ಕಾಲುವೆ ಕಾಮಗಾರಿ ಆರಂಭಿಸಲು ಒತ್ತಾಯ
Team Udayavani, Aug 21, 2018, 3:33 PM IST
ಸಿರವಾರ: ತಾಲೂಕಿನ ಮಲ್ಲಟ ಗ್ರಾಮದಲ್ಲಿ ನಾರಾಯಣಪುರ ಬಲದಂಡೆ ವ್ಯಾಪ್ತಿಯ ವಡವಟ್ಟಿ ಶಾಖೆ ಉಪ ವಿತರಣೆ ಕಾಲುವೆ ಕಾಮಗಾರಿ ಆರಂಭಿಸಲು ಆಗ್ರಹಿಸಿ ಸೋಮವಾರ ಮಲ್ಲಟ, ವಡವಟ್ಟಿ, ಪಟಕಂದೊಡ್ಡಿ, ಗೊಲ್ಲದಿನ್ನಿ, ನುಗಡೋಣಿ, ಕವಿತಾಳ ಗ್ರಾಮಗಳ ರೈತರು ರಸ್ತೆತಡೆ ನಡೆಸಿದರು.
ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್ ಅವರಿಗೆ ಮನವಿ ಸಲ್ಲಿಸಿದ ರೈತರು, ವಿತರಣೆ ಕಾಲುವೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಮುಗಿದು, ಕಾಮಗಾರಿ ಪ್ರಾರಂಭಕ್ಕೆ ಚಾಲನೆ ನೀಡಿ ಹತ್ತು ವರ್ಷ ಗತಿಸಿದೆ. ಇನ್ನೂ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ. ಹಲವಾರು ಬಾರಿ ರೈತರು ಧರಣಿ ನಡೆಸಿ, ಮನವಿ ಸಲ್ಲಿಸಿದರೂ ಅಧಿಕಾರಿಗಳು ಮತ್ತು ಸರ್ಕಾರ ಗಮನಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣ ಕಾಮಗಾರಿ ಪ್ರಾರಂಭ ಮಾಡಬೇಕು.
ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ರೈತರ ಮನವಿ ಸ್ವೀಕರಿಸಿ, ಸಮಸ್ಯೆ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್, ಉಪ ವಿತರಣೆ ಕಾಲುವೆ ಕಾಮಗಾರಿಯನ್ನು ಶೀಘ್ರ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಂತರ ರೈತರು ಪ್ರತಿಭಟನೆ ಹಿಂಪಡೆದರು.
ರಸ್ತೆ ತಡೆ ಪರಿಣಾಮ ಸಿರವಾರ-ಲಿಂಗಸುಗೂರು ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ವಾಹನಗಳ ಸಂಚಾರ ಬಂದ್ ಆಗಿತ್ತು. ಮಹೇಬೂಬ್ ಖುರೇಷಿ, ಬಸವ ನಾಯಕ ಮಲ್ಲಟ, ರಮೇಶ ಭಂಡಾರಿ, ಶಿಖರೇಶ ಸ್ವಾಮಿ, ರಾಜೇಶ ಪಾಟೀಲ, ಅಶೋಕ ಪಾಟೀಲ, ಪೂಜಾರಿ ರಂಗಪ್ಪ, ಎಸ್.ಮಾರೆಪ್ಪ, ರವಿ ಚಲುವಾದಿ, ವೆಂಕಟೇಶ ಖಾನಾಪುರು, ಮಲ್ಲಟ, ವಡವಟ್ಟಿ, ಪಟಕಂದೊಡ್ಡಿ, ಗೊಲದಿನ್ನಿ, ನುಗಡೋಣಿ, ಕವಿತಾಳ ಸೇರಿ ನೂರಾರು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ನಾರಾಯಣಪುರ ಬಲದಂಡೆ ನಾಲೆ ಮುಖ್ಯ ಎಂಜಿನಿಯರ್ ಪರಶುರಾಮ, ಮಾನ್ವಿ ಸಿಪಿಐ ಚಂದ್ರಶೇಖರ ನಾಯಕ ಉಪಸ್ಥಿತರಿದ್ದರು.