ವಿಮಾನ ಯಾನ ದರ ಏರಿಕೆ: ಆಕ್ರೋಶ
Team Udayavani, Aug 20, 2018, 9:42 AM IST
ಮಂಗಳೂರು: ಭಾರೀ ಮಳೆ ಮತ್ತು ಗುಡ್ಡ ಕುಸಿತದಿಂದಾಗಿ ಬೆಂಗಳೂರಿನಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಘಾಟಿ ರಸ್ತೆಗಳು ಸ್ಥಗಿತಗೊಂಡಿದ್ದು, ತುರ್ತು ಕಾರ್ಯ ನಿಮಿತ್ತ ಬೆಂಗಳೂರು ಕಡೆಗೆ ಸಂಚರಿಸುವವರು ವಿಮಾನದ ಮೊರೆ ಹೋಗುತ್ತಿದ್ದಾರೆ. ಇದರ ಲಾಭ ಎತ್ತಲು ಹವಣಿಸುತ್ತಿರುವ ವಿಮಾನ ಯಾನ ಕಂಪೆನಿಗಳು ಟಿಕೆಟ್ ದರವನ್ನು ಏಕಾಏಕಿ ಏರಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಾಮಾನ್ಯ ದಿನಗಳಲ್ಲಿ ಇರುವುದಕ್ಕಿಂತ ಐದು ಪಟ್ಟು ಹೆಚ್ಚಿನ ದರವನ್ನು ಆನ್ಲೈನ್ನಲ್ಲಿ ತೋರಿಸುತ್ತಿವೆ. ಪ್ರವಾಹ ಪರಿಸ್ಥಿತಿಯಲ್ಲಿ ಮಾನವೀಯತೆ ತೋರಬೇಕಿದ್ದ ವಿಮಾನ ಯಾನ ಸಂಸ್ಥೆಗಳು ಹಗಲು ದರೋಡೆ ಮಾಡು ತ್ತಿರುವುದನ್ನು ಟ್ವೀಟ್ ಮೂಲಕ ಖಂಡಿಸಿದ್ದಾರೆ. ಈ ಬಗ್ಗೆ ನಾಗರಿಕ ವಿಮಾನ ಯಾನ ಖಾತೆಯ ರಾಜ್ಯ ಸಚಿವ ಜಯಂತ್ ಸಿನ್ಹಾ ಅವರಿಗೆ ಅನೇಕ ಮಂದಿ ಟ್ವೀಟ್ ಮಾಡಿದ್ದು, ಕೂಡಲೇ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ವಿಮಾನ ಯಾನ ಸಚಿವ ಸುರೇಶ್ ಪ್ರಭು ತಮ್ಮ ಟ್ವಿಟರ್ ಖಾತೆ ಯಲ್ಲಿ ಪ್ರತಿಕ್ರಿಯಿಸಿ, ಪ್ರವಾಹ ಪೀಡಿತ ಪ್ರದೇಶಗಳಾದ ಕೇರಳ ಹಾಗೂ ಮಂಗಳೂರು ಮತ್ತು ಸಮೀಪದ ನಿಲ್ದಾಣಗಳ ಮಾರ್ಗದಲ್ಲಿ ಹಾರಾಟ ನಡೆಸುವ ವಿಮಾನಗಳ ದರ ಗಳನ್ನು ಹೆಚ್ಚಿಸಬಾರದು ಎಂದು ಆದೇಶಿಸಿದ್ದೇನೆ ಎಂದಿದ್ದಾರೆ. ಆದರೂ ವಿಮಾನ ಯಾನ ಸಂಸ್ಥೆಗಳು ದರ ಪರಿಷ್ಕರಣೆ ಮಾಡದಿರುವುದಕ್ಕೆ ಸಾರ್ವಜನಿಕರು ಖೇದ ವ್ಯಕ್ತ ಪಡಿಸಿದ್ದಾರೆ.
ಬಸ್ ದರವೂ ಹೆಚ್ಚಾಯ್ತು
ಬಸ್ ದರವೂ ಹೆಚ್ಚಳವಾಗಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುವ ಖಾಸಗಿ ಬಸ್ಗಳು 550-600 ರೂ. ದರ ವಿಧಿಸುತ್ತಿದ್ದವು. ಈಗ 800 ರೂ. ವಿಧಿಸುತ್ತಿವೆ.