ಕೇರಳ ಹರತಾಳ ಶಾಂತಿಯುತ : ಎಲ್ಲೆಡೆ ಮುಚ್ಚಿದ್ದ ವಾಣಿಜ್ಯ ಮಳಿಗೆಗಳು
Team Udayavani, Dec 15, 2018, 7:30 AM IST
ಹೊಸದಿಲ್ಲಿ/ತಿರುವನಂತಪುರ: ಅಯ್ಯಪ್ಪ ಭಕ್ತ ವೇಣುಗೋಪಾಲ ನಾಯರ್ ಆತ್ಮಾಹುತಿ ಮಾಡಿಕೊಂಡ ಘಟನೆ ಖಂಡಿಸಿ ಕೇರಳ ಬಿಜೆಪಿ ಘಟಕ ಕರೆ ನೀಡಿದ್ದ ಹರತಾಳ ಶಾಂತಿಯುತವಾಗಿ ಮುಕ್ತಾಯವಾಗಿದೆ. 14 ಜಿಲ್ಲೆಗಳ ವ್ಯಾಪ್ತಿಯಲ್ಲಿ ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ಅಲ್ಲಲ್ಲಿ ಸಣ್ಣ ಪುಟ್ಟ ಪ್ರಮಾಣದ ಕಲ್ಲು ತೂರಾಟದ ಘಟನೆಗಳೂ ನಡೆದಿವೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಹಟಮಾರಿ ಧೋರಣೆಯಿಂದಲೇ ಈ ಅನಾಹುತವಾಗಿದೆ. ಅದಕ್ಕೆ ನ್ಯಾಯಾಂಗ ತನಿಖೆಯಾಗಬೇಕು ಎಂದು ಕೇರಳ ಬಿಜೆಪಿ ಅಧ್ಯಕ್ಷ ಪಿ.ಎಸ್.ಶ್ರೀಧರನ್ ಪಿಳ್ಳೆ ಒತ್ತಾಯಿಸಿದ್ದಾರೆ. ಪಂಪಾದಿಂದ ಅಯ್ಯಪ್ಪ ದೇಗುಲವರೆಗೆ ಕೇರಳ ಸಾರಿಗೆ ಸಂಸ್ಥೆ ಬಸ್ಗಳು ಕಾರ್ಯಾಚರಣೆ ನಡೆಸಿವೆ. ಪಾಲಕ್ಕಾಡ್ನಲ್ಲಿ ಕೆಲವು ಬಸ್ಗಳಿಗೆ ಕಲ್ಲೇಟಿನಿಂದ ಹಾನಿಯಾಗಿವೆ.
ಮೋದಿ ಟೀಕೆ: ಕೇರಳದಲ್ಲಿರುವ ಕಾಂಗ್ರೆಸ್, ಎಡಪಕ್ಷಗಳ ನೇತೃತದ ಮಾದರಿ ಬಗ್ಗೆ ಪಿಎಂ ಮೋದಿ ಟೀಕಿಸಿದ್ದಾರೆ. ಕಾಂಗ್ರೆಸ್ ಭ್ರಷ್ಟತೆಗೆ ಮಾದರಿಯಾದರೆ, ಎಡಪಕ್ಷಗಳು ಕೆಟ್ಟ ಸರಕಾರಕ್ಕೆ ಉದಾಹರಣೆ ಎಂದಿದ್ದಾರೆ. ಬಿಜೆಪಿ ಕಾರ್ಯಕರ್ತರ ಜತೆಗೆ ಮಾತನಾಡಿದ ಅವರು, ಬಿಜೆಪಿ ಕಾರ್ಯಕರ್ತರು ಅತಿರೇಕದ ಕ್ರಮ ಕೈಗೊಳ್ಳಲು ಪ್ರೋತ್ಸಾಹಿಸಬಾರದು. ಪ್ರಜಾಸತ್ತಾತ್ಮಕ ಮಾರ್ಗಗಳ ಮೂಲಕ ಧೈರ್ಯ ವಾಗಿ ಅಭಿಪ್ರಾಯ ವ್ಯಕ್ತಪಡಿಸಿ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ನಾಯರ್ ಸಾವಿನ ಪ್ರಸ್ತಾವ ಮಾಡಿದ್ದಾರೆ. ಅಯ್ಯಪ್ಪ ಭಕ್ತರ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನಕಾರಿ ಹೇಳಿಕೆ ಪ್ರಕಟಿಸಿ ಬಂಧಿತರಾಗಿದ್ದ ರೆಹಾನಾ ಫಾತಿಮಾಗೆ ಕೇರಳ ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ನೀಡಿದೆ.