ಉತ್ತರ ಭಾರತದಲ್ಲಿ ದಟ್ಟ ಮಂಜು, ರೈಲು, ವಿಮಾನ ಸೇವೆ ಬಾಧಿತ
Team Udayavani, Jan 1, 2018, 11:22 AM IST
ಹೊಸದಿಲ್ಲಿ : 2018ರ ಹೊಸ ವರ್ಷದ ಇಂದು ಸೋಮವಾರದ ಮೊದಲ ದಿನ ರಾಷ್ಟ್ರ ರಾಜಧಾನಿ ದಿಲ್ಲಿ ಮತ್ತು ಉತ್ತರ ಪ್ರದೇಶ ಸಹಿತ ಉತ್ತರ ಭಾರತದ ಹಲವು ಭಾಗಗಳ ಜನರನ್ನು ದಟ್ಟನೆಯ ಮಂಜು ಮತ್ತು ಮೈ ಕೊರೆಯುವ ಚಳಿ ಸ್ವಾಗತಿಸಿತು.
ದಿಲ್ಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು 50 ಮೀ. ಗೂ ಕಡಿಮೆ ದೂರದ ಗೋಚರತೆ ಅತ್ಯಂತ ಕ್ಷೀಣ ವಾಗಿದ್ದುದರಿಂದ ವಿಮಾನಗಳ ಹಾರಾಟವನ್ನು ಅಮಾನತುಗೊಳಿಸಲಾಯಿತು. ದಿಲ್ಲಿ ಆಗಮಿಸುವ ಮತ್ತು ನಿರ್ಗಮಿಸುವ ಸುಮಾರು 350 ವಿಮಾನಗಳ ಹಾರಾಟವನ್ನು ಪ್ರತಿಕೂಲ ವಾತಾವರಣದ ಪ್ರಯುಕ್ತ ಅಮಾನತುಗೊಳಿಸಲಾಯಿತು.
ಇದೇ ರೀತಿ ನಿಕೃಷ್ಟ ಗೋಚರತೆಯ ಕಾರಣ ರೈಲು ಸೇವೆ ಕೂಡ ತೀವ್ರವಾಗಿ ಬಾಧಿತವಾಯಿತು. 56 ರೈಲುಗಳು ವಿಳಂಬಿತವಾಗಿ ಓಡುತ್ತಿದ್ದು 20 ರೈಲುಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಯಿತು; 15 ರೈಲುಗಳನ್ನು ರದ್ದುಗೊಳಿಸಲಾಯಿತು.
ದಿಲ್ಲಿಯಲ್ಲಿಂದು ದಿನದ ಕನಿಷ್ಠ ತಾಪಮಾನ 7 ಡಿಗ್ರಿ ಸೆಲ್ಸಿಯಸ್ಗೆ ಇಳಿಯಿತು. ಗರಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಯಿತು. ಅಂತೆಯೇ ಗರಿಷ್ಠ ಮತ್ತು ಕನಿಷ್ಠ ತಾಪಮಾನ ದಿನದ ಮಟ್ಟಿಗೆ 23 ಡಿಗ್ರಿ ಸೆಲ್ಸಿಯಸ್ ಮತ್ತು 5 ಡಿಗ್ರಿ ಸೆ. ಆಜೂಬಾಜೂ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.