ಭಾರತ ಕ್ರಿಕೆಟ್ನ ಅವಿಶ್ರಾಂತ ವೇಳಾಪಟ್ಟಿಗೆ ರವಿಶಾಸ್ತ್ರಿ ಬೇಸರ
Team Udayavani, Sep 10, 2017, 7:40 AM IST
ನವದೆಹಲಿ: ಭಾರತ ಕ್ರಿಕೆಟ್ ತಂಡದ ಬಿಡುವಿಲ್ಲದ ವೇಳಾಪಟ್ಟಿಗೆ ಮುಖ್ಯ ಕೋಚ್ ರವಿಶಾಸ್ತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಗಮನ ಹರಿಸುವಂತೆ ಆಡಳಿತಾಧಿಕಾರಿಗಳಿಗೆ ಮನವಿಯನ್ನು ಮಾಡಿದ್ದಾರೆ. ಭಾರತ ಮುಂದಿನ ದಿನಗಳಲ್ಲಿ ಒಂದರ ಹಿಂದೆ ಒಂದರಂತೆ ಟೂರ್ನಿಯನ್ನು ಆಡಬೇಕಾಗಿದೆ. ಇದರಿಂದ ಆಟಗಾರರಿಗೆ ಬಿಡುವು ಸಿಗುವುದಿಲ್ಲ. ಪರಿಣಾಮ ತೀವ್ರ ಗಾಯಗೊಳ್ಳುತ್ತಾರೆ, ಫಿಟೆ°ಸ್ ಸಮಸ್ಯೆ ಎದುರಾಗಲಿದೆ. ಹೀಗಾಗಿ ಸರಣಿಗಳ ನಡುವೆ ಹೆಚ್ಚು ವಿಶ್ರಾಂತಿ ಇರುವಂತೆ ನೋಡಿಕೊಳ್ಳಬೇಕು ಎಂದು ರವಿಶಾಸ್ತ್ರಿ ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.
ಬಿಗುವಿನ ವೇಳಾಪಟ್ಟಿ: ಇತ್ತೀಚೆಗೆ ಅಷ್ಟೇ ಭಾರತ ತಂಡ ಶ್ರೀಲಂಕಾ ಪ್ರವಾಸ ಮುಗಿಸಿಕೊಂಡು ತವರಿಗೆ ಮರಳಿದೆ. ಸೆ.17ರಿಂದ ಅ.13ರವರೆಗೆ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟಿ20 ಸರಣಿ ಆಡಬೇಕಾಗಿದೆ. ನಾಲ್ಕು ದಿನದ ಬಿಡುವಿನ ನಂತರ ನ್ಯೂಜಿಲೆಂಡ್ ವಿರುದ್ಧ ಸರಣಿ ಆರಂಭಿಸಬೇಕಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿ ನ.7ಕ್ಕೆ ಅಂತ್ಯವಾಗಲಿದೆ. ನ.15ರಿಂದ ಶ್ರೀಲಂಕಾ ತಂಡ ಭಾರತ ಪ್ರವಾಸ ಬರಲಿದೆ. ಡಿ.24ಕ್ಕೆ ಶ್ರೀಲಂಕಾ ವಿರುದ್ಧದ ಸರಣಿ ಮುಗಿಯಲಿದೆ. ಹಾಗೇ ಡಿ.28ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಸರಣಿ ಆರಂಭವಾಗಲಿದೆ. ಒಂದು ಸರಣಿಯಿಂದ ಮತ್ತೂಂದು ಸರಣಿಯ ನಡುವಿನ ಅಂತರ ಬಹಳ ಕಡಿಮೆಯಿದೆ.
ಫಿಟೆ°ಸ್ಗೆ ಭಾರೀ ಹೊಡೆತ: ಆಟಗಾರರಿಗೆ ಬಿಡುವು ಕೊಡದೆ ನಿರಂತರವಾಗಿ ಸರಣಿ ನಡೆಸಿದರೆ ಆಟಗಾರರು ಗಾಯಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಳಲಿಕೆಯ ಸಮಸ್ಯೆ ಕಂಡುಬರಲಿದೆ. ಆಟಗಾರರಿಗೆ ಫಿಟೆ°ಸ್ ಕಾಯ್ದುಕೊಳ್ಳುವುದು ಕಷ್ಟ. ಕುಟುಂಬದ ಜತೆ ಸಮಯ ಕಳೆಯಲು ಅವಕಾಶ ಸಿಗುವುದಿಲ್ಲ. ಇದರಿಂದ ಆಟಗಾರರು ಮಾನಸಿಕವಾಗಿ ಕುಗ್ಗಲಿದ್ದಾರೆ.