ನಾಯ್ಡುರಂಥ “ಸೀನಿಯರ್’ನಾನಲ್ಲ: ಪ್ರಧಾನಿ ಮೋದಿ
Team Udayavani, Feb 11, 2019, 12:30 AM IST
ಅಮರಾವತಿ: ಲೋಕಸಭೆ ಚುನಾವಣೆಗೆ ರಣಕಹಳೆ ಊದಿರುವ ಪ್ರಧಾನಿ ಮೋದಿ ಅವರು ರವಿವಾರ ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಹುಬ್ಬಳ್ಳಿಗೆ ಆಗಮಿಸುವ ಮುನ್ನ ಆಂಧ್ರಪ್ರದೇಶದ ಗುಂಟೂರು ಮತ್ತು ತಮಿಳುನಾಡಿನ ತಿರುಪುರ್ನಲ್ಲಿ ಅವರು ರ್ಯಾಲಿ ನಡೆಸಿದ್ದಾರೆ. ಅಲ್ಲದೆ ಹಲವು ಯೋಜನೆಗಳಿಗೆ ಶಿಲಾನ್ಯಾಸಗಳನ್ನೂ ನೆರವೇರಿಸಿದ್ದಾರೆ.
ಆಂಧ್ರದಲ್ಲಿ ತಮ್ಮ ಭಾಷಣದುದ್ದಕ್ಕೂ ಸಿಎಂ ಚಂದ್ರಬಾಬು ನಾಯ್ಡು ವಿರುದ್ಧ ಕಿಡಿಕಾರಿದ್ದಾರೆ. “ನಾಯ್ಡು ಅವರು ಪ್ರತಿ ಬಾರಿಯೂ ನಾನು ನಿಮಗಿಂತ ಸೀನಿಯರ್ ಎಂದು ಹೇಳುತ್ತಿರುತ್ತಾರೆ. ಅದರಲ್ಲಿ ಯಾವ ಸಮಸ್ಯೆಯೂ ಇಲ್ಲ. ಅವರು ಸೀನಿಯರ್ ಆಗಿರುವುದಕ್ಕೆ ನಾನು ಅವರಿಗೆ ಕಿಂಚಿತ್ತೂ ಅಗೌರವ ತೋರಿಲ್ಲ. ಆದರೆ, ಬಾಬುಗಾರು (ನಾಯ್ಡು) ಯಾವುದರಲ್ಲಿ ಸೀನಿಯರ್ ಗೊತ್ತೇ? ಅವರು ಪಕ್ಷದಿಂದ ಪಕ್ಷಕ್ಕೆ ಹಾರುವಲ್ಲಿ ಸೀನಿಯರ್, ಹೊಸ ಮೈತ್ರಿಗೆ ಸೇರುವಲ್ಲಿ ಸೀನಿಯರ್, ಸ್ವಂತ ಮಾವನ (ಎನ್.ಟಿ. ರಾಮರಾವ್) ಬೆನ್ನಿಗೆ ಚೂರಿ ಹಾಕುವಲ್ಲಿ ಸೀನಿಯರ್. ಯಾರನ್ನು ಟೀಕಿಸುತ್ತಾರೋ ಅವರದ್ದೇ ಮಡಿಲಲ್ಲಿ ಕುಳಿತುಕೊಳ್ಳುವಂಥ, ಆಂಧ್ರಪ್ರದೇಶದ ಕನಸುಗಳನ್ನು ಧ್ವಂಸ ಮಾಡುವಂಥ ಸೀನಿಯರ್. ಇಂಥ ಸೀನಿಯರ್ ಆಗಲಿಕ್ಕೆ ನಾನಂತೂ ಇಷ್ಟಪಡುವುದಿಲ್ಲ’ ಎಂದು ಮೋದಿ ವ್ಯಂಗ್ಯವಾಡಿದ್ದಾರೆ.
ಅಭಿವೃದ್ಧಿಯ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ನಾಯ್ಡು ಅವರು, ಕೇಂದ್ರ ಸರಕಾರ ಒದಗಿಸಿದ ಅನುದಾನವನ್ನು ಸದ್ಬಳಕೆ ಮಾಡದೇ ಯೂಟರ್ನ್ ಹೊಡೆದರು. ವಿಶೇಷ ಸ್ಥಾನಮಾನದಲ್ಲಿ ಸಿಗುವುದ ಕ್ಕಿಂತ ಹೆಚ್ಚಿನ ಮೊತ್ತವನ್ನು ನಮ್ಮ ಸರಕಾರವು ಆಂಧ್ರಪ್ರದೇಶಕ್ಕೆ ಕಲ್ಪಿಸಿದೆ. ಆದರೆ, ಕೊಟ್ಟ ಹಣವನ್ನು ಸರಿಯಾಗಿ ಬಳಸಲಾಗದೇ ಈಗ ಉಲ್ಟಾ ಹೊಡೆಯು ತ್ತಿದ್ದಾರೆ ಎಂದೂ ಮೋದಿ ಕಿಡಿಕಾರಿದ್ದಾರೆ. ತಮ್ಮ ಭಾಷಣದಲ್ಲಿ ಮೋದಿ ಅವರು ಹಲವು ಬಾರಿ ನಾಯ್ಡು ಅವರನ್ನು “ಎನ್.ಲೋಕೇಶ್ ಅವರ ಅಪ್ಪ’ ಎಂದೇ ಸಂಭೋದಿಸುವ ಮೂಲಕ ಕಾಲೆಳೆದಿದ್ದಾರೆ.
ಭದ್ರತೆ ನಿರ್ಲಕ್ಷಿಸಿದ ಕಾಂಗ್ರೆಸ್: ಇದೇ ವೇಳೆ, ತಮಿಳುನಾಡಿನ ತಿರುಪುರ್ನ ಪೆರುಮನಲ್ಲೂರ್ನಲ್ಲಿ ನಡೆಸಿದ ರ್ಯಾಲಿಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ದೇಶದ ಭದ್ರತೆಯನ್ನೇ ನಿರ್ಲಕ್ಷಿಸಿತ್ತು ಎಂದು ಆರೋಪಿಸಿದ್ದಾರೆ. ಸಮುದ್ರದಿಂದ ಆಗಸದವರೆಗೆ ವಿವಿಧ ರಕ್ಷಣಾ ಹಗರಣಗಳಲ್ಲಿ ಕಾಂಗ್ರೆಸ್ ಭಾಗಿಯಾಯಿತು. ಹೀಗಾಗಿ, ದೀರ್ಘಾವಧಿ ಅಧಿಕಾರ ದಲ್ಲಿದ್ದರೂ ದೇಶದ ರಕ್ಷಣಾ ಪಡೆಗಳ ಆಧುನೀಕರಣಕ್ಕೆ ಅವರು ಅವಕಾಶವನ್ನೇ ನೀಡಲಿಲ್ಲ ಎಂದಿದ್ದಾರೆ.
ಟಿಡಿಪಿ ಪ್ರತಿಭಟನೆ: ಎನ್ಡಿಎಯಿಂದ ಟಿಡಿಪಿ ಹೊರಬಂದ ಬಳಿಕ ಪ್ರಧಾನಿ ಮೋದಿ ಅವರ ಮೊದಲ ಆಂಧ್ರ ಭೇಟಿ ಇದಾಗಿದ್ದು, ಅವರ ವಿರುದ್ಧ ಟಿಡಿಪಿ ಭಾರೀ ಪ್ರತಿಭಟನೆ ನಡೆಸಿದೆ. ಕಪ್ಪು ಬಾವುಟಗಳನ್ನು ಹಿಡಿದು, ಕಪ್ಪು ಬಲೂನ್ಗಳನ್ನು ಹಾರಿಬಿಟ್ಟು ಪ್ರತಿಭ ಟನೆ ನಡೆಸಲಾಗಿದೆ. ಗನ್ನಾವರಂ ಏರ್ಪೋರ್ಟ್ಗೆ ಪ್ರಧಾನಿ ಮೋದಿ ಬಂದಿಳಿದಾಗ ಅವರನ್ನು ಬರಮಾಡಿಕೊಳ್ಳಲು ಆಂಧ್ರದ ಒಬ್ಬರೇ ಒಬ್ಬ ಸಚಿವರೂ ಹೋಗಲಿಲ್ಲ.
ಪ್ರತಿಭಟನೆ ನಡುವೆ ಮೋದಿ ಪರ ಘೋಷಣೆ
ಪ್ರಧಾನಿ ಮೋದಿ ಆಗಮನ ಖಂಡಿಸಿ ರವಿವಾರ ತಿರುಪುರ್ನಲ್ಲಿ ಎಂಡಿಎಂಕೆ ಮುಖ್ಯಸ್ಥ ವೈಕೋ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ತಮಿಳುನಾಡಿನ ಹಿತಾಸಕ್ತಿಯನ್ನು ಮೋದಿ ಗಾಳಿಗೆ ತೂರುತ್ತಿದ್ದಾರೆ ಎಂದು ವೈಕೋ ತಮ್ಮ ಭಾಷಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಲೇ, ಪ್ರತಿಭಟನಕಾರರ ನಡುವೆ ಇದ್ದ ಮಹಿಳೆಯೊಬ್ಬರು ಏಕಾಏಕಿ ಮೋದಿ ಪರ ಘೋಷಣೆ ಕೂಗಿದ ಘಟನೆ ನಡೆದಿದೆ. ಕೂಡಲೇ ಪಕ್ಷದ ಕಾರ್ಯಕರ್ತರು ಆ ಮಹಿಳೆಗೆ ಘೇರಾವ್ ಹಾಕಲು ಮುಂದಾಗಿದ್ದು, ಮಧ್ಯಪ್ರವೇಶಿಸಿದ ಪೊಲೀಸರು ಮಹಿಳೆಯನ್ನು ಹೊರಗೆ ಕರೆದೊಯ್ದರು. ಆ ಮಹಿಳೆ ಬಿಜೆಪಿ ಪದಾಧಿಕಾರಿಯಾಗಿದ್ದು, ಪ್ರತಿಭಟನಕಾರರ ನಡುವೆ ನುಸುಳಿ ಘೋಷಣೆ ಕೂಗಿದ್ದಾರೆ ಎನ್ನಲಾಗಿದೆ.
ನೀವು ಪತ್ನಿಯನ್ನೇ ತೊರೆದವರು
ಗುಂಟೂರು ರ್ಯಾಲಿಯಲ್ಲಿ ತಮ್ಮನ್ನು “ಎನ್. ಲೋಕೇಶ್ ಅವರ ತಂದೆ’ ಎಂದು ಸಂಬೋಧಿಸಿದ ಪ್ರಧಾನಿ ಮೋದಿ ವಿರುದ್ಧ ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ.
ವಿಜಯವಾಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಮೋದಿಗೆ ಪ್ರತ್ಯುತ್ತರ ನೀಡುವ ಭರದಲ್ಲಿ ನಾಯ್ಡು ಅವರು, ಮೋದಿ ಪತ್ನಿಯ ಹೆಸರನ್ನು ಎಳೆದುತಂದಿದ್ದಾರೆ. “ನಾನು ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನೀವು ನಿಮ್ಮ ಭಾಷಣದಲ್ಲಿ ನನ್ನ ಮಗನ ಹೆಸರನ್ನು ಪ್ರಸ್ತಾವಿಸಿದ್ದೀರಿ. ಅದಕ್ಕೆ ನಾನು ನಿಮ್ಮ ಪತ್ನಿಯ ಬಗ್ಗೆ ಪ್ರಸ್ತಾವಿಸುತ್ತಿದ್ದೇನೆ. ನೀವು ನಿಮ್ಮ ಪತ್ನಿಯನ್ನೇ ಬಿಟ್ಟು ಬಂದವರು. ನಿಮಗೆ ಕುಟುಂಬ ವ್ಯವಸ್ಥೆಯ ಬಗ್ಗೆ ಸ್ವಲ್ಪವಾದರೂ ಗೌರವವಿದೆಯೇ?’ ಎಂದು ಪ್ರಶ್ನಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