ಕಟ್ಟಡ ನಿರ್ಮಾಣವಾಗಿ ವರ್ಷವಾದರೂ ಉದ್ಘಾಟನೆ ಭಾಗ್ಯವಿಲ್ಲ
Team Udayavani, Jan 18, 2019, 12:30 AM IST
ವಿಶೇಷ ವರದಿ- ಕೆರಾಡಿ: ಕೆರಾಡಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ಉಪಕೇಂದ್ರದ ಕಟ್ಟಡ ನಿರ್ಮಾಣವಾಗಿ ವರ್ಷ ತುಂಬುತ್ತಿದೆ. ಆದರೆ ಗುತ್ತಿಗೆದಾರರು ಕಟ್ಟಡವನ್ನು ಇನ್ನೂ ಆರೋಗ್ಯ ಇಲಾಖೆಗೆ ಹಸ್ತಾಂತರಿಸದ ಹಿನ್ನೆಲೆಯಲ್ಲಿ ಉದ್ಘಾಟನೆ ವಿಳಂಬವಾಗಿದೆ.
ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಕೆರಾಡಿ ಗ್ರಾಮ ಕೂಡ ಬರುತ್ತಿದ್ದು, ಇಲ್ಲಿ ಈ ಹಿಂದೆ ಯಾವುದೇ ಉಪ ಕೇಂದ್ರ ಇಲ್ಲದಿರುವುದನ್ನು ಪರಿಗಣಿಸಿ, ಕೆರಾಡಿಯ ಶಾಲೆ ಹಾಗೂ ಗ್ರಾ.ಪಂ. ಕಚೇರಿ ಸಮೀಪವೇ ಹೊಸದಾಗಿ ಕಟ್ಟಡ ನಿರ್ಮಾಣವಾಗಿದೆ.
ಕಳೆದ ಫೆಬ್ರವರಿಯಲ್ಲಿ ನಿರ್ಮಾಣ ಮುಕ್ತಾಯ
ಕಳೆದ ವರ್ಷದ ಫೆಬ್ರವರಿಯಲ್ಲಿ ಅದರ ಕಾರ್ಯ ಮುಗಿದಿದೆ. ಬೆಂಗಳೂರು ಮೂಲದ ಕಂಪೆನಿಯೊಂದು ಇದರ ಗುತ್ತಿಗೆ ವಹಿಸಿಕೊಂಡಿದ್ದು, ಇನ್ನೂ ಆರೋಗ್ಯ ಇಲಾಖೆಗೆ ಹಸ್ತಾಂತರಿಸಿಲ್ಲ. ಜತೆಗೆ ಕೆಎಚ್ಎಸ್ಡಿಆರ್ಪಿಯ ಎಂಜಿನಿಯರ್ ಸರ್ಟಿಫಿಕೇಟ್ ಕೊಡದ ಕಾರಣ ಉದ್ಘಾಟನೆಗೆ ಅಡ್ಡಿಯಾಗಿದೆ.
ಕೆರಾಡಿಯಲ್ಲಿ ಈ ಉಪ ಕೇಂದ್ರದ ವ್ಯಾಪ್ತಿಯಲ್ಲಿ ಒಟ್ಟು 450ಕ್ಕೂ ಹೆಚ್ಚು ಮನೆಗಳಿದ್ದು, ಸುಮಾರು 4 ಸಾವಿರದಷ್ಟು ಜನರಿದ್ದಾರೆ. ಈ ಕೇಂದ್ರ ಆದಷ್ಟು ಶೀಘ್ರ ಆರಂಭಗೊಂಡರೆ ಇಲ್ಲಿನ ಜನರ ಸ್ವಾಸ್ಥ್ಯಕಾಪಾಡುವಲ್ಲಿ ಪ್ರಯೋಜನವಾಗಲಿದೆ. ಇಲ್ಲದಿದ್ದರೆ 15 ಕಿ.ಮೀ. ದೂರದಲ್ಲಿರುವ ವಂಡ್ಸೆಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕಾಗಿದೆ.
ಏನು ಪ್ರಯೋಜನ?
ಇದು ಉಪ ಆರೋಗ್ಯ ಕೇಂದ್ರದ ಜತೆಗೆ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ವಸತಿ ಕೇಂದ್ರವೂ ಆಗಿದೆ. ಇಲ್ಲಿ ಕಿರಿಯ ಆರೋಗ್ಯ ಸಹಾಯಕಿಯರೊಬ್ಬರು ಇದ್ದು, ಅವರು ಬೆಳಗ್ಗಿನ ಅವಧಿಯಲ್ಲಿ ಮನೆ- ಮನೆ ಭೇಟಿ ನೀಡಿದರೆ, ಮಧ್ಯಾಹ್ನ ಅನಂತರ ಇಲ್ಲಿರುವ ಕ್ಲಿನಿಕ್ನಲ್ಲಿರಬೇಕು. ಪ್ರತ್ಯೇಕ ಕ್ಲಿನಿಕ್ ಇದ್ದು, ಅಲ್ಲಿಗೆ ವಾರಕ್ಕೊಮ್ಮೆ ವಂಡ್ಸೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಬಂದು ತಪಾಸಣೆ ನಡೆಸುತ್ತಾರೆ. ತಿಂಗಳಿಗೊಮ್ಮೆ ಮಕ್ಕಳಿಗೆ ಚುಚ್ಚುಮದ್ದು ಲಸಿಕೆ, ಗರ್ಭಿಣಿಯರ ನೋಂದಣಿ ಮಾಡಲಾಗುತ್ತದೆ. ತುರ್ತು ಸಂದರ್ಭಗಳಿಗೆ ಬೇಕಾದ ಔಷಧಗಳ ಸಂಗ್ರಹವೂ ಇರುತ್ತದೆ.
ಹಸ್ತಾಂತರವಾದರೆ ಶೀಘ್ರ ಆರಂಭ
ಕಟ್ಟಡದ ಕಾಮಗಾರಿ ಮುಗಿದರೂ ಅದನ್ನು ನಮಗೆ ಗುತ್ತಿಗೆದಾರರು ಇನ್ನೂ ಹಸ್ತಾಂತರ ಮಾಡಿಲ್ಲ. ಅದಲ್ಲದೆ ಕೆಎಚ್ಎಸ್ಡಿಆರ್ಪಿಯ ಎಂಜಿನಿಯರ್ ಇದು ಪೂರ್ಣಗೊಂಡಿದ್ದು, ಬಳಕೆಗೆ ಯೋಗ್ಯ ಎಂದು ಸರ್ಟಿಫಿಕೇಟ್ ಕೊಡಬೇಕಿದ್ದು, ಅದಿನ್ನು ನೀಡದ ಕಾರಣ ಉದ್ಘಾಟನೆ ವಿಳಂಬವಾಗುತ್ತಿದೆ. ಹಸ್ತಾಂತರಿಸಿದರೆ ಶೀಘ್ರ ಈ ಉಪ ಕೇಂದ್ರ ಜನರ ಸೇವೆಗೆ ತೆರೆದುಕೊಳ್ಳಲಿದೆ.
– ಡಾ| ನಾಗಭೂಷಣ ಉಡುಪ, ತಾಲೂಕು ವೈದ್ಯಾಧಿಕಾರಿ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…