ಚೌಕಿದಾರರ ಜತೆ ಪಿಎಂ ಮಾತುಕತೆ
Team Udayavani, Mar 20, 2019, 12:30 AM IST
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರನ್ನು “ಚೌಕಿದಾರ್ ಚೋರ್ ಹೈ’ ಎಂದು ಹೇಳಿರುವುದನ್ನು ಬಿಜೆಪಿ ಅದನ್ನೇ ಚುನಾವಣಾ ವಿಚಾರವನ್ನಾಗಿಸಿದೆ. ಅದಕ್ಕೆ ಪೂರಕವಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ 25 ಲಕ್ಷ ಚೌಕಿದಾರರನ್ನು ಉದ್ದೇಶಿಸಿ ಮಾತನಾಡಿಲಿದ್ದಾರೆ. ಅದಕ್ಕೆ ಪೂರಕವಾಗಿ ಮಾ.31ರಂದು ದೇಶದ 500 ಭಾಗಗಳಲ್ಲಿ ಚೌಕಿದಾರರನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಲಿದ್ದಾರೆ. ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ಹೊಸದಿಲ್ಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಮೈ ಭಿ ಚೌಕಿದಾರ್ ಎಂಬುದು ಈಗ ಜನರ ಆಂದೋಲನವಾಗಿ ಬದಲಾವಣೆಯಾಗಿದೆ ಎಂದು ಹೇಳಿದ್ದಾರೆ. ಮೈಕ್ರೋಬ್ಲಾಗಿಂಗ್ ಜಾಲತಾಣ ಟ್ವಿಟರ್ನಲ್ಲಿ “ಮೈ ಭಿ ಚೌಕಿದಾರ್’ ಎನ್ನುವುದು 20 ಲಕ್ಷ ಬಾರಿ ಟ್ವೀಟ್ ಮಾಡಲಾಗಿದೆ ಎಂದಿದ್ದಾರೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ “ಮೈ ಭೀ ಚೌಕಿದಾರ್’ ಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದಿದ್ದಾರೆ.
“ಚೌಕಿದಾರ್ ಚೋರ್ ಹೈ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸುತ್ತಿರುವುದು ಸರಿಯಲ್ಲ. ಪ್ರಧಾನಿಯವರ ವಿರುದ್ಧ ಅವರು ಮಾಡುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದವುಗಳು. 2014ರ ಲೋಕಸಭೆ ಚುನಾವಣೆ ವೇಳೆಯಲ್ಲಿಯೇ ನರೇಂದ್ರ ಮೋದಿಯವರು ದೇಶದ ಪ್ರಧಾನ ಸೇವಕ ಎಂದು ಹೇಳಿಕೊಂಡಿದ್ದರು’ ಎಂದು ರವಿಶಂಕರ ಪ್ರಸಾದ್ ಹೇಳಿದ್ದಾರೆ.
28ರಿಂದ ಅಧಿಕೃತ ಪ್ರವಾಸ: ಈಗಾಗಲೇ 22 ರಾಜ್ಯಗಳ 100ಕ್ಕೂ ಅಧಿಕ ಲೋಕಸಭಾ ಕ್ಷೇತ್ರಗಳಲ್ಲಿ ಪ್ರಚಾರ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಮಾ.28ರಿಂದ ಅಧಿಕೃತವಾಗಿ ಚುನಾವಣಾ ಪ್ರಚಾರಕ್ಕೆ ಧುಮುಕಲಿದ್ದಾರೆ. ಏ.11ರಂದು ನಡೆಯುವ ಮೊದಲ ಹಂತದ ಚುನಾವಣೆಗಾಗಿ ಈ ಪ್ರಚಾರ ಸರಣಿ ಬಿಜೆಪಿಗೆ ಇಂಬು ನೀಡಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿಯ ಪ್ರಚಾರ ಯಾವ ರೀತಿಯಲ್ಲಿ ಇರಬೇಕು ಎಂದು ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್ ಸಲಹೆ ನೀಡುತ್ತಿದ್ದಾರೆ. ಮಾ.7ರ ವರೆಗೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ 130 ಲೋಕಸಭಾ ಕ್ಷೇತ್ರಗಳಲ್ಲಿ 45 ರ್ಯಾಲಿ ನಡೆಸಿದ್ದಾರೆ.
