ನಿತೀಶ್ ಬಣವೇ ನಿಜವಾದ ಜೆಡಿಯು
Team Udayavani, Nov 18, 2017, 8:30 AM IST
ಹೊಸದಿಲ್ಲಿ : ಬಿಹಾರ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರದ್ದೇ ನಿಜವಾದ ಜೆಡಿಯು. ಹೀಗಾಗಿ ಅವರಿಗೇ ಬಾಣದ ಚಿಹ್ನೆ ಸೇರಬೇಕು ಎಂದು ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಹೇಳಿದೆ. ಹೀಗಾಗಿ, ಬಿಜೆಪಿ ಜತೆಗೂಡಿ ಮತ್ತೂಮ್ಮೆ ಸರಕಾರ ಮಾಡಿದ್ದಕ್ಕೆ ಮುನಿಸಿಕೊಂಡು ಜೆಡಿಯು ತೊರೆದಿದ್ದ ಮಾಜಿ ಸಚಿವ ಶರದ್ ಯಾದವ್ಗೆ ಹಿನ್ನಡೆಯಾಗಿದೆ. ಮಾತ್ರವಲ್ಲ ನಿಜವಾದ ಜೆಡಿಯು ತಮ್ಮ ಬಣದ್ದೇ ಎಂದು ಹೇಳಿಕೊಂಡ ಅವರಿಗೆ ಮುಖಭಂಗವಾಗಿದೆ.
ಆರ್ಜೆಡಿ ಮತ್ತು ಕಾಂಗ್ರೆಸ್ ಮೈತ್ರಿ ಮುರಿದು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡದ್ದು ಜೆಡಿಯು ರಾಷ್ಟ್ರೀಯ ಕಾರ್ಯಕಾರಿಣಿಯ ಸ್ಪಷ್ಟ ಉಲ್ಲಂಘನೆ ಎಂದು ಶರದ್ ಯಾದವ್ ವಾದಿಸಿದ್ದರು. ಇದಾದ ಬಳಿಕ ಶರದ್ ಯಾದವ್ ಬಣದ ಸಭೆ ನಡೆದು ಅಮರ್ಸಂಗ್ ವಸಾವಾರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಅವರು ತಮ್ಮದೇ ಬಣ ನಿಜವಾದ ಜೆಡಿಯು. ಬಾಣದ ಗುರುತಿನ ಚಿಹ್ನೆಯೂ ನಮಗೇ ಸೇರಿದ್ದು ಎಂದು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ನಿತೀಶ್ ಬಣ ಕೂಡ ಸೂಕ್ತ ದಾಖಲೆಗಳ ಸಹಿತ ಪ್ರತಿ ಮನವಿ ಸಲ್ಲಿಸಿತ್ತು. ಅದನ್ನು ಪರಿಶೀಲಿಸಿದ ಆಯೋಗ ನಿತೀಶ್ ಕುಮಾರ್ ಪರವಾಗಿ ನಿರ್ಧಾರ ಕೈಗೊಂಡಿದೆ.