ಗಾಂಧಿ ಹೆಸರಲ್ಲಿ ನಿತೀಶ್-ಲಾಲು ಪರಸ್ಪರ ಕೆಸರೆರಚಾಟ
Team Udayavani, Aug 10, 2017, 8:20 AM IST
ಪಟ್ನಾ: ಮಹಾತ್ಮಾ ಗಾಂಧಿಯ ಹೆಸರನ್ನು ಹೇಳಿಕೊಂಡೇ ಬಿಹಾರ ಸಿಎಂ ನಿತೀಶ್ ಕುಮಾರ್ ಹಾಗೂ ಆರ್ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಪರಸ್ಪರ ವಾಗ್ಧಾಳಿ ನಡೆಸಿಕೊಂಡ ಘಟನೆ ನಡೆದಿದೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತ ನಾಡಿದ ಸಿಎಂ ನಿತೀಶ್, “ಮಾನವನ ಅಗತ್ಯಗಳನ್ನು ಪೂರೈಸುವಷ್ಟು ಸಾಮರ್ಥ್ಯ ಈ ಭೂಮಿಗಿದೆ. ಆದರೆ, ದುರಾಸೆಯನ್ನಲ್ಲ ಎಂದು 1942ರ ಆ. 9ರಂದು ಭಾರತ ಬಿಟ್ಟು ತೊಲಗಿ ಎಂದು ಕರೆ ನೀಡುವಾಗ ಮಹಾತ್ಮಾ ಗಾಂಧಿ ಅವರು ಹೇಳಿದ್ದರು. ಈಗಲೂ ಹೆಚ್ಚುತ್ತಿರುವ ಇಂಥ ದುರಾಸೆಯನ್ನು ಹೋಗಲಾಡಿಸುವ ಅಗತ್ಯವಿದೆ’ ಎಂದರು. ಈ ಮೂಲಕ ಭ್ರಷ್ಟಾಚಾರ ಆರೋಪ ಹೊತ್ತಿರುವ ಲಾಲು ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು. ಇದಕ್ಕೆ ಮತ್ತೂಂದು ಕಾರ್ಯಕ್ರಮದಲ್ಲಿ ತಿರುಗೇಟು ನೀಡಿದ ಲಾಲು ಯಾದವ್, “ಗಾಂಧೀಜಿ ಅವರು ದುರಾಸೆ ಕುರಿತು ಸರಿಯಾಗಿಯೇ ಹೇಳಿದ್ದಾರೆ. ಆದರೆ, ರಾಜಕೀಯ ಲಾಲಸೆ ಎನ್ನುವುದು ಭ್ರಷ್ಟಾಚಾರಕ್ಕಿಂತಲೂ ಅಪಾಯಕಾರಿ’ ಎಂದಿದ್ದಾರೆ.