ಬಾಕಿ ವೇತನ ಪಾವತಿಗೆ ಒತ್ತಾಯಿಸಿ ಸಿಬ್ಬಂದಿ ಪ್ರತಿಭಟನೆ
Team Udayavani, Sep 2, 2017, 4:31 PM IST
ಜಾಲಹಳ್ಳಿ: ಬಾಕಿ ಇರುವ ಐದು ತಿಂಗಳ ವೇತನ ಪಾವತಿಸಲು ಆಗ್ರಹಿಸಿ ಗ್ರಾಪಂ ಸಿಬ್ಬಂದಿ ಗ್ರಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಐದು ತಿಂಗಳಿನಿಂದ ವೇತನ ನೀಡದ್ದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಹಲವು ಬಾರಿ ವೇತನ ಪಾವತಿಸಲು ಪಿಡಿಒಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕರ ವಸೂಲಿಯಿಂದ ಒಂಬತ್ತು ಲಕ್ಷ ಹಾಗೂ ಶಾಸನಬದ್ಧ ಅನುದಾನ ಸೇರಿ ಸುಮಾರು 12 ಲಕ್ಷ ರೂ. ಜಮಾ ಆಗಿದೆ. ಆದರೆ ಗ್ರಾಪಂ ಸಿಬ್ಬಂದಿಗೆ ವೇತನ ಪಾವತಿಸುತ್ತಿಲ್ಲ. ಬಾಕಿ ವೇತನ ಪಾವತಿಸುವವರೆಗೆ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸುವುದಾಗಿ ಸಿಬ್ಬಂದಿ ಹೇಳಿದರು.
ಮನವಿ ಸ್ವೀಕರಿಸಿದ ಗ್ರಾಪಂ ಅಧ್ಯಕ್ಷ ರಂಗನಾಥ ಮಕಾಸಿ, ಪಿಡಿಒ ಭೀಮರಾಯ ನಾಯಕ, ಮೂರು ತಿಂಗಳಲ್ಲಿ ಬಾಕಿ ವೇತನ ಪಾವತಿಸಲಾಗುತ್ತದೆ. ನಿಮ್ಮ ವೇತನ ಪಾವತಿಸುವವರೆಗೆ ಜಮೆ ಇರುವ ಹಣ ಯಾವುದಕ್ಕೂ ಬಳಸುವುದಿಲ್ಲ ಎಂದು ಭರವಸೆ ನೀಡಿದರು.
ಗ್ರಾಪಂ ನೌಕರರ ಸಂಘದ ಅಧ್ಯಕ್ಷೆ ಯಲ್ಲಮ್ಮ, ಕಾರ್ಯದರ್ಶಿ ರಂಗಪ್ಪ ನಾಯಕ, ಕರ ವಸೂಲಿಗಾರ ವೆಂಕೋಬ ಫಲಕನಮರಡಿ, ಸಿಬ್ಬಂದಿಗಳಾದ ಲಕ್ಷ್ಮೀ, ಇಕ್ಬಾಲ್ ಬಳಿಗೇರ, ರಂಗಪ್ಪ, ವಿಠ್ಠಲ ಮಾಳಿ, ವೆಂಕೋಬ, ಮಲ್ಲಪ್ಪ, ಪರಮಣ್ಣ, ವೆಂಕನಗೌಡ, ಗ್ರಾಪಂ ಸದಸ್ಯರಾದ ರಮೇಶ ಅನ್ವರಿ, ನರಸಣ್ಣ ನಾಯಕ ಇದ್ದರು.
ಗ್ರಾಪಂ ಸಭೆ ಕರೆಯಲು ಆಗ್ರಹ: ಗ್ರಾಪಂ ಸಾಮಾನ್ಯ ಸಭೆ ಕರೆಯಬೇಕು ಎಂದು ಗ್ರಾಪಂ ಸದಸ್ಯ ಖುರ್ಷಿದ್ ಪಟೇಲ
ಆಗ್ರಹಿಸಿದ್ದಾರೆ. ಕಳೆದ ಮೂರು ತಿಂಗಳಿನಿಂದ ಸಾಮಾನ್ಯ ಸಭೆ ಕರೆದಿಲ್ಲ. ಗ್ರಾಮದಲ್ಲಿನ ಕುಡಿಯುವ ನೀರು, ವಿದ್ಯುತ್ ದೀಪ, ಚರಂಡಿ ಸ್ವತ್ಛತೆ, 14ನೇ ಹಣಕಾಸಿನ ಕ್ರಿಯಾ ಯೋಜನೆ, ಇ-ಸ್ವತ್ತು ದಾಖಲಾತಿ ನೀಡುವುದು ಸೇರಿದಂತೆ ಇನ್ನಿತರ ಸಮಸ್ಯೆಗಳಿವೆ. ಈ ಬಗ್ಗೆ ಚರ್ಚೆ ಮಾಡಲು ಗ್ರಾಪಂ ಸಾಮಾನ್ಯ ಸಭೆ ಕರೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.