ರಾಜೀವ್ ಹಂತಕರ ಬಿಡುಗಡೆಗೆ ಕ್ರಮ
ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಎಐಎಡಿಎಂಕೆ, ಡಿಎಂಕೆ ಮಂಗಳವಾರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಎಐಎಡಿಎಂಕೆ ಪ್ರಣಾಳಿಕೆಯಲ್ಲಿ ಜಯಲಲಿತಾ ಹೆಸರಲ್ಲಿ ರಾಷ್ಟ್ರೀಯ ಬಡತನ ನಿವಾರಣೆ ಯೋಜನೆ ಜಾರಿಗೆ ತರುವುದಾಗಿ ವಾಗ್ಧಾನ ಮಾಡಿದೆ. ಇದರ ಜತೆಗೆ ರಾಜೀವ್ ಗಾಂಧಿ ಹಂತಕರನ್ನು ಬಿಡುಗಡೆ ಮಾಡಬೇಕು. ಈ ಬಗ್ಗೆ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರುವುದಾಗಿಯೂ ಭರವಸೆ ನೀಡಲಾಗಿದೆ. ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಹಿಂಸಾಚಾರ ನಡೆದ ಆರೋಪಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ಪ್ರಸ್ತಾಪ ಮಾಡುವಂತೆಯೂ ಮಾಡುತ್ತೇವೆ ಎಂದಿದೆ.
ದೇಶಾದ್ಯಂತ ವೈದ್ಯಕೀಯ ಕೋರ್ಸ್ಗಳಿಗೆ ಜಾರಿಯಲ್ಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ) ರದ್ದು, ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಮೀಸಲು ಜಾರಿ ಮಾಡುವು ವಾಗ್ಧಾನವನ್ನು ಮಾಡಿದೆ. ಇದರ ಜತೆಗೆ ವಿದ್ಯಾರ್ಥಿಗಳು ಪಡೆದುಕೊಂಡ ಶೈಕ್ಷಣಿಕ ಸಾಲ ಮನ್ನಾ ಮಾಡುವ ಬಗ್ಗೆ ಪ್ರಸ್ತಾಪಿಸಲಾಗಿದೆ. ಕೇಂದ್ರ ಮತ್ತು ತಮಿಳುನಾಡು ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹಳೆಯ ಮಾದರಿ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುವುದಾಗಿ ಪ್ರಣಾಳಿಕೆ ಹೇಳಿದೆ.
ಉ.ಪ್ರ. ವರ್ಚಸ್ಸು ವೃದ್ಧಿ
ದೇಶಾದ್ಯಂತ ಲೋಕಸಭೆ ಚುನಾವಣೆಗೆ ಗುಂಗಿನಲ್ಲಿರು ವಾಗಲೇ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರದಲ್ಲಿನ 2 ವರ್ಷಗಳನ್ನು ಪೂರೈಸಿದೆ. ಈ ಬಗ್ಗೆ ಮಂಗಳವಾರ ಸುದ್ದಿ ಗೋಷ್ಠಿ ನಡೆಸಿದ ಸಿಎಂ ಯೋಗಿ ಆದಿತ್ಯ ನಾಥ್ ಕಳೆದೆರಡು ವರ್ಷ ಗಳಲ್ಲಿ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಮತೀಯ ಗಲಭೆಯೂ ನಡೆದಿಲ್ಲ ಹಾಗೂ ಕಾನೂನು ಸುವ್ಯವಸ್ಥೆಯಲ್ಲಿ ಇತರ ರಾಜ್ಯಗಳಿಗೆ ಉತ್ತರ ಪ್ರದೇಶ ಮಾದರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ 2 ವರ್ಷದ ಸಾಧನೆಯ ವಿವರಗಳನ್ನೂ ನೀಡಿ ದ್ದಾರೆ. ಈ ಅವಧಿಯಲ್ಲಿ ಉತ್ತರ ಪ್ರದೇ ಶದ ವರ್ಚಸ್ಸು ಕೂಡ ಗಣನೀಯವಾಗಿ ಬದಲಾವಣೆ ಯಾಗಿದೆ ಎಂದು ಹೇಳಿಕೊಂಡಿದ್ದಾರೆ.
ಬದಲಾಗಿದೆ ಇಮೇಜ್: ತಾವು ಅಧಿಕಾರಕ್ಕೆ ಬಂದಾಗ ರಾಜ್ಯ ಕೊಲೆ, ಸುಲಿಗೆ ಹಾಗೂ ದಂಗೆಗಳ ಗೂಡಾಗಿತ್ತು. ಈಗ ಆ ಕಳಂಕ ತೊಡೆದು ಹಾಕಿ ಉತ್ತರ ಪ್ರದೇಶದ ವರ್ಚಸ್ಸು ವೃದ್ಧಿಸಿದೆ ಎಂದಿದ್ದಾರೆ.
