ಹೆರಾಲ್ಡ್ ಕೇಸ್: ರಾಹುಲ್ ಸೋನಿಯಾಗೆ ಮತ್ತೆ ಸಂಕಷ್ಟ
Team Udayavani, Dec 5, 2018, 9:20 AM IST
ಹೊಸದಿಲ್ಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧದ ತೆರಿಗೆ ವಿಶ್ಲೇಷಣೆ ವರದಿ ಬಗೆಗಿನ ತನಿಖೆಯನ್ನು ಮರು ಆರಂಭಿಸಲು ಆದಾಯ ತೆರಿಗೆ ಇಲಾಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ಆದರೆ ಈ ಪ್ರಕರಣದಲ್ಲಿ ರಾಹುಲ್ ಹಾಗೂ ಸೋನಿಯಾ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ನೀಡಿಲ್ಲ. ಪ್ರಕರಣದ ವಿಚಾರಣೆಯನ್ನು ಜನವರಿ 8ಕ್ಕೆ ಮುಂದೂಡಿ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ನ್ಯಾಯಪೀಠ ಮಂಗಳವಾರ ಆದೇಶ ಹೊರಡಿಸಿದೆ.
ರಾಹುಲ್ ಹಾಗೂ ಇತರರ ವಿರುದ್ಧ ತೆರಿಗೆ ಅಸೆಸ್ಮೆಂಟ್ ಆದೇಶಗಳನ್ನು ಜಾರಿಗೊಳಿಸುವಲ್ಲಿ ಕೋರ್ಟ್ ಹಿಂಜರಿಯಬಾರದು. ಈ ಸಂಬಂಧ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಆದಾಯ ತೆರಿಗೆ ಇಲಾಖೆ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದರು. ಆದರೆ ಕಾಲಾವಕಾಶ ಕಡಿಮೆ ಇರುವುದರಿಂದಾಗಿ ಈಗ ಈ ವಿಷಯವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗದು. ಇದಕ್ಕೆ ಹೆಚ್ಚುವರಿ ಸಮಯದ ಅಗತ್ಯವಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಏನಿದು ಪ್ರಕರಣ?: 2010ರಲ್ಲಿ ಸ್ಥಾಪಿಸ ಲಾದ ಯಂಗ್ ಇಂಡಿಯಾ ಕಂಪನಿಯು, ನ್ಯಾಷನಲ್ ಹೆರಾಲ್ಡ್ ನಡೆಸುತ್ತಿದ್ದ ಎಜೆಎಲ್ ಕಂಪನಿಯಿಂದ ಎಲ್ಲ ಷೇರುಗಳನ್ನೂ ಖರೀದಿಸಿತ್ತು. ರಾಹುಲ್ಗೆ 154 ಕೋಟಿ ರೂ. ಆದಾಯ ಬಂದಿದೆ. ಆದರೆ ಆದಾಯ ತೆರಿಗೆ ಮಾಹಿತಿಯಲ್ಲಿ ಕೇವಲ 68 ಲಕ್ಷ ರೂ. ಎಂದು ನಮೂದಿಸಲಾಗಿದೆ ಎಂಬುದು ಸದ್ಯದ ಆರೋಪವಾಗಿದೆ. 2011-12ರಲ್ಲಿ ಸಲ್ಲಿಸಿದ ತೆರಿಗೆ ವಿಶ್ಲೇಷಣೆ ವರದಿಯಲ್ಲಿ ಈ ವ್ಯತ್ಯಯ ಕಂಡುಬಂದಿದ್ದರಿಂದ ಒಟ್ಟು 249.15 ಕೋಟಿ ರೂ. ಪಾವತಿಸಬೇಕಿದೆ ಎಂದು ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದೆ.