದು, ವಿದ್ಯುತ್ ಕಂಬಗಳು ನೆಲಕಚ್ಚಿವೆ. ಉಳಿದ ಬಡಾವಣೆಗಳಲ್ಲೂ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟಾಗಿದೆ. ಓಂಕಾರೇಶ್ವರ ದೇವಾಲಯದ ಕೆರೆ ತುಂಬಿ ಹರಿಯುತ್ತಿದ್ದು, ಆವರಣ ಜಲಾವೃತಗೊಂಡಿದೆ. ಅಬ್ಬಿ ಜಲಪಾತ ತುಂಬಿ ಹರಿಯುತ್ತಿದ್ದು, ನಗರದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.
ಕಾರ್ಮಿಕರಿಗೆ ರಜೆ
ಸುಂಟಿಕೊಪ್ಪ ಹೋಬಳಿಯಲ್ಲಿ ಪನರ್ವಸು ಮಳೆಯ ಅಬ್ಬರಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಜು.6 ರಂದು ಸಂಜೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರಿಗೆ ರಜೆ ನೀಡಲಾಗಿದೆ.
ಹಟ್ಟಿಹೊಳೆಗೆ ಒಂದೇ ದಿನದಲ್ಲಿ 8 ಇಂಚು, ಮಾದಾಪುರಕ್ಕೆ 5 ಇಂಚು,ಐಗೂರಿಗೆ 7 ಇಂಚು, ಹರದೂರಿಗೆ 6 ಇಂಚು, ಸುಂಟಿಕೊಪ್ಪಕ್ಕೆ 5 ಇಂಚು, ಮಳೆಯಾಗಿದೆ. ಹಟ್ಟಿಹೊಳೆ, ಮಾದಾಪು, ಐಗೂರು, ಚೋರನಹೊಳೆ, ಹರದೂರು ಹೊಳೆ ತುಂಬಿ ಹರಿಯುತ್ತಿದ್ದು ನಾಲೆ, ತೊರೆಗಳು ತುಂಬಿ ಹರಿಯುತ್ತಿವೆ. ವಿರಾಜಪೇಟೆ ತಾಲೂಕಿನಲ್ಲೂ ಭಾರೀ ಮಳೆಯಾಗುತ್ತಿದ್ದು, ಕೆರೆ, ತೋಡುಗಳು, ಕಾವೇರಿ ಹೊಳೆಯ ನೀರಿನ ಮಟ್ಟ ಏರಿಕೆಯಾಗಿದೆ. ಕದನೂರು, ಬಿಟ್ಟಂಗಾಲ ಹಾಗೂ ಆರ್ಜಿ ಗ್ರಾಮಗಳಲ್ಲಿ ಗದ್ದೆ ಹಾಗೂ ಬಾಣೆ ಜಾಗಗಳು ಜಲಾವೃತ್ತಗೊಳ್ಳಲು ಆರಂಭಗೊಂಡಿವೆ.
ಆರ್ಜಿ ಗ್ರಾಮದಲ್ಲಿಯೂ ಭಾರೀ ಮಳೆ ಯಾಗುತ್ತಿದ್ದು ಅನ್ವಾರುಲ್ಹುದಾ ವಿದ್ಯಾ ಸಂಸ್ಥೆಯ ಮುಂಭಾಗದ ಕೊಡಗು ಕೇರಳ ರಾಜ್ಯ ಹೆದ್ದಾರಿಯ ಸೇತುವೆಯ ಮೇಲೆ ಒಂದಡಿಯಷ್ಟು ನೀರು ಹರಿದಿದ್ದರೂ ಸಂಚಾರಕ್ಕೆ ಅಡಚಣೆ ಯಾಗಿಲ್ಲ. ಬಲಮುರಿಯಲ್ಲೂ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲೂ ಧಾರಾಕಾರ ಮಳೆಯಾಗುತ್ತಿದೆ.