ಫಿಕ್ಸಿಂಗ್: ಶ್ರೀಶಾಂತ್ಗೆ ಗ್ರಹಣ ಮೋಕ್ಷ
Team Udayavani, Aug 8, 2017, 11:30 AM IST
ಕೊಚ್ಚಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಕೇರಳ ವೇಗಿ ಎಸ್. ಶ್ರೀಶಾಂತ್ ಮೇಲೆ ಬಿಸಿಸಿಐ ಹೇರಿದ ಆಜೀವ ನಿಷೇಧವನ್ನು ಕೇರಳ ಹೈಕೋರ್ಟ್ ತೆರವು ಗೊಳಿಸಿದೆ.
2 ವರ್ಷದ ಹಿಂದೆ ದಿಲ್ಲಿ ಅಧೀನ ನ್ಯಾಯಾಲಯ ಕೂಡ ಶ್ರೀಶಾಂತ್ ಅವರನ್ನು ನಿರಪರಾಧಿ ಎಂದು ಘೋಷಿಸಿತ್ತು. ಆದರೂ ಬಿಸಿಸಿಐ ನಿಷೇಧ ಹಿಂದಕ್ಕೆ ತೆಗೆದುಕೊಂಡಿರಲಿಲ್ಲ. ಕೇರಳ ಕ್ರಿಕೆಟಿಗನಿಗೆ ಕ್ರಿಕೆಟ್ ಕೂಟಗಳಲ್ಲಿ ಆಡುವ ಅವಕಾಶ ನೀಡಿರಲಿಲ್ಲ. ಕೆಲವು ತಿಂಗಳ ಹಿಂದೆಯಷ್ಟೇ ಬಿಸಿಸಿಐಗೆ ಸ್ಕಾಟ್ಲೆಂಡ್ ಲೀಗ್ನಲ್ಲಿ ಆಡಲು ನಿರಾಕ್ಷೇಪಣಾ ಪತ್ರವನ್ನು ಶ್ರೀಶಾಂತ್ ಕೇಳಿದ್ದರು. ಇದನ್ನು ಬಿಸಿಸಿಐ ನಿರಾಕರಿಸಿತ್ತು. ಈ ಬೆನ್ನಲ್ಲೇ ಶ್ರೀಶಾಂತ್ ಕೇರಳ ಹೈಕೋರ್ಟ್ನಲ್ಲಿ ಬಿಸಿಸಿಐ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ನ್ಯಾಯಮೂರ್ತಿ ಮುಹಮ್ಮದ್ ಮುಷ್ತಾಕ್ ಏಕಸದಸ್ಯ ಪೀಠ ಸೋಮವಾರ ಕೈಗೆತ್ತಿ ಕೊಂಡಿತು. ಬಿಸಿಸಿಐ ಶ್ರೀಶಾಂತ್ ವಿರುದ್ಧ ಉದ್ದೇಶ ಪೂರ್ವಕವಾಗಿ ಪ್ರಕರಣ ಕೈಗೆತ್ತಿಕೊಂಡಂತಿದೆ ಎಂದು ಅಭಿ ಪ್ರಾಯಪಟ್ಟಿತು. ಮಾತ್ರವಲ್ಲ ಶ್ರೀಶಾಂತ್ ಮೇಲಿನ ನಿಷೇಧ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಸೂಚಿಸಿತು. ಈ ಎಲ್ಲ ಬೆಳವಣಿಗೆಗಳಿಗೆ ಬಿಸಿಸಿಐಗೆ ಈಗ ಹಿನ್ನಡೆಯಾಗಿದೆ.
ಸುಪ್ರೀಂ ಮೆಟ್ಟಿಲೇರಲಿದೆ ಬಿಸಿಸಿಐ?
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಸಿಸಿಐ ಮುಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ಈ ಹಿಂದೆ ದಿಲ್ಲಿ ಅಧೀನ ನ್ಯಾಯಾಲಯ ಫಿಕ್ಸಿಂಗ್ಗೆ ಸಂಬಂಧ ಪಟ್ಟಂತೆ ಶ್ರೀಶಾಂತ್ ರನ್ನು ನಿರಪರಾಧಿ ಎಂದು ಪ್ರಕಟಿಸಿತ್ತು. ಇದೀಗ ಕೇರಳ ಹೈಕೋರ್ಟ್ ಕೂಡ ಶ್ರೀಶಾಂತ್ ನಿರಪರಾಧಿ ಎಂದಿದೆ. ಇದೆಲ್ಲದರಿಂದ ಬಿಸಿಸಿಐ ತಲೆಕೆಡಿಸಿಕೊಂಡಿದೆ. ಈ ಬಗ್ಗೆ ಕಾನೂನು ತಜ್ಞರ ಜತೆ ಸಮಾಲೋಚಿಸಿ ಮುಂದುವರಿಯುವುದಾಗಿ ಬಿಸಿಸಿಐ ಹಂಗಾಮಿ ಅಧ್ಯಕ್ಷ ಸಿ.ಕೆ. ಖನ್ನಾ ತಿಳಿಸಿದ್ದಾರೆ.