ಮಕರ ಸಂಕ್ರಮಣ ಆಚರಣೆಗೆ ಸಕಲ ಸಜ್ಜು
Team Udayavani, Jan 15, 2018, 4:44 PM IST
ಮಾಗಡಿ: ಮಾಗಡಿ ತಾಲೂಕಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಜನತೆ ಸಜ್ಜಾಗಿದ್ದಾರೆ. ಬೆಲೆ ಏರಿಕೆಯ ನಡುವೆಯೂ ಹಬ್ಬದ ಖರೀದಿಯ ಭರಾಟೆಗೇನು ಕಮ್ಮಿಯಿಲ್ಲ. ಹಬ್ಬ ಎಂದ ಮೇಲೆ ವಿಶೇಷತೆ ಇದ್ದೇ ಇರುತ್ತದೆ ಎಂಬುದಕ್ಕೆ ಮಾರುಕಟ್ಟೆಯಲ್ಲಿ ತುಂಬಿರುವ ಜನರ ದಂಡೇ ಸಾಕ್ಷಿ.
ಈಗಾಗಲೇ ಎಳ್ಳು ಬೆಲ್ಲ, ಕಬ್ಬು, ಅವರೆ ಕಾಯಿ, ಕಡಲೆ ಕಾಯಿ, ಗೆಣಸು, ಖರೀದಿ ಭರಾಟೆ ಎಲ್ಲೆಡೆ ನಡೆದಿದೆ. ಈ ಬಾರಿ ಉತ್ತಮ ಮಳೆಯಾಗಿದೆ. ಆದರೂ ಅವರೆ ಕಾಯಿ ಇಳುವರಿ ಕೊರತೆ ಕಂಡು ಬಂದಿರುವುದರಿಂದ ಬಹಳ ಬೇಡಿಕೆಯಿದ್ದು, ಬೆಲೆ ಜೋರಾಗಿಯೇ ಇದೆ. ಇತ್ತ ರೈತರು ತಾವು ಪ್ರೀತಿಯಿಂದ ಸಾಕಿದ ಹೋರಿಗಳಿಗೆ ಶೃಂಗರಿಸಲು ಗೆಜ್ಜೆ, ಕೊಂಬಿನ ಕಳಶ, ಕರಿದಾರ, ಪೇಪರ್ ಹೂ, ಬಣ್ಣದ ಕಾಗದ ಖರೀದಿ ನಡೆಯುತ್ತಿದ್ದರೆ, ಮತ್ತೂಂದೆಡೆ ಮಹಿಳೆಯರು ಸಂಕ್ರಾಂತಿ ಸಂಭ್ರಮದಲ್ಲಿ ಬಗೆಬಗೆಯ ಖ್ಯಾದ ತಯಾರಿಸಲು ಹಣಿಯಾ ಗುತ್ತಿರುವುದು ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ.
ದುಬಾರಿ ಬೆಲೆ: ಅವರೆಕಾಯಿ ಬೆಲೆ ಕೇಜಿಗೆ 40 ರಿಂದ 100 ರೂ., ಕಡಲೆಕಾಯಿ 80ರಿಂದ 120 ರೂ., ಕಬ್ಬು ಜೋಡಿ ಜಲ್ಲೆಗೆ 60ರಿಂದ 80 ರೂ., ಗೆಣಸು 20 ರಿಂದ 30 ರೂ. ಇದೆ. ಹೂ ಮಾರು 50 ರಿಂದ 80 ರೂ, ಹಸುವಿನ ಗೆಜ್ಜೆ, ಕೊಂಬಿನ ಕಳಶ, ಹಗ್ಗ ಎಲ್ಲವೂ ಬೆಲೆಯಲ್ಲಿಯೂ ಜಾಸ್ತಿಯಿದೆ. ಆದರೂ ಸಂಕ್ರಾಂತಿ ಸಂಭ್ರಮಕ್ಕೆ ಗ್ರಾಹಕರ ಹಾಗೂ ರೈತರ ವ್ಯಾಪಾರ ಬಹಳ ಉತ್ಸಾಹದಿಂದಲೇ ನಡೆಯುತ್ತಿದೆ.
