ರಫೇಲ್: ಜೆಪಿಸಿ ರಚನೆಗೆ ಖಾದರ್ ಆಗ್ರಹ
Team Udayavani, Dec 26, 2018, 12:57 PM IST
ಮಂಗಳೂರು: ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿರುವ ಹಗರಣದ ಬಗ್ಗೆ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುದ್ಧ ವಿಮಾನ ಖರೀದಿಗೆ ಎಚ್ಎಎಲ್ ಕಂಪೆನಿಗೆ ನೀಡಿದ ಗುತ್ತಿಗೆಯನ್ನು ವಿದೇಶಿ ಕಂಪೆನಿಗೆ ನೀಡಿರುವ ಕಾರಣವೇನು? ಎಂಬ ಪ್ರಶ್ನೆಗಳಿಗೆ ಉತ್ತರಿಸಲು ಜಂಟಿ ಸಂಸದೀಯ ಸಮಿತಿ ರಚನೆಯಾಗಲೇ ಬೇಕು ಎಂದು ಹೇಳಿದರು.
ಕಲಾಪಕ್ಕೆ ವಿಪಕ್ಷ
ಬೆಳಗಾವಿ ಅಧಿವೇಶನ ಯಶಸ್ವಿಯಾಗಿ ನಡೆದಿದೆ. ಆದರೆ ಕೊನೆಯ ಎರಡು ದಿನಗಳಲ್ಲಿ ವಕ್ಫ್ ಆಸ್ತಿ ದುರು
ಪಯೋಗ ಹಾಗೂ ಟಿಪ್ಪು ಜಯಂತಿ ವಿಷಯಗಳಿಗೆ ಸಂಬಂಧಿಸಿದಂತೆ ವಿಪಕ್ಷಗಳು ವ್ಯರ್ಥ ಪ್ರತಿಭಟನೆ ನಡೆಸಿವೆ. ಗೊಂದಲ ಸೃಷ್ಟಿಯೇ ವಿಪಕ್ಷಗಳ ಉದ್ದೇಶವಾಗಿತ್ತು ಎಂದರು.
ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಪ್ರಕ್ರಿಯೆ ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ ಎಂದರು.
ಪೌರ ಕಾರ್ಮಿಕರಿಗೆ ನಿರ್ಮಾಣವಾಗುತ್ತಿರುವ ಮನೆ ಕಿರಿದಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮನೆ ಇಲ್ಲದವರಿಗಾಗಿ ಸರಕಾರದ ನಿಯಮಾವಳಿ ಪ್ರಕಾರವೇ ಮನೆ ನಿರ್ಮಿಸಲಾಗುತ್ತಿದೆ. ಇದರಲ್ಲಿ ಕೇಂದ್ರ
ಸರಕಾರದ ಸಬ್ಸಿಡಿಯೂ ಇರುವುದರಿಂದ ರಾಜ್ಯ ಸರಕಾರಕ್ಕೆ ಬದಲಾವಣೆ ಮಾಡಲು ಆಗುವುದಿಲ್ಲ ಎಂದರು.
ಖಾತೆ ಬಿಟ್ಟು ಕೊಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನಲ್ಲಿ ಇರುವ ಎರಡು ಖಾತೆಗಳ ಪೈಕಿ ಯಾವುದನ್ನು ಬಿಟ್ಟು ಕೊಡಬೇಕು ಎನ್ನುವ ಬಗ್ಗೆ ಚಿಂತಿಸಿಲ್ಲ. ಪಕ್ಷದ, ನಾಯಕರ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದರು.
ಗ್ರಾಮ ವಾಸ್ತವ್ಯ: ಪತ್ರಕರ್ತರಿಗೆ 5 ಸಾವಿರ ರೂ.!
ಜಿಲ್ಲಾ ಪತ್ರಕರ್ತರ ಸಂಘ ಆಯೋಜಿಸಿದ ಗ್ರಾಮ ವಾಸ್ತವ್ಯದಲ್ಲಿ ಭಾಗವಹಿಸಿದ ಪತ್ರಕರ್ತರಿಗೆ ತಲಾ 5 ಸಾವಿರದಂತೆ 30,000 ರೂ.ಗಳನ್ನು ಸಚಿವ ಖಾದರ್ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ನೀಡಿದರು. ಸಚಿವರು ನೀಡಿದ ಹಣ ಕುತ್ಲೂರು ಸರಕಾರಿ ಶಾಲೆಯ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು ಎಂದು ಇಂದಾಜೆ ತಿಳಿಸಿದರು.
ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಉಪಸ್ಥಿತರಿದ್ದರು.