ಛತ್ತೀಸ್ಗಢ: ಬಸ್ ಸ್ಫೋಟಕ್ಕೆ 5 ಬಲಿ
Team Udayavani, Nov 9, 2018, 5:08 AM IST
ದಂತೇವಾಡ: ಚುನಾವಣಾ ಅಖಾಡವಾಗಿರುವ ಛತ್ತೀಸ್ಗಢದ ದಂತೇವಾಡ ಜಿಲ್ಲೆಯ ಬಚೇಲಿಯಲ್ಲಿ ನಕ್ಸಲರು ಬಸ್ಸೊಂದನ್ನು ಸ್ಫೋಟಿಸಿದ್ದು, ಸಿಐಎಸ್ಎಫ್ ಯೋಧ ಸಹಿತ ಐವರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಬಸ್ ಚಾಲಕ, ನಿರ್ವಾಹಕ ಮತ್ತು ಕ್ಲೀನರ್ ಹಾಗೂ ಓರ್ವ ಚುನಾವಣಾ ಸಿಬಂದಿ ಸೇರಿದ್ದಾರೆ. ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಮೊದಲ ಹಂತದ ಮತದಾನಕ್ಕೆ 4 ದಿನ (ನ. 12) ಬಾಕಿಯಿರುವಂತೆಯೇ ಈ ಘಟನೆ ನಡೆದಿದೆ. ಖಾಸಗಿ ಸಂಸ್ಥೆಯ ಬಸ್ಸನ್ನು ಚುನಾವಣಾ ಕರ್ತವ್ಯದಲ್ಲಿರುವ ಸಿಐಎಸ್ಎಫ್ ಸೇವೆಗಾಗಿ ಬಳಸಲಾಗುತ್ತಿತ್ತು. ಗುರುವಾರ, ಬೈಲಾಡಿಲಾ ಗಣಿಗಾರಿಕೆ ವಲಯದಲ್ಲಿ ಈ ಬಸ್ ಸಂಚರಿಸುತ್ತಿದ್ದಾಗ ನಕ್ಸಲರು ಬಾಂಬ್ ದಾಳಿ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಭದ್ರತೆಯ ಸವಾಲು: ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಶುಕ್ರವಾರ ಜಗದಾಳ್ಪುರಕ್ಕೆ ಆಗಮಿಸಲಿದ್ದು, ಅಂದು ನಡೆಯಲಿರುವ ರ್ಯಾಲಿಯ ಸ್ಥಳದಿಂದ 100 ಕಿ.ಮೀ. ದೂರದಲ್ಲಿ ಗುರುವಾರದ ಸ್ಫೋಟ ಸಂಭವಿಸಿದೆ. ಹೀಗಾಗಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.