ಆರೋಪ ಅವಧಿ ಮುಗಿದಿದೆ
ಭದೋಯ್ನಲ್ಲಿ ಗಂಗಾ ಯಾತ್ರೆಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರ 70 ವರ್ಷಗಳಿಂದ ಕಾಂಗ್ರೆಸ್ ದೇಶಕ್ಕೆ ಏನನ್ನೂ ಮಾಡಿಲ್ಲ ಎಂಬ ಆರೋಪಗಳ ಅವಧಿ ಮುಗಿದಿದೆ ಎಂದಿದ್ದಾರೆ. ಯೋಗಿ ಆದಿತ್ಯನಾಥ್ ನೀಡಿರುವ ತಮ್ಮ ಸರಕಾರದ ಪ್ರಗತಿಯ ಹೇಳಿಕೆಗೂ ತಿರುಗೇಟು ನೀಡಿದ ಅವರು, ” “ಅಭಿವೃದ್ಧಿಯ ಮಾತುಗಳು ಕೇವಲ ನಾಟಕೀಯವಾಗಿದೆ. ವಾಸ್ತವ ಸ್ಥಿತಿ ಬೇರೆ ಯದ್ದೇ ಇದೆ. ಅದನ್ನು ಅರಿಯಲು ಬಿಜೆಪಿ ಸಿಂಹಾಸನ ದಿಂದ ಕೆಳಗಿಳಿದು ಬರಬೇಕಿದೆ” ಎಂದರು.
ಇಟಲಿಗೆ ತೆರಳಿಯೇ ಇಲ್ಲ:
3 -4 ವರ್ಷಗಳಿಂದ ತಾವು ಇಟಲಿಗೆ ತೆರಳಿಯೇ ಇಲ್ಲ ಎಂದು ಪ್ರಿಯಾಂಕಾ ವಾದ್ರಾ ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ತಾವು ಹೋಗುವುದು ಅಲ್ಲಿರುವ ತಮ್ಮ ಅಜ್ಜಿಯನ್ನು ನೋಡಲು ಮಾತ್ರ ಎಂದು ಸ್ಪಷ್ಟನೆ ನೀಡಿದರು.
ಪ್ರತಿಪಕ್ಷ ಸ್ಥಾನಕ್ಕೆ ರಾಧಾಕೃಷ್ಣ ವಿಖೆ ಪಾಟೀಲ್ ರಾಜೀನಾಮೆ
ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್, ವಿಧಾನ ಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇತ್ತೀಚೆಗೆ, ಅವರ ಪುತ್ರ ಬಿಜೆಪಿಗೆ ಸೇರ್ಪಡೆಗೊಂಡಿದ್ದರಿಂದ ರಾಜಕೀಯ ವಲಯದಲ್ಲಿ ಅವರಿಗೆ ಇರುಸು ಮುರುಸಾಗಿತ್ತು. ಮಗನ ಬಿಜೆಪಿ ಸೇರ್ಪಡೆಯ ನೈತಿಕ ಹೊಣೆ ಹೊತ್ತು ತಾವು ಈ ನಿರ್ಧಾರ ಕೈಗೊಂಡಿರುವುದಾಗಿ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕಳುಹಿಸ ಲಾಗಿರುವ ತಮ್ಮ ರಾಜಿನಾಮೆ ಪತ್ರದಲ್ಲಿ ರಾಧಾಕೃಷ್ಣ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳೆರಡಕ್ಕೂ ಮಹಾರಾಷ್ಟ್ರ ಸಜ್ಜಾಗುತ್ತಿರುವ ಈ ಹೊತ್ತಿನಲ್ಲಿ ರಾಧಾಕೃಷ್ಣ ಅವರ ಈ ನಿರ್ಧಾರ ಕಾಂಗ್ರೆಸ್ ಪಾಳಯಕ್ಕೆ ದೊಡ್ಡ ಹಿನ್ನಡೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಸಚಿವ ಬಾಬುಲಾಲ್ ಸುಪ್ರಿಯೋಗೆ ನೋಟಿಸ್
ಕೇಂದ್ರ ಸಚಿವ, ಹಿನ್ನೆಲೆ ಗಾಯಕ ಬಾಬು ಲಾಲ್ ಸುಪ್ರಿಯೋಗೆ ಚುನಾವಣಾ ಆಯೋಗ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಎರಡು ದಿನಗಳ ಒಳಗಾಗಿ ಉತ್ತರಿಸಲು ಕಾಲಾವಕಾಶ ನೀಡಿದೆ. ಕೆಲ ದಿನಗಳ ಹಿಂದೆ ಬಿಡುಗಡೆಯಾದ ಚುನಾವಣೆಗೆ ಸಂಬಂಧಿಸಿದ ಹಾಡಿನಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಭ್ರಷ್ಟಾಚಾರದ ಆರೋಪ ಮತ್ತು ಲಘು ಧೋರಣೆಯಲ್ಲಿ ಹಾಡಿನ ಧಾಟಿ ಇದೆ ಎಂದು ಪಶ್ಚಿಮ ಬರ್ಧಮಾನ್ ಸ್ಟೂಡೆಂಟ್ಸ್ ಲೈಬ್ರೆರಿ ಕೋಆರ್ಡಿನೇಷನ್ ಕಮಿಟಿಯ ಕಾರ್ಯದರ್ಶಿ ಗೌರವ್ ಗುಪ್ತಾ ದೂರು ನೀಡಿದ್ದರು. ಅದನ್ನು ಪರಿಗಣಿಸಿರುವ ಚುನಾವಣಾ ಆಯೋಗ ನೋಟಿಸ್ ನೀಡಿದೆ.
ಆಪ್ ಮೈತ್ರಿ ಬೇಕೇ?: ಸಂದಿಗ್ಧದಲ್ಲಿ ಕಾಂಗ್ರೆಸ್
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಜತೆಗೆ ಚುನಾವಣಾ ಮೈತ್ರಿ ಏರ್ಪಡಬೇಕು ಎಂದು ಎನ್ಪಿಸಿ ಪ್ರತಿಪಾದಿಸಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ನಾಯಕರು ಮತ್ತು ಆಪ್ ನಾಯಕರ ನಡುವೆ ಮಧ್ಯಸ್ಥಿಕೆ ನಡೆಸಲು ಮಾಜಿ ಸಚಿವ ಶರದ್ ಪವಾರ್ ಉತ್ಸಾಹ ತೋರಿಸಿದ್ದಾರೆ. ಆದರೆ, ಮೈತ್ರಿಗೆ ಕಾಂಗ್ರೆಸ್ನಲ್ಲಿಯೇ ಭಿನ್ನಾಭಿಪ್ರಾಯಗಳು ವ್ಯಕ್ತವಾಗಿವೆ. ಮೈತ್ರಿ ಬಗ್ಗೆ ಇನ್ನೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ನ ಪಿ.ಸಿ.ಚಾಕೋ ಸುಳಿವು ನೀಡಿದ್ದಾರೆ. ಆದರೆ ದಿಲ್ಲಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಶೀಲಾ ದೀಕ್ಷಿತ್, ಆಪ್ ಜತೆಗಿನ ಮೈತ್ರಿ ಕಾಂಗ್ರೆಸ್ ಹಿತಾಸಕ್ತಿಗೆ ಮಾರಕವಾಗಲಿದೆ. ಆದರೆ, ವರಿಷ್ಠರ ನಿರ್ಧಾರವೇ ಅಂತಿಮ ಎಂದಿದ್ದಾರೆ. ಇದೇ ವೇಳೆ ಹೊಸದಿಲ್ಲಿ ವ್ಯಾಪ್ತಿಯಲ್ಲಿ ಮೈತ್ರಿಗೆ ಕಾಂಗ್ರೆಸ್ ಆಸಕ್ತಿ ತೋರಿಸುತ್ತಿಲ್ಲ ಎಂದು ಆಪ್ ದೂರಿದೆ.
ಮಹಾಮೈತ್ರಿಗೆ ಬಂತು ಕುತ್ತು
ಬಿಜೆಪಿಯನ್ನು ಎದುರಿಸುವ ಬಗ್ಗೆ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಪ್ರಸ್ತಾಪ ಮಾಡಿರುವ ಮಹಾ ಮೈತ್ರಿಕೂಟ ಪಶ್ಚಿಮ ಬಂಗಾಳ, ಬಿಹಾರದಲ್ಲಿ ಮುಗ್ಗರಿಸಿ ಬಿದ್ದಂತೆ ಕಾಣುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಾಗಿ ಸಿಪಿಎಂ 38 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಸಿಪಿಎಂ ನಾಯಕ ಬಿಮನ್ ಬೋಸ್ ಕೋಲ್ಕತಾದಲ್ಲಿ ಮಾತನಾಡಿ, ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಗೆ ಬುಧ ವಾರದ ವರೆಗೆ ಅವಕಾಶ ನೀಡಲಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಸ್ಪಂದಿ ಸದೇ ಇದ್ದರೆ ಬಂಗಾಳದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ.
ಬಿಹಾರದಲ್ಲಿ ಕೂಡ ಆರ್ಜೆಡಿ-ಕಾಂಗ್ರೆಸ್ ನಡುವಿನ ಪ್ರಸ್ತಾವಿತ ಮೈತ್ರಿಯೂ ಮುರಿಯುವ ಹಂತದಲ್ಲಿದೆ. 40 ಸ್ಥಾನಗಳ ಪೈಕಿ 11 ಸ್ಥಾನಗಳನ್ನು ನೀಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದರೆ, 8 ಕ್ಕಿಂತ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ಆರ್ಜೆಡಿ ಪ್ರತಿಪಾದಿಸುತ್ತಿದೆ. ಆರ್ಜೆಡಿ ನಾಯಕ ತೇಜಸ್ವಿ ಯಾದವ್, ರಾಹುಲ್ ಗಾಂಧಿ ಜತೆಗೆ ವಾರದಿಂದ ಮಾತುಕತೆ ನಡೆಸಿದ್ದರೂ ಫಲಕಾರಿಯಾಗಿಲ್ಲ.
ಟಿಕೆಟ್ ಸಿಗದ್ದಕ್ಕೆ ಸಾಮಗ್ರಿಗೆ ಬೆಂಕಿ
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ನೀಡದಿದ್ದರಿಂದ ಭ್ರಮನಿರಸನ ಗೊಂಡ ಪೆಂಡಪಲ್ಲಿ ಕ್ಷೇತ್ರದ ಸಂಸದ ಮನ್ನೆ ಕೃಷ್ಣಕ್, ಸುಮಾರು 15 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ್ದ ತಮ್ಮ ಪ್ರಚಾರ ಸಾಮಗ್ರಿಗಳಿಗೆ ಬೆಂಕಿ ಇಟ್ಟಿದ್ದಾರೆ. ಆನಂತರ, ಕಾಂಗ್ರೆಸ್ಗೆ ರಾಜಿನಾಮೆ ಸಲ್ಲಿಸಿರುವ ಅವರು, ಟಿಆರ್ಎಸ್ ಸೇರಿದ್ದಾರೆ. ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ಭರವಸೆಯ ಮೇರೆಗೆ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದರು.
ಏ.5ಕ್ಕೆ ಪಿಎಂ ನರೇಂದ್ರ ಮೋದಿ ಬಿಡುಗಡೆ
ಬಾಲಿವುಡ್ ನಟ ವಿವೇಕ್ ಒಬೆರಾಯ್ ನಟಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್ ಏ.5ರಂದು ಬಿಡುಗಡೆಯಾಗಲಿದೆ. ಈ ಹಿಂದೆ ನಿಗದಿಯಾಗಿದ್ದಂತೆ ಅದು ಏ.12ರಂದು ಬಿಡುಗಡೆಯಾಗ ಬೇಕಾ ಗಿತ್ತು. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅದು ಒಂದು ವಾರದ ಮೊದಲು ತೆರೆ ಕಾಣಲಿದೆ. ಜನರ ಒತ್ತಾಯದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು “ಪಿಎಂ ನರೇಂದ್ರ ಮೋದಿ’ ಜೀವನಚರಿತ್ರೆ ಸಿನಿಮಾದ ನಿರ್ಮಾಪಕ ಸಂದೀಪ್ ಎಸ್. ಸಿಂಗ್ ಮುಂಬೈನಲ್ಲಿ ತಿಳಿಸಿದ್ದಾರೆ. ಒಮಂಗ್ ಕುಮಾರ್ ನಿರ್ದೇಶನದ ಈ ಬಯೋಪಿಕ್ನಲ್ಲಿ ಬೊಮನ್ ಇರಾನಿ, ಮನೋಜ್ ಜೋಶಿ, ಪ್ರಶಾಂತ್ ನಾರಾಯಣ್, ಝರೀನಾ ವಹಾಬ್ ಸೇರಿದಂತೆ ಪ್ರಮುಖರು ನಟಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ರಸಗೊಬ್ಬರಗಳು ಕಳವಾಗುವದನ್ನು ತಪ್ಪಿಸಲು ಚೌಕಿದಾರನ ನೇಮಕವಾಗಿದೆಯೇ? ಜತೆಗೆ ರಫೇಲ್ ಡೀಲ್ಗೆ ಸಂಬಂಧಿಸಿದ ಕಳವನ್ನೂ ಚೌಕಿದಾರ ತಡೆದಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ.
ಅಖೀಲೇಶ್ ಯಾದವ್, ಎಸ್ಪಿ ಮುಖ್ಯಸ್ಥ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?