ಸಂಕ್ರಾಂತಿ ವೈಶಿಷ್ಟತೆ: ಸಂಕ್ರಾಂತಿ ಹಬ್ಬವು ರೈತರು ಬೆಳೆದ ಬೆಳೆಯೊಂದಿಗೆ ತಮಗೆ ಹೆಗಲು ಕೊಡುವ ಎತ್ತು ಮತ್ತು ಜಾನುವಾರುಗಳು, ಭೂಮಿ ತಾಯಿ ಹಾಗೂ ನದಿ ಹೊಳೆಯೊಂದಿಗೆ ಬೆಸೆದುಕೊಂಡಿದೆ. ಇತ್ತ ಉತ್ತರಾಯಣ ಪುಣ್ಯಕಾಲವಾಗಿರುವುರಿಂದ ಸೂರ್ಯ ಪಥ ಬದಲಿಸಿದಂತೆ ತಾವೂ ನಿಸರ್ಗದ ಪಥ ಬದಲಿಸುತ್ತಿವೆ ಎಂದರೆ ತಪ್ಪಾಗಲಾರದು. ಸಂಕ್ರಾಂತಿ ಆಚರಣೆಯ ವೈಶಿಷ್ಟವೆಂದರೆ ಎಳ್ಳುಬೆಲ್ಲ ಕೊಡುಕೊಳ್ಳುವಿಕೆ. ಎಳ್ಳಿನ ದಾನಕ್ಕೆ ಈ ಸಂಕ್ರಾಂತಿ ಹಬ್ಬದಲ್ಲಿ ವಿಶೇಷ ಮಹತ್ವ ನೀಡುತ್ತಾರೆ. ಎಳ್ಳನ್ನು ದಾನ ಮಾಡುವುದರಿಂದ ಪಾಪ ಕಳೆಯುತ್ತದೆ. ಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆ ಹಿನ್ನೆಲೆಯಲ್ಲಿ ಎಳ್ಳಿಗೆ ಮಹತ್ವ ಬಂದಿದೆ. ಎಳ್ಳು ಕಷ್ಟದ ಕಾಲಕ್ಕೆ ಎಂಬುದು ಮೂಲ ಉದ್ದೇಶವಾದರೂ ಎಳ್ಳು ತಿಂದು ಒಳ್ಳೆ ಮಾತನಾಡು ಎನ್ನುವಾಗ ಪ್ರೀತಿ, ಸ್ನೇಹದ ಸಂಕೇತವೂ ಆಗಿದೆ.
ನಿಸರ್ಗದಲ್ಲಾಗುವ ಬದಲಾವಣಿಗೆ ಜನ ಸಮುದಾಯ ತೋರುವ ಸ್ಪಂದನೆ, ರೂಪದ ಹಲವು ಆಚರಣೆಗಳಲ್ಲಿ ಸಂಕ್ರಾಂತಿ ಒಂದು. ರಾತ್ರಿಯೇ ಹೆಚ್ಚಾಗಿ, ಹಗಲು ಕಡಿಮೆ ಇರುವ ಚಳಿಗಾಲಕ್ಕಿದು ಇಳಿಗಾಲವಾಗಿದೆ.
ಸೂರ್ಯ ಒಂದು ರಾಶಿಯೊಳಗಿನ ಹೆಜ್ಜೆಯನ್ನು, ಮತ್ತೂಂದರಲ್ಲಿ ಇಡುವುದರ ಸಂಕೇತಿಕವೇ ಸಂಕ್ರಾಂತಿ
ಸಂಭ್ರಮ. 12 ರಾಶಿ ಮಾಸಗಳ ಕಾರಣ ವರ್ಷಕ್ಕೆ 12 ಸಂಕ್ರಾಂತಿಗಳೇ ಸಂಭವಿಸುತ್ತವೆ. ಆಧುನಿಕತೆ ಬೆಳೆದಂತೆ ಸಂಪ್ರದಾಯಗಳು ಕಡಿಮೆಯಾಗುತ್ತವೆ.
ಸಂಕ್ರಾಂತಿಯಂದು ರೈತರು ತಮ್ಮ ಹೋರಿಗಳಿಗೆ ಮೈತೊಳೆದು, ಬಣ್ಣ, ಬಣ್ಣಗಳಿಂದ ಶೃಂಗರಿಸಿ, ಶ್ರದ್ಧಾಭಕ್ತಿಯಿಂದ ಪೂಜಿಸಿ, ಕಿಚ್ಚಾಯಿಸುವ ಸಂಪ್ರದಾಯ ಕಡಿಮೆಯಾಗುತ್ತಿರುವುದು ನಿಜಕ್ಕೂ ವಿಪರ್ಯಾಸ. ಪೂರ್ವಿಕರು ಹಾಕಿಕೊಟ್ಟ ಸಂಪ್ರದಾಯಗಳನ್ನು ಉಳಿಸಿ, ಬೆಳಸಿಕೊಂಡು ಬರುವುದು ಇಂದಿನ ಯುವ ಪೀಳಿಗೆಯಲ್ಲಿ ಅಗತ್ಯವಿದೆ. ಸುಗ್ಗಿ ಸಂಕ್ರಾಂತಿ ಹಬ್ಬವು ರೈತರ ಪಾಲಿಗೆ ನಿತ್ಯ ಸಂತೋಷ ತರಲಿ, ದೇಶಕ್ಕೆ ಅನ್ನ ನೀಡುವ ಅನ್ನದಾತ ಬದುಕು ಸುಖವಾಗಿರಲಿ. ರೈತ ಸಮುದಾಯ ನೆಮ್ಮದಿಯಿಂದ ಇದ್ದರೆ ಇಡೀ ದೇಶವೇ ಸುಖವಾಗಿರುತ್ತದೆ ಎಂಬ ಹಿರಿಯ ಮಾತು ಸತ್ಯ. ಸತ್ಯ ನಿತ್ಯವಾಗಿರಲಿ ಎಂಬುದೇ ಎಲ್ಲರ ಆಶಯ.
ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮವೇನೋ ಇದೆ. ಈ ಹಿನ್ನೆಲೆಯಲ್ಲಿ ತಮ್ಮಲ್ಲಿರುವ ಹಣದಲ್ಲೇ ಹಬ್ಬ ಆಚರಣೆಗೆ
ಖರೀದಿ ಮಾಡುತ್ತಿದ್ದಾರೆ. ಹಬ್ಬದ ಸಾಮಗ್ರಿ ಬೆಲೆ ಜಾಸ್ತಿಯಿದೆ. ಆದರೆ ಸೊಪ್ಪು, ತರಕಾರಿ ಹೂ, ಬೆಲೆ ಕಡಿಮೆ ಇರುವುದು ಗ್ರಾಹಕರಲ್ಲಿ ಸ್ವಲ್ಪ ಸಮಾಧಾನ ತಂದಿದೆ.
●ಜಯರಾಂ, ಅವರೆಕಾಯಿ ವ್ಯಾಪಾರಿ.
ಉತ್ತಮ ಮಳೆ ಬಿದ್ದಿದ್ದು, ಸಮೃದ್ಧವಾಗಿ ಬೆಳೆ ಬಂದಿದ್ದರೂ ಬೆಲೆಯಲ್ಲಿ ರೈತರಾಗಲಿ, ವ್ಯಾಪಾರಿಗಳಾಗಲಿ ಚೌಕಾಸಿಗೆ ಬಗ್ಗುತ್ತಿಲ್ಲ. ನಿಗದಿತ ಬೆಲೆ ಕೇಳಿದಷ್ಟೇ ಕೊಟ್ಟು ಖರೀ ದಿಸಬೇಕಿದೆ. ಬೆಲೆ ಏರಿಕೆಯಿಂದ ಬೇಸತ್ತಿದ್ದೇವೆ. ಆದರೂ 2018ರ ವರ್ಷದ ಮೊದಲ ಹಬ್ಬವಾಗಿ ರುವುದರಿಂದ ಸಂಪ್ರದಾಯ ಕವಾಗಿ ಆಚರಣೆ ಮಾಡಲಾಗುತ್ತಿದೆ.
●ಸುಶೀಲಮ್ಮ, ಗೃಹಿಣಿ
ತಿರುಮಲೆ ಶ್ರೀನಿವಾಸ